ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಕ್ಕಳನ್ನು ರಕ್ಷಿಸಿದ ದೇಗುಲ ಸಿಬ್ಬಂದಿ
ಸ್ಥಳೀಯ ನಿವಾಸಿಯೊಬ್ಬರು ಕುಟುಂಬ ನಿರ್ವಹಣೆ ಹಾಗೂ ಗಂಡನ ಹಿಂಸೆ ತಾಳಲಾರದೆ ಇಬ್ಬರು ಹೆಣ್ಣು ಮಕ್ಕಳ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದರು
ಮೈಸೂರು[ಆ.03]: ಕುಡುಕ ಗಂಡನ ಕಾಟ ತಾಳಲಾರದೆ ಮಕ್ಕಳ ಸಮೇತ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ - ಮಕ್ಕಳನ್ನು ಶ್ರೀಕಂಠೇಶ್ವರ ದೇವಾಲಯದ ಸಿಬ್ಬಂದಿ ರಕ್ಷಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಕಪಿಲಾ ನದಿ ಬಳಿ ನಡೆದಿದೆ.
ಮೈಸೂರಿನ ಸುಣ್ಣದಕೇರಿ ಮಹಿಳೆಯೊಬ್ಬರಿಗೆ ನಿತ್ಯ ಕುಡುಕ ಗಂಡ ಚಿತ್ರಹಿಂಸೆ ಕೊಡುತ್ತಿದ್ದ. ಕುಟುಂಬ ನಿರ್ವಹಣೆ ಹಾಗೂ ಗಂಡನ ಹಿಂಸೆ ತಾಳಲಾರದೆ ಇಬ್ಬರು ಹೆಣ್ಣು ಮಕ್ಕಳ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ತಾಯಿ ಮಕ್ಕಳು ನಂಜನಗೂಡು ಪೊಲೀಸರ ರಕ್ಷಣೆಯಲ್ಲಿದ್ದಾರೆ. ಗಂಡ ಶಿವಕುಮಾರ್ ನನ್ನು ಕರೆಸಿ ಬುದ್ಧಿವಾದ ಹೇಳುತ್ತಿರುವ ಪೊಲೀಸರು.
ಶಾಲೆ ಪೀಠೋಪಕರಣಗಳ ಧ್ವಂಸ
ಚಾಮುಂಡಿಬೆಟ್ಟದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚು ತೆಗೆದು ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಮನೆಗಳಲ್ಲಿ ಕಳ್ಳತನ ನಡೆಸಿದರೆ ನಗ ನಾಣ್ಯ ದೊರಕುತ್ತದೆ. ಆದರೆ ಸರ್ಕಾರಿ ಶಾಲೆಯಲ್ಲಿ ಏನು ಸಿಗುತ್ತದೆ ಎಂದು ಕಳ್ಳರು ಹೊಂಚು ಹಾಕಿದ್ದರೋ ಗೊತ್ತಿಲ್ಲ. ಆದರೆ ಕಳೆದ ರಾತ್ರಿ ಶಾಲೆಯ ಹೆಂಚನ್ನು ತೆಗೆದು ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು ಮಕ್ಕಳ ಪುಸ್ತಕ, ಶಾಲೆಗೆ ಸಂಬಂಧಿಸಿದ ದಾಖಲಾತಿಯನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ.
ಅಲ್ಲದೆ ಮೇಜು, ಕುರ್ಚಿ, ಬೆಂಚು ಸೇರಿದಂತೆ ಪೀಠೋಪಕರಣ, ವಿದ್ಯುತ್ ಬಲ್ಬ್, ಸ್ವಿಚ್ ಬೋರ್ಡ್ನ್ನು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಸುಮಾರು 2.5 ಲಕ್ಷ ಮೊತ್ತದ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಬೀಗ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸಿಆರ್ಪಿ ಉಷಾ ನಂದಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.