Asianet Suvarna News Asianet Suvarna News

Vijayapura: 8 ವರ್ಷಗಳಿಂದ ನಡೆದಿಲ್ಲ ನವರಸಪುರ ಉತ್ಸವ, ಸಿದ್ದೇಶ್ವರ ಶ್ರೀ ಕಾಲವಾದ ಹಿನ್ನೆಲೆ ಈ ಬಾರಿಯು ಡೌಟು

ನಡೆದಾಡುವ ದೇವರು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು‌ ಲಿಂಗೈಕ್ಯ ಹಿನ್ನೆಲೆಯಲ್ಲಿ ಐತಿಹಾಸಿಕ ನಗರಿಯ ಸಂಸ್ಕೃತಿಗಳ ಹಬ್ಬ ನವರಸಪುರ ಉತ್ಸವ ಆಚರಣೆ ಈ ಬಾರಿ ನಡೆಯುವದು ಅನುಮಾನ ವಾಗಿದೆ. ಅನೇಕ ಕಾರಣದಿಂದ  ಕಳೆದ 8 ವರ್ಷಗಳಿಂದ‌ ನವರಸಪುರ ಉತ್ಸವ ನಡೆದಿಲ್ಲ.

Navarasapura Utsav has not be held from past 8 years gow
Author
First Published Jan 13, 2023, 8:41 PM IST

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.13): ನಡೆದಾಡುವ ದೇವರು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು‌ ಲಿಂಗೈಕ್ಯ ಹಿನ್ನೆಲೆಯಲ್ಲಿ ಐತಿಹಾಸಿಕ ನಗರಿಯ ಸಂಸ್ಕೃತಿಗಳ ಹಬ್ಬ ನವರಸಪುರ ಉತ್ಸವ ಆಚರಣೆ ಈ ಬಾರಿ ನಡೆಯುವದು ಅನುಮಾನ ವಾಗಿದೆ. ಬರಗಾಲ, ಅತಿವೃಷ್ಟಿ, ಕೋವಿಡ್ ಹೀಗೆ ನಾನಾ ಕಾರಣಗಳಿಂದಾಗಿ ಕಳೆದ 8 ವರ್ಷಗಳಿಂದ‌ ನವರಸಪುರ ಉತ್ಸವ ನಡೆದಿಲ್ಲ. ಈ ಬಾರಿಯೂ ಉತ್ಸವ ನಡೆಯೋದು ಡೌಟು ಎನ್ನಲಾಗ್ತಿದೆ.

ಏನಿದು ನವರಸಪುರ ಉತ್ಸವ: ಆದಿಲ್ ಶಾಹಿ ನಿರ್ಮಾಣದ ನವರಸಪುರ (ಸಂಗೀತ ಮಹಲ್) ನಲ್ಲಿ ರಾಜ ಮನೆತನ ಹಾಗೂ ಪ್ರಜೆಗಳ ಮನರಂಜನೆಗಾಗಿ  ನಡೆಯುತ್ತಿದ್ದ ಸಂಗೀತ ಸಂಜೆ ಕಾರ್ಯಕ್ರಮ ಮುಂದೆ ನವರಸಪುರ ಉತ್ಸವವಾಗಿ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಈಗ ಉತ್ಸವ ನಡೆಯದೇ 8 ವರ್ಷ ಕಳೆದಿದೆ. 

ಪ್ರತಿ ವರ್ಷವೂ ಅನುದಾನ ವಾಪಾಸ್: ಪ್ರತಿ ವರ್ಷ ರಾಜ್ಯ ಸರ್ಕಾರ ಉತ್ಸವ ಆಚರಣೆಗೆಂದು ಅನುದಾನ ನೀಡುತ್ತಾ ಬಂದಿದೆ. ಈಗ ಉತ್ಸವ ನಡೆಯದ ಕಾರಣ ಆ ಅನುದಾನ ವಾಪಸ್ ಆಗುತ್ತಿದೆ. ವಿಜಯಪುರ ಜಿಲ್ಲೆಗೆ ಸಂಗೀತದ ರಸದೌತಣ ನೀಡುತ್ತಿದ್ದ ನವರಸಪುರ ಉತ್ಸವ ಈಗ ಜನರ ಮನಸ್ಸಿನಿಂದಲೇ ಮರೆಯಾಗಿದೆ. ಇಂಥ ಉತ್ಸವಗಳಿಂದ ಸ್ಥಳೀಯ ಕಲಾವಿದರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗುತ್ತಿತ್ತು. ಜತೆಗೆ ಪ್ರವಾಸೋದ್ಯಮಕ್ಕೂ ಅನು ಕೂಲವಾಗುತ್ತಿತ್ತು. 

ನವರಸಪುರ ಉತ್ಸವ ನಡೆದು 8 ವರ್ಷವಾಯ್ತು: ಕಳೆದ 8 ವರ್ಷದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ನಂತರ ಕೊವಿಡ್ 19 ದಿಂದ ಉತ್ಸವ ಆಚರಣೆಯಾಗಿಲ್ಲ. ಸದ್ಯ ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಆದ ಹಿನ್ನೆಲೆಯಲ್ಲಿ ಉತ್ಸವ ನಡೆಸಬೇಕೋ ಅಥವಾ ಬೇಡವೋ ಇಲ್ಲವೇ ಸರಳವಾಗಿ ಆಚರಿಸಬೇಕೋ ಎನ್ನುವ ಬಗ್ಗೆ ಗೊಂದಲಗಳು ಇವೆ. ಇದರ ತೀರ್ಮಾನ ಜಿಲ್ಲಾಡಳಿತ ಮಾಡಬೇಕಿದೆ. ಜನರ ಭಾವನೆಗೆ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ. 

8 ವರ್ಷಗಳಿಂದ ಉತ್ಸವ ನಡೆದಿಲ್ಲವೇಕೆ: ಕಳೆದ 8 ವರ್ಷಗಳಿಂದ ಉತ್ಸವ ನಡೆಸುವಂತೆ ಸಾರ್ವಜನಿಕರು, ಕಲಾವಿದರು ಸಾಕಷ್ಟು ಒತ್ತಡವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ  ಹಾಕುತ್ತಲೇ ಬಂದಿದ್ದರೂ ಸಹ ಜಿಲ್ಲಾಡಳಿತ ಕೋವಿಡ್, ಅತಿವಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರ ಕಾರಣದ ನೆಪವೊಡ್ಡಿ ನವರಸಪುರ ಉತ್ಸವವನ್ನು ಮುಂದೂಡುತ್ತಲೇ ಬಂದಿದೆ. 

ನವರಸಪುರ ಉತ್ಸವ ನಡೆಯುತ್ತಿದ್ದದ್ದು ಎಲ್ಲಿ?
ನವರಸರಪುರ ಉತ್ಸವ ತೊರವಿಯ ನವರಸಪುರ, ನಗರದ ಗಗನ ಮಹಲ್, ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸ್ಥಳಾವಕಾಶ ನೋಡಿಕೊಂಡು ಆಚರಿಸಲಾಗುತ್ತಿತ್ತು.  ಕೊನೆ ಬಾರಿಗೆ 2015 ರಲ್ಲಿ ನಗರದಲ್ಲಿ ನವರಸಪುರ ಉತ್ಸವ ಆಚರಿಸಲಾಗಿತ್ತು. ಅದರ ನಂತರ ಕೊವಿಡ್ ಹಾಗೂ ನೈಸರ್ಗಿಕ ವಿಕೋಪದ ಕಾರಣ ಉತ್ಸವ ರದ್ದಾಗುತ್ತಲೇ ಬಂದಿದೆ. ಈ ಉತ್ಸವ ನಡೆಸಲು ಸರ್ಕಾರ ನೀಡುವ ಅನುದಾನ ಬೇರೆ ಯಾವುದಕ್ಕೂ ಬಳಸಬಾರದು ಎನ್ನುವ ನಿಯಮಾವಳಿ ಸಹ ಇದೆ. ಆಕಸ್ಮಿಕವಾಗಿ ಉತ್ಸವ ಆಚರಣೆ ಮಾಡದಿದ್ದರೆ ಆ ಅನುದಾನ ಸರ್ಕಾರದ ಖಜಾನೆಗೆ ವಾಪಸ್ ಆಗುತ್ತೆ. ಈಗ ನವರಸಪುರ ಉತ್ಸವದ ಅನುದಾನ ಸಹ ವಾಪಸ್ ಹೋಗುತ್ತಿದೆ. 

ನವರಸಪುರ ಉತ್ಸವಕ್ಕೆ ತಾತ್ಸಾರವೇಕೆ? 
ಹಂಪಿ ಉತ್ಸವ, ಚಿಕ್ಕಬಳ್ಳಾಪುರ ಉತ್ಸವ, ಬೆಂಗಳೂರ ಉತ್ಸವ, ಕಿತ್ತೂರ ಉತ್ಸವ  ಸೇರಿದಂತೆ ಪ್ರತಿ ಜಿಲ್ಲೆಯಲ್ಲಿ ಆ ಜಿಲ್ಲೆಯ ಸಂಸ್ಕೃತಿಯ ಅನಾವರಣ ಬಿಂಬಿಸಿ, ಪ್ರವಾಸಿಗರನ್ನು ಸೆಳೆಯಲು ಇಂಥ ಉತ್ಸವ ಅಚರಿಸುತ್ತಲೇ ಬರಲಾಗುತ್ತಿದೆ. ಆದರೆ ಆದಿಲ್ ಶಾಹಿಯ ಐತಿಹಾಸಿಕ ನಗರ ಪ್ರವಾಸಿ ತಾಣಗಳು ಹೆಚ್ಚಾಗಿದ್ದರೂ ಸಹ ನವರಸಪುರ ಉತ್ಸವ ಆಚರಣೆ ಆಳುವ ಸರ್ಕಾರದ ಪ್ರತಿ ನಿಧಿಗಳು ತೋರುತ್ತಿರುವ ನಿರಾಸಕ್ತಿಯೇ ಕಾರಣವಾಗಿದೆ. ಹೀಗಾಗಿ ನವರಸಪುರ ಉತ್ಸವ ಆಚರಣೆಗೆ ಕಾಲ ಕೂಡಿ ಬಂದಿಲ್ಲ. 

ಚಳಿಗಾಲದ ಅಧಿವೇಶನದಲ್ಲಿ ಚರ್ಚೆ:
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನವರಸಪುರ ಉತ್ಸವ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಜತೆ ಮಾತುಕತೆ ನಡೆಸಿದ್ದರು. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು.‌ ಆದರೆ ಶ್ರೀಗಳ ಲಿಂಗೈಕ್ಯರಾದ ಕಾರಣ ಮನರಂಜನೆ ಕಾರ್ಯಕ್ರಮ ನಡೆಸಬಾರದು ಎಂದು ಸಂಕ್ರಮಣದ ಸಿದ್ದೇಶ್ವರ ಜಾತ್ರೆ ಸಹ ಸರಳವಾಗಿ ಆಚರಿಸಲಾಗುತ್ತಿದೆ.  ಇನ್ನೂ ನವರಸಪುರ ಉತ್ಸವ ಭಕ್ತರ ಭಕ್ತಿಯ ಆಸೆಯಕ್ಕೆ ಧಕ್ಕೆಯಾಗದಂತೆ ಆಚರಿಸುವ ಸವಾಲು ಜಿಲ್ಲಾಡಳಿತದ ಮುಂದಿದೆ. 

ಅನಂತವಾದರು ಶತಮಾನದ ಸಂತ: ಪಟ್ಟ ಬೇಡ.. ಪದ್ಮಶ್ರಿಯೂ ಬೇಡ ಅಂದಿದ್ದ ಸಿದ್ದೇಶ್ವರ ಶ್ರೀ!

ಅನುದಾನದ ಬೇಡಿಕೆ:
ಸರ್ಕಾರದ ವತಿಯಿಂದ 5 ಕೋಟಿ ರೂ. ಗಳ ಅನುದಾನದ ಬೇಡಿಕೆಯನ್ನು ಜಿಲ್ಲಾಡಳಿತ ಇಟ್ಟಿದೆ. 3 ಕೋಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ 2 ಕೋಟಿ ರೂ. ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆಯಾದರೆ ಮುಂದೆ ಸ್ಥಳೀಯ ಶಾಸಕರು, ಗಣ್ಯರ ಅಭಿಪ್ರಾಯ ಸಂಗ್ರಹಿಸಿ ನವರಸಪುರ ಉತ್ಸವ ಆಚರಿಸಲು ಅಂತಿಮ ನಿರ್ಧಾರ ಜಿಲ್ಲಾಡಳಿತ ಕೈಗೊಳ್ಳ ಬಹುದಾಗಿದೆ.

 

ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ: ಕೂಡಲಸಂಗಮದಲ್ಲಿ ಭಕ್ತರ ದಂಡು

ಉತ್ಸವ ನಡೆಸುವುದು ಸೂಚ್ಯವಲ್ಲ:
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ನವರಸಪುರ ಉತ್ಸವ ಆಚರಣೆ ಬಗ್ಗೆ ಮರುಪರಿಶೀಲನೆ ನಡೆಸುತ್ತಿದ್ದಾರೆ.  ಭಕ್ತರು, ಸಾರ್ವಜನಿಕ ವಲಯ ದಲ್ಲಿಯೂ  ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವ ಕಾರಣ ಉತ್ಸವ ಸದ್ಯ ಆಚರಣೆ ಮಾಡುವದು ಸೂಚ್ಯವಲ್ಲ ಎನ್ನುವದು ಅನಿಸಿಕೆಯಾಗಿದೆ. ಕೊನೆಗೆ ಇನ್ನೂ ಮುಂದೆ ಸಾಧಕ ಭಾಧಕ ನೋಡಿಕೊಂಡು ಉತ್ಸವ ಆಚರಿಸಿದರೆ ಮತ್ತೊಮ್ಮೆ ಐತಿಹಾಸಿಕ ನಗರಿಯ ಗತವೈಭವ ಮರುಕಳಿಸಬಹುದು.‌

Follow Us:
Download App:
  • android
  • ios