ಬ್ರಾಹ್ಮಣ ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕ..!
ಮೂಲ್ಕಿಯ ಕಾರ್ನಾಡುವಿನಲ್ಲಿ ಅನಾಥಾಶ್ರಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಆಶ್ರಮದ ರೂವಾರಿ, ಆಸೀಫ್ ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಲ್ಕಿ(ಜು.25): ಮೂಲ್ಕಿಯ ಕಾರ್ನಾಡುವಿನಲ್ಲಿ ಅನಾಥಾಶ್ರಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಆಶ್ರಮದ ರೂವಾರಿ, ಆಸೀಫ್ ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
"
ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ರಹ್ಮಸ್ಥಾನ ಬಳಿಯ ನಿವಾಸಿ ಪದವೀಧರ ವೇಣುಗೋಪಾಲ ರಾವ್(62) ಮೃತರು. ಅವರು ಕೆಲ ವರ್ಷಗಳ ಹಿಂದೆ ನಿರ್ಗತಿಕ ಸ್ಥಿತಿಯಲ್ಲಿದ್ದಾಗ ಸ್ಥಳೀಯರು ಆಸೀಫ್ ಅವರಿಗೆ ತಿಳಿಸಿದ್ದರು.
ಕೊರೋನಾ ಚಿಕಿತ್ಸೆ ನಡುವೆಯೂ ಆಸ್ಪತ್ರೆಯಲ್ಲೇ ಪೂಜೆನಿರತ ಪುತ್ತಿಗೆ ಶ್ರೀ
ಕೂಡಲೇ ಆಸೀಫ್ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ವೇಣುಗೋಪಾಲ ರಾವ್ ಗುಣಮುಖರಾದ ಬಳಿಕ ಮನೆಗೆ ಕರೆದುಕೊಂಡು ಹೋಗುವಂತೆ ಅವರ ಸಂಬಂಧಿಕರನ್ನು ವಿನಂತಿಸಿದಾಗ ಅವರಿಂದ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಆದುದರಿಂದ ಆಸೀಫ್ ಅವರು ಮೂಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಅನಾಥಾಶ್ರಮದಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದರು.
ಗುರುವಾರ ವೇಣುಗೋಪಾಲ ರಾವ್ ಆರೋಗ್ಯ ಹದಗೆಟ್ಟು ನಿಧನರಾಗಿದ್ದರು. ಆಸೀಫ್ ಒತ್ತಾಯದ ಮೇರೆಗೆ ಮೂಲ್ಕಿ ಠಾಣೆಗೆ ಆಗಮಿಸಿದ ಸಂಬಂಧಿಯೊಬ್ಬರು ವೇಣುಗೋಪಾಲ ರಾವ್ ಅಂತ್ಯಕ್ರಿಯೆಯನ್ನು ಮೂಲ್ಕಿಯ ಹಿಂದೂ ರುದ್ರಭೂಮಿಯಲ್ಲಿ ನಡೆಸಲು ಮೂಲ್ಕಿ ಪೊಲೀಸರ ಸಮ್ಮುಖದಲ್ಲಿ ಅನುಮತಿ ನೀಡಿ ಅಂತ್ಯಕ್ರಿಯೆ ಖರ್ಚು ನೀಡಿ ಹೊರಟುಹೋಗಿದ್ದಾರೆ.
ರಾಣಿಬೆನ್ನೂರು: ಕೊರೋನಾ ಸೋಂಕಿತರ ಮೃತದೇಹಕ್ಕೆ ಮುಸ್ಲಿಂ ಯುವಕರಿಂದ ಸಂಸ್ಕಾರ
ನಂತರ, ಅನಾಥರಾದ ರಾವ್ ಶವಕ್ಕೆ ಆಸೀಫ್ ಹೆಗಲುಕೊಟ್ಟು ಮೂಲ್ಕಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಸಿ ಮಾದರಿಯಾಗಿದ್ದಾರೆ. ಮೂಲ್ಕಿ ನಗರ ಪಂಚಾಯಿತಿ ಸಿಬ್ಬಂದಿ ಕಿಶೋರ್ ಶೆಟ್ಟಿ, ಆಪದ್ಬಾಂಧವ ಆಶ್ರಮದ ಸಿಬ್ಬಂದಿ ದಾವೂದ್ ಮತ್ತಿತರರು ಆಸೀಫ್ ಅವರಿಗೆ ಸಹಕರಿಸಿದ್ದಾರೆ.