ಎರಡು ದಶಕಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ತಸಿಕ್ತ ಅಧ್ಯಾಯ ಬರೆದಿದ್ದ ನಕ್ಸಲ್ ಚಳುವಳಿಯ ಕೊನೆಯ ಕೊಂಡಿ ಶೃಂಗೇರಿಯ ಕೋಟೆಹೊಂಡ ರವೀಂದ್ರ ಇಂದು ಜಿಲ್ಲಾಡಳಿತದೆದುರು ಶರಣಾಗತನಾಗಿದ್ದಾನೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.01): ಎರಡು ದಶಕಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ತಸಿಕ್ತ ಅಧ್ಯಾಯ ಬರೆದಿದ್ದ ನಕ್ಸಲ್ ಚಳುವಳಿಯ ಕೊನೆಯ ಕೊಂಡಿ ಶೃಂಗೇರಿಯ ಕೋಟೆಹೊಂಡ ರವೀಂದ್ರ ಇಂದು ಜಿಲ್ಲಾಡಳಿತದೆದುರು ಶರಣಾಗತನಾಗಿದ್ದಾನೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ಸಧ್ಯಕ್ಕೆ ನಕ್ಸಲ್ ಮುಕ್ತ ಎನಿಸಿಕೊಂಡಿದೆ.ನಕ್ಸಲ್ ಶರಣಾಗತಿ ಪ್ರಕ್ರಿಯೆಯ ನೋಡಲ್ ಅಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಮತ್ತು ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್ ಇತರರು ನಕ್ಸಲ್ ರವೀಂದ್ರನನ್ನು ಶೃಂಗೇರಿಯ ನೆಮ್ಮಾರಿನಿಂದ ಇಂದು ಬೆಳಗ್ಗೆ ಕರೆ ತಂದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರಕ್ಕಾಗಮಿಸಿದ ಅವರನ್ನು ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಕರೆತಂದು ಎಸ್ಪಿ ಡಾ.ವಿಕ್ರಮ ಅಮಟೆ ಅವರ ಎದುರು ಹಾಜರುಪಡಿಸಲಾಯಿತು.ನಂತರ ಅವರಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ ಎಸ್ಪಿ ಅವರು ರವೀಂದ್ರ ಅವರಿಂದ ಹೇಳಿಕೆ ದಾಖಲಿಸಿಕೊಂಡು ನಂತರ ಅವರನ್ನು ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ಅವರ ಎದುರು ಹಾಜರುಪಡಿಸಿ ಅವರಿಗೆ ಪ್ರಸ್ತವಾವನೆಯನ್ನು ಸಲ್ಲಿಸಲಾಯಿತು.
ಪ್ರಕ್ರಿಯೆಗೆ ಅಂಕಿತ: ಈ ವೇಳೆ ಜಿಲ್ಲಾಧಿಕಾರಿಗಳ ಜೊತೆಗೆ ಶರಣಾಗತಿ ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಮಾಲೋಚಿಸಿ ಪ್ರಸ್ತಾವನೆಯನ್ನು ಅಂಗೀಕರಿಸುವ ಮೂಲಕ ಶರಣಾಗತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.ನಂತರ ನಕ್ಸಲ್ ರವೀಂದ್ರನನ್ನು ಮಾದ್ಯಮದೆದುರು ಹಾಜರುಪಡಿಸಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ಕೆಲವೇ ನಿಮಿಷದಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಇಷ್ಟೂ ಪ್ರಕ್ರಿಯೆಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಪೂರ್ಣಗೊಳಿಸಲಾಯಿತು.
ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಕ್ಲಬ್ಗಳು ನಿರ್ಣಾಯಕ: ರಾಜೇಂದ್ರ ಬೆಳಗಾಂವಕರ
ನನ್ನ ಬಳಿ ಶಸ್ತ್ರಾಸ್ತ್ರ ಇರಲಿಲ್ಲ: ನನ್ನ ಮೇಲೆ ಯಾರದ್ದೂ ಒತ್ತಡ ಇರಲಿಲ್ಲ. ಸ್ವಯಿಚ್ಛೆಯಿಂದಲೇ ಶರಣಾಗತನಾಗುತ್ತಿದ್ದೇನೆ ಎಂದು ಶನಿವಾರ ಜಿಲ್ಲಾಡಳಿತದೆರು ಶರಣಾದ ನಕ್ಸಲ್ ಕೋಟೆಹೊಂಡ ಕೋಟೆಹೊಂಡ ತಿಳಿಸಿದರು.ಇಷ್ಟು ದಿನ ಕಾಡಿನಲ್ಲೆ ಇದ್ದೆ. ನನ್ನ ಬಳಿ ಆಯುಧ ಇರಲಿಲ್ಲ ಎಂದು ತಿಳಿಸಿದ ಆತ, ಜಿಲ್ಲಾಡಳಿತದ ಎದುರು ಕೆಲವು ಬೇಡಿಕೆಗಳನ್ನು ಇರಿಸಿದ್ದೇನೆ ಈಡೇರಿಸುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.ನಮ್ಮ ಊರಲ್ಲಿ ಸರಿಯಾದ ರಸ್ತೆ ಇಲ್ಲ. ಹಕ್ಕು ಪತ್ರಗಳು ಇನ್ನೂ ಸಿಕ್ಕಿಲ್ಲ. ಅದನ್ನು ಕೊಡಿಸಿಕೊಡಬೇಕು. ಕಾಡುತ್ಪನ್ನಗಳನ್ನು ತೆಗೆಯಲು ಅನುಮತಿ ನೀಡಬೇಕು. ಭೂ ರಹಿತರು ತುಂಬಾ ಜನರಿದ್ದಾರೆ ಅವರಿಗೆ ಹಕ್ಕುಪತ್ರ ಕೊಡಿಸಿಕೊಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನ್ಯಾಯಾಧೀಶರೆದು ಹಾಜರು: ಇಂದು ಆರೋಗ್ಯ ತಪಾಸಣೆಗೊಳಪಡಿಸಿ ರವೀಂದ್ರನನ್ನು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ತಿಳಿಸಿದ ಎಸ್ಪಿ ಡಾ.ವಿಕ್ರಮ ಅಮಟೆ ಅವರು, ನಂತರ ಆತನನ್ನು ವಶಕ್ಕೆ ಪಡೆದು ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆಗೊಳಪಡಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಆಯುಧದ ಬಗ್ಗೆ ತನಿಖೆ: ರವೀಂದ್ರ ಶರಣಾಗುವಾಗ ಯಾವುದೇ ಆಯಧವನ್ನು ಹಾಜರುಪಡಿಸಿಲ್ಲ. ಆತ ಶಸ್ತ್ರಸ್ತಗಳನ್ನು ಹೊಂದಿದ್ದನೆ, ಅವು ಎಲ್ಲಿವೆ ಎನ್ನುವ ಬಗ್ಗೆಯೂ ವಿಚಾರಣೆ ನಡೆಸಿ ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ, ಸುಧಾಕರ್ರನ್ನು ವಿಶ್ವಾಸಕ್ಕೆ ಪಡೆವ ಪ್ರಶ್ನೆಯೇ ಇಲ್ಲ: ವಿಜಯೇಂದ್ರ
ಒಟ್ಟು 27 ಪ್ರಕರಣ: 2007 ರಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಪ್ರಕರಣಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ಹಾಗೂ ಹೊರ ರಾಜ್ಯಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.ಜಿಲ್ಲಾ ಮಟ್ಟದ ನಕ್ಸಲ್ ಶರಣಾಗತಿ ಸಮಿತಿ ಅಧ್ಯಕ್ಷರೂ, ಜಿಲ್ಲಾಧಿಕಾರಿಗಳೂ ಆದ ಸಿ.ಎನ್.ಮೀನಾ ನಾಗರಾಜು, ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಶರಣಾಗತಿ ಸಮಿತಿ ಸದಸ್ಯರಾದ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರೀಕ ಹೋರಾ ಸಮಿತಿ ಸದಸ್ಯರುಗಳಾದ ಕೆ.ಎಲ್.ಅಶೋಕ್ ನಗರಗೆರೆ ರಮೇಶ್, ವಿ.ಎಸ್.ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.
