ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೈಸೂರು ಸೇಲ್ಸ್‌ ಅಂಡ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಹ ಕೈಜೋಡಿಸುವುದಾಗಿ ಎಂಎಸ್‌ಐಎಲ್‌ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎ.ಎಂ. ಚಂದ್ರಪ್ಪ ಹೇಳಿದರು.

ರಾವಂದೂರು : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೈಸೂರು ಸೇಲ್ಸ್‌ ಅಂಡ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಹ ಕೈಜೋಡಿಸುವುದಾಗಿ ಎಂಎಸ್‌ಐಎಲ್‌ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎ.ಎಂ. ಚಂದ್ರಪ್ಪ ಹೇಳಿದರು.

Add Asianetnews Kannada as a Preferred SourcegooglePreferred

ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್‌ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಏರ್ಪಡಿಸಿದ್ದ ಸ್ವತಂತ್ರ್ಯ ಪೂರ್ವ ಶಾಲಾ ಕಟ್ಟಡ ನವೀಕರಣ ಕೊಠಡಿಗಳ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಎಂಎಸ್‌ಐಎಲ್‌ 1966 ರಲ್ಲಿ ಸ್ಥಾಪನೆಯಾಗಿದ್ದು, ನಮ್ಮಲ್ಲಿ ಉತ್ಪಾದನೆಗೊಂಡ ವಸ್ತುಗಳಿಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ವಿದ್ಯಾರ್ಥಿಗಳ ಲೇಖನ ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇವುಗಳನ್ನು ಕೊಳ್ಳಲು ಜನರು ಸರತಿಯಲ್ಲಿ ನಿಲ್ಲುತ್ತಿದ್ದರು. ಇಂದು ನಾವು ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುವ ಕೇಂದ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಜನೌಷಧಿ ಕೇಂದ್ರಗಳನ್ನು ಕರೆಯಲಾಗಿದ್ದು, ನಮ್ಮ ಉತ್ಪನ್ನಗಳಿಂದ ಬರುವ ಲಾಭದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಈ ಹಣವನ್ನು ಬಳಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಸಹ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಎಂಎಸ್‌ಐಎಲ್‌ ನಿರ್ದೇಶಕ ಆರ್‌.ಡಿ. ಸತೀಶ್‌ ಮಾತನಾಡಿ, ತಾನು ಓದಿದ ಶಾಲೆಯು ಶಿಥಿಲಾವಸ್ಥೆಗೊಂಡಿದ್ದನ್ನು ಕಂಡ ಹಳೆಯ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ನಮಗೆ ವಿಷಯ ತಿಳಿಸಿದ್ದರಿಂದ ನಾವು ಓದಿದ ಶಾಲೆಗೆ ಏನಾದರೂ ಸಹಾಯ ಮಾಡುವ ನಿಟ್ಟಿನಲ್ಲಿ ನಮ್ಮ ಎಂಎಸ್‌ಐಎಲ್‌ ಸಂಸ್ಥೆಯ ವತಿಯಿಂದ 9.5 ಲಕ್ಷ ರು. ಗಳಲ್ಲಿ ಶಾಲೆಯನ್ನು ನವೀಕರಿಸಲಾಗಿದ್ದು, ಸ್ವತಂತ್ರ್ಯಪೂರ್ವ ಈ ಶಾಲಾ ಕಟ್ಟಡವನ್ನು ನವೀಕರಣಗೊಳಿಸುವ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾ ಮತ್ತು ಬದುಕಿಗೆ ದಾರಿದೀಪವಾದ ಈ ದೇವಾಲಯವನ್ನು ಉಳಿಸಿದ ತೃಪ್ತಿ ನನಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಉತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳಾಗಿದ್ದಾರೆ. ಇವರಿಗೆ ಹಳೆಯ ವಿದ್ಯಾರ್ಥಿಗಳು ಕಲಿಕೆಗೆ ಬೇಕಾಗುವ ಪೂರಕ ವಾತಾವರಣವನ್ನು ಕಲ್ಪಿಸಲು ಪೋಷಕರು ಹಾಗೂ ಶಿಕ್ಷಕರ ಜೊತೆ ಕೈಜೋಡಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಶಾಲೆಯು ಮದುಮಗಳಂತೆ ಸಿಂಗಾರಗೊಂಡು ಹಸಿರು ತೋರಣಗಳಿಂದ ಕಂಗೊಳಿಸುತ್ತಿದ್ದು, ಬಂದಂತಹ ಅಥಿತಿಗಳನ್ನು ಶಾಲಾ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ ಬಾರಿಸಿ ಕರೆ ತಂದರೆ ಇನ್ನೊಂದೆಡೆ ಪುಟಾಣಿ ಮಕ್ಕಳು ಅಥಿತಿಗಳು ಬರುವ ದಾರಿಯ ಎರಡೂ ಕಡೆಗಳಲ್ಲಿ ಬಣ್ಣ-ಬಣ್ಣದ ಬಲೂನ್‌ಗಳನ್ನು ಹಿಡಿದು ಸರತಿ ಸಾÜಲಿನಲ್ಲಿ ನಿಂತು ಸ್ವಾಗತ ಕೋರಿದ್ದು ಆಕರ್ಷಕವಾಗಿತ್ತು.

ಹಳೆಯ ವಿದ್ಯಾರ್ಥಿಗಳಾದ ಆರ್‌.ಎಸ್‌. ಕುಮಾರ್‌ವಿಜಯ್‌, ಆರ್‌.ಎಸ್‌. ಮಹೇಶ್‌, ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿತ್ತು ಹಾಗೂ ಬಂದಂತಹ ಅಥಿತಿಗಳಿಗೆ ಶಾಲಾವತಿಯಿಂದ ಸನ್ಮಾನಿಸಿತು.

ಎಂಎಸ್‌ಐಎಲ್‌ನ ಮೈಸೂರು ವಿಭಾಗದ ವ್ಯವಸ್ಥಾಪಕ ಆರ್‌.ಎಸ್‌. ಚಂದ್ರಶೇಖರ್‌ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹೊಲದಪ್ಪ, ಮುಖ್ಯೋಪಾಧ್ಯಾಯಿನಿ ಲಿಲ್ಲಿಮೇರಿ, ಎಸ್‌ಡಿಎಂಸಿ ಅಧ್ಯಕ್ಷ ಜಲೇಂದ್ರ ಮಾಜಿ ಗ್ರಾಪಂ ಅಧ್ಯಕ್ಷ ಆರ್‌.ಎಸ್‌. ವಿಜಯ್‌ಕುಮಾರ್‌, ಆರ್‌.ವಿ. ವಿಶ್ವನಾಥ್‌, ಆರ್‌.ಎಸ್‌. ಸುರೇಶ್‌, ಆರ್‌.ಆರ್‌. ಶಶಿಧರ್‌, ಆರ್‌.ಎಂ. ಸುಭಾಷ್‌, ಆರ್‌.ವಿ.ಸೋಮಶೇಖರ್‌, ಮಲ್ಲೇಶ್‌, ಆಶಾಮಹೇಶ್‌, ಆರ್‌.ಎಸ್‌. ಪ್ರಕಾಶ್‌, ಆರ್‌.ಎಸ್‌. ಉದಯಕುಮಾರ್‌, ವಿಜಯೇಂದ್ರ ಇದ್ದರು.