Asianet Suvarna News Asianet Suvarna News

Bengaluru: ಕಾನೂನನ್ನು ಸರಳೀಕರಿಸುತ್ತೇವೆ: ಸಿಎಂ ಬೊಮ್ಮಾಯಿ

*  ನಿವೇಶನ, ಮನೆ ನೀಡಲು ಅನುಕೂಲ ಆಗುವಂತೆ
*  ಲೇಔಟ್‌ ಕಾನೂನು ಬದ್ಧವಾಗಿ ನಿರ್ಮಾಣವಾಗದಿದ್ದರೆ ಸೌಕರ್ಯ ಕೊರತೆ ಹೆಚ್ಚಳ
*  1 ಲಕ್ಷ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪತ್ರ ವಿತರಣೆ
 

Need for Simplification of the Law Says CM Basavaraj Bommai grg
Author
Bengaluru, First Published Feb 1, 2022, 5:25 AM IST

ಬೆಂಗಳೂರು(ಫೆ.01):  ವಸತಿ ಎಲ್ಲರ ಮೂಲಭೂತ ಹಕ್ಕಾಗಿದ್ದು, ಬಡವರಿಗೆ ನಿವೇಶನ ಮತ್ತು ಮನೆಗಳನ್ನು ನ್ಯಾಯಸಮ್ಮತವಾಗಿ ಒದಗಿಸಲು ಕಾನೂನಿನ ಸರಳೀಕರಣದ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಎಲ್ಲರಿಗೂ ವಸತಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ರಾಜಧಾನಿ ಬೆಂಗಳೂರಿನ(Bengaluru) 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ(Housing Plan) ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಂಚಿಕೆ ಪತ್ರ ವಿತರಿಸಿ ಮಾತನಾಡಿದರು.

Tribute to Puneeth Rajkumar: ಅಪ್ಪು ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ!

ಬಡಾವಣೆಗಳು ಕಾನೂನುಬದ್ಧವಾಗಿ ಅಭಿವೃದ್ಧಿಯಾಗದಿದ್ದರೆ, ಮೂಲಭೂತ ಸೌಕರ್ಯಗಳ ಕೊರತೆಗಳಿರುವ ಕಂದಾಯ ನಿವೇಶನಗಳು ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಬಡವರಿಗೆ ಮನೆ, ನಿವೇಶನ ಪಡೆಯಲು ಸರ್ಕಾರ ಕಾನೂನಿನ ಸರಳೀಕರಣ ಮಾಡಲಿದೆ ಎಂದು ಹೇಳಿದರು.

ಡಿಸೆಂಬರ್‌ ಒಳಗೆ ಒಂದು ಲಕ್ಷ ಮನೆ ಪೂರ್ಣಗೊಳಿಸಿ:

46 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ(Beneficiaries) ಹಂಚಬೇಕು. ಉಳಿದ 64 ಸಾವಿರ ಮನೆಗಳಿಗೂ ಆಯ್ಕೆ ಪ್ರಕ್ರಿಯೆ ಪ್ರಾರಂಭ ಮಾಡಬೇಕು. ಪ್ರಾರಂಭದಲ್ಲಿ ಹಣ ನೀಡಿದರೆ ಬಡ್ಡಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಫಲಾನುಭವಿಗಳಿಂದ ವ್ಯಕ್ತವಾಗಿದ್ದು, ಕಂತಿನಲ್ಲಿ ಹಣ ಪಡೆಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಇದೇ ವೇಳೆ ತಿಳಿಸಿದರು.

ಒಂದು ಲಕ್ಷ ಮನೆಗಳನ್ನು(House) ಮುಂದಿನ ಡಿಸೆಂಬರ್‌ ಒಳಗೆ ಮುಗಿಸಬೇಕು. ಇದು ಯಶಸ್ವಿಯಾದರೆ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಭೆಯಲ್ಲಿ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌.ಅನಿಲ್‌ ಕುಮಾರ್‌, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ರವಿಶಂಕರ್‌ ಇತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ವಸತಿ ಕ್ರಾಂತಿ

ನಾಲ್ಕು ಲಕ್ಷ ಗ್ರಾಮೀಣ ಮನೆಗಳು, ನಗರ ಪ್ರದೇಶಗಳಲ್ಲಿ ಒಂದು ಲಕ್ಷ ಮನೆ, 97 ಸಾವಿರ ಮನೆಗಳನ್ನು ಕೊಳಗೇರಿಗಳಲ್ಲಿ ಪ್ರಾರಂಭ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ(Pradhan Mantri Awas Yojana) ಹೆಚ್ಚಿನ ಮನೆಗಳಾಗಲಿವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ವಸತಿ ಕ್ರಾಂತಿ ಆಗಲಿದೆ. ನಿಗದಿತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಬಡವರ ತಲೆ ಮೇಲೆ ಸೂರು ಕಲ್ಪಿಸೋಣ ಎಂದ ಮುಖ್ಯಮಂತ್ರಿಗಳು ಅವರು, ಬಡವರಿಗಾಗಿ ಸ್ಯಾಟಿಲೈಟ್‌ ಟೌನ್‌ಶಿಪ್‌ ನಿರ್ಮಿಸಲು ಯೋಜನೆ ಸಿದ್ಧಮಾಡಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ರಸ್ತೆ ಸಂಪರ್ಕ ಕಲ್ಪಿಸಬೇಕು. ಟೌನ್‌ಶಿಪ್‌ ಸ್ವಾವಲಂಬಿಯಾಗಿರುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

46,499 ಮನೆಗಳು ಪೂರ್ಣ: ಸೋಮಣ್ಣ

ಇದುವರೆಗೆ 46,499 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಚಿವ ವಿ.ಸೋಮಣ್ಣ(V Somanna) ತಿಳಿಸಿದರು.

Karnataka: ಮನೆ ನಿರ್ಮಾಣ 2 ತಿಂಗಳಲ್ಲಿ ಪೂರ್ಣಗೊಳಿಸಿ: ಸೋಮಣ್ಣ

ಈ ಪೈಕಿ ಆರು ಸಾವಿರ ಮನೆಗಳು ಶೇ.100ರಷ್ಟುಪೂರ್ಣಗೊಂಡಿವೆ. ಫಲಾನುಭವಿಗಳು ಒಟ್ಟಿಗೆ ಹಣ ಕಟ್ಟಲು ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮುಂದೆ ಬಾರದ ಕಾರಣ ಯೋಜನೆ ಸ್ವಲ್ಪ ತಡವಾಗಿದೆ. ಕಳೆದ ಆರು ತಿಂಗಳಲ್ಲಿ ಸಂಬಂಧಿ​ಸಿದ ಅ​ಧಿಕಾರಿಗಳ ಜತೆ ಮಾತುಕತೆ ನಡೆಸಿ ಬೆಂಗಳೂರಿನಾದ್ಯಂತ ಸುಮಾರು 520 ಎಕರೆ ಜಾಗ ಕೊಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದರು.

ನಗರ ಪ್ರದೇಶದಲ್ಲಿ ನಿವೇಶನ ಮತ್ತು ವಸತಿ ಪಡೆದುಕೊಳ್ಳುವುದು ಬಹಳ ಕಷ್ಟಕರ. ಇದೊಂದು ಸಾಮಾಜಿಕ ಸವಾಲು. ಯಾರಿಗಾದರೂ ಗೌರವಯುತವಾಗಿ ಬದುಕಲು ಅನ್ನ, ನೀರಿನ ಜೊತೆಗೆ ಸೂರು ಇರಲೇಬೇಕು. ಈ ಯೋಜನೆಯನ್ನು ಸಾಕಾರಗೊಳಿಸಲು ಛಲತೊಟ್ಟಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಶ್ರಮವನ್ನು ಮೆಚ್ಚಲೇಬೇಕು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

Follow Us:
Download App:
  • android
  • ios