ಏನೇ ಸಮಸ್ಯೆ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು| ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು| ರಸ್ತೆಯಲ್ಲಿ ತಲೆ ಕೆಟ್ಟವರಂತೆ ಮಾತನಾಡಿದರೆ ಮತ ಹಾಕಿದವರು ಬೈಯ್ಯುತ್ತಾರೆ: ಜಿಗಜಿಣಗಿ| 

ವಿಜಯಪುರ(ಜ.16): ಯಾರಾರ‍ಯರನ್ನೋ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಎಂ ಅವರಿಗೆ ಈ ಹಿಂದೆಯೇ ಹೇಳಿದ್ದೆ. ಮುಂದೆ ಒಂದು ದಿನ ಅವರು ನಿಮಗೇ ಮುಳುವಾಗುತ್ತಾರೆ ಎಂದಿದ್ದೆ. ಆದರೆ ಈಗ ಸಿಎಂ ಯಡಿಯೂರಪ್ಪನವರಿಗೇ ಅವರು ಮುಳುವಾಗಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಸಮರ್ಪಣಾ ಅಭಿಯಾನದಲ್ಲಿ ಭಾಗಿಯಾದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಾಯಿಗೆ ಬಂದಂತೆ ಮಾತನಾಡಬಾರದು. ಅವರು ಈ ರೀತಿ ಏಕೆ ಮಾತನಾಡುತ್ತಾರೆಯೋ ಗೊತ್ತಾಗುತ್ತಿಲ್ಲ. ಮಂತ್ರಿ ಆಗಲಿಲ್ಲ ಎಂಬುವುದು ಅವರ ಮನಸಿನಲ್ಲಿ ಇರಬಹುದು. ಅದಕ್ಕೆ ಈ ರೀತಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದರು.

ಏನೇ ಸಮಸ್ಯೆ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು. ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು. ರಸ್ತೆಯಲ್ಲಿ ತಲೆ ಕೆಟ್ಟವರಂತೆ ಮಾತನಾಡಿದರೆ ಮತ ಹಾಕಿದವರು ಬೈಯ್ಯುತ್ತಾರೆ. ನಾನು ಹಿಂದೆ ಕೇಂದ್ರ ಸಚಿವನಾಗಿದ್ದೆ. ಈ ಸಲ ಸಚಿವನಾಗಿಲ್ಲ. ಬೇರೆಯವರಿಗೆ ಅವಕಾಶ ಸಿಕ್ಕಿದೆ. ಅದನ್ನು ನಾನು ಬಾಯಿಗೆ ಬಂದಂತೆ ಮಾತನಾಡಿಲ್ಲ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಹಿರಿಯ ಮನುಷ್ಯ. ಹಿರಿಯರಿಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದರು.

ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಬಿಎಸ್‌ವೈ, ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ

ಸಿಡಿ ಗೊತ್ತಿಲ್ಲ:

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಂಸದ ಜಿಗಜಿಣಗಿ, ನನಗೆ ಸಿಡಿ ಬಗ್ಗೆ ಗೊತ್ತಿಲ್ಲ. ನನಗೆ ತೋರಿಸಿಲ್ಲ. ಅದನ್ನು ನಾನು ನೋಡಿಲ್ಲ. ಸಿಡಿ ಬಗ್ಗೆ ಶಾಸಕ ಯತ್ನಾಳ ಅವರನ್ನೇ ಕೇಳಬೇಕು ಎಂದರು.

ದಲಿತ ಸಿಎಂ ಪಕ್ಕಾ:

ರಾಜ್ಯದಲ್ಲಿ ಒಂದಿಲ್ಲೊಂದು ದಿನ ದಲಿತರು ಸಿಎಂ ಆಗಿಯೇ ಆಗುತ್ತಾರೆ. ದಲಿತ ಸಿಎಂ ಆಗುವ ಬಗ್ಗೆ ಯಾರಿಗೂ ಸಂಶಯವೇ ಬೇಡ. ಅದು ಆಗದಿದ್ದರೆ ಬಿಡುವುದಿಲ್ಲ. ಕಳೆದ 70 ವರ್ಷ ಬೇರೆ ಬೇರೆ ಸಮುದಾಯದವರು ಸಿಎಂ ಆಗಿದ್ದಾರೆ. ಶೇ.1, ಶೇ.2ರಷ್ಟು ಇರುವ ಸಮುದಾಯದವರು ಸಿಎಂ ಆಗಿದ್ದಾರೆ. ಶೇ.23ರಷ್ಟು ಇರುವ ದಲಿತರು ಸಿಎಂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮಲ್ಲಿಯೇ ರೈಟ್‌, ಲೆಫ್ಟ್‌, ಹಿಂದೆ, ಮುಂದೆ ಸುಡಗಾಡು ಮಾಡಿ ನೀವು ಮಜಾ ಮಾಡುತ್ತಿದ್ದೀರಿ. ಈಗ ಈ ನಿಟ್ಟಿನಲ್ಲಿ ಸಹನೆ ನಮ್ಮ ಜನರಿಗೆ ಇಲ್ಲ. ಒಂದಿಲ್ಲೊಂದು ದಿನ ಉಳಿದ ಸಮಾಜದವರಂತೆ ನಮ್ಮ ದಲಿತರು ಒಗ್ಗಟ್ಟಾಗಲಿದ್ದಾರೆ ಎಂದು ತಿಳಿಸಿದರು.

ಕೆಲವರು ಪಕ್ಷದ ವಿಚಾರ ಮಾತನಾಡುತ್ತಾರೆ. ಎಲ್ಲ ಸಮುದಾಯದವರಂತೆ ದಲಿತರಿಗೂ ಸ್ಥಾನಮಾನ ಸಿಗಬೇಕು. ಇದು ಬಸವಣ್ಣನವರ ಕನಸೂ ಆಗಿತ್ತು. 800 ವರ್ಷಗಳ ಹಿಂದೆಯೇ ಬಸವಣ್ಣನವರು ಈ ಕನಸು ಕಂಡಿದ್ದರು. ಅವರ ಕನಸು ನನಸಾಗುತ್ತದೆ ಎಂದು ಹೇಳಿದರು.