Asianet Suvarna News Asianet Suvarna News

ವಿದ್ಯುತ್‌ ಸೌಲಭ್ಯ ತ್ವರಿತವಾಗಿ ತಲುಪಿಸಿ : ಸಂಸದ GS Basavaraju

ಸಾರ್ವಜನಿಕರು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಜನಪರ ವಿದ್ಯುತ್‌ ಮೂಲಸೌಕರ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ವಿದ್ಯುತ್ಛಕ್ತಿ ಸಮಿತಿಯ ಅಧ್ಯಕ್ಷರು ಹಾಗೂ ಸಂಸದ ಜಿ.ಎಸ್‌.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

MP GS Basavaraju Order For electricity  snr
Author
First Published Dec 5, 2022, 5:22 AM IST

  ತುಮಕೂರು :  ಸಾರ್ವಜನಿಕರು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಜನಪರ ವಿದ್ಯುತ್‌ ಮೂಲಸೌಕರ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ವಿದ್ಯುತ್ಛಕ್ತಿ ಸಮಿತಿಯ ಅಧ್ಯಕ್ಷರು ಹಾಗೂ ಸಂಸದ ಜಿ.ಎಸ್‌.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಬೆವಿಕಂನ ನೂತನ ವೃತ್ತ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿದ್ಯುತ್ಛಕ್ತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಸರ್ಕಾರದ ಎಲ್ಲಾ ವಿದ್ಯುತ್‌ ಸಂಬಂಧಿತ ಯೋಜನೆಗಳು, ಸಾರ್ವಜನಿಕರ ವಿದ್ಯುತ್‌ ಸೇವೆಗಳನ್ನು ಒದಗಿಸುವ ಸೌಲಭ್ಯಗಳು ಹಾಗೂ ಜಿಲ್ಲೆಯಲ್ಲಿ ವಿದ್ಯುತ್‌ ಕ್ಷೇತ್ರದ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನದ ಪ್ರಕ್ರಿಯೆಯಲ್ಲಿ ಜನರ ಒಳಗೊಳ್ಳುವಿಕೆ ಮತ್ತು ಮೇಲ್ವಿಚಾರಣೆ, ಜಿಲ್ಲೆಯಲ್ಲಿ ವಿದ್ಯುತ್‌ ಸರಬರಾಜಿನ ಗುಣಮಟ್ಟ,ನೆಟ್ವರ್ಕ್ನ ನಿರ್ವಹಣೆ ಸೇರಿದಂತೆ ಉಪ-ಪ್ರಸರಣ ಮತ್ತು ವಿತರಣಾ ಜಾಲದ ಅಭಿವೃದ್ಧಿ - ಬಲಪಡಿಸುವ ಅಗತ್ಯವಿರುವ ಮತ್ತಷ್ಟುಪ್ರದೇಶಗಳನ್ನು ಗುರುತಿಸುವುದು. ಬೆಸ್ಕಾಂ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಗ್ರಾಹಕ ಸೇವೆಗಳ ಪೂರೈಕೆಯ ಗುಣಮಟ್ಟ, ಸಾರ್ವಜನಿಕರ ದೂರುಗಳು ಮತ್ತು ಕುಂದುಕೊರತೆ ಪರಿಹಾರ ಮೊದಲಾದ ಅಂಶಗಳ ಪ್ರಗತಿಯನ್ನು ಸಂಸದರು ಪರಿಶೀಲಿಸಿದರು.ದೇಶದಲ್ಲಿ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಹಣವನ್ನು ಒದಗಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ , ಇಂಟಿಗ್ರೇಟೆಡ್‌ ಪವರ್‌ ಡೆವಲಪ್ಮೆಂಟ್‌ ಸ್ಕೀಮ್‌ (ಎಲ್ಪಿಡಿಎಸ್‌), ಪ್ರಧಾನ ಮಂತ್ರಿ ಸಹಜ್‌ ಬಿಜ್ಲಿ ಹರ್‌ ಘರ್‌ ಯೋಜನೆ (ಸೌಭಾಗ್ಯ) ಇತ್ಯಾದಿಗಳ ಅಡಿಯಲ್ಲಿ ಸುಮಾರು 2 ಲಕ್ಷ ಕೋಟಿಗಳನ್ನು ಒದಗಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿದ್ಯುಚ್ಛಕ್ತಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್‌.ಪಾಟೀಲ್‌ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಹಾಗೂ ಯೋಜನೆಗಳ ಪ್ರಯೋಜನ ಅರ್ಹರಿಗೆ ಸಿಗಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿಯೇ ಸೌರವಿದ್ಯುತ್‌ ಉತ್ಪಾದನೆ ಮಾಡಲು, ಸಾಧ್ಯತೆ ಇರುವ ಎಲ್ಲಾ ಸ್ಥಾವರಗಳ ಹಂತದಲ್ಲಿಯೇ ಯೋಜನೆ ಕೈಗೊಳ್ಳಲು ರೈತರ ಜಮೀನು ಅಥವಾ ಸರ್ಕಾರಿ ಜಮೀನು ಅಗತ್ಯವಿದ್ದಲ್ಲಿ ಕಂದಾಯ ಇಲಾಖೆ ಸಹಕಾರ ನೀಡುತ್ತದೆ. ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಧೀಕ್ಷಕ ಎಂಜಿನಿಯರ್‌ ಹಾಗೂ ಜಿಲ್ಲಾ ವಿದ್ಯುಚ್ಛಕ್ತಿ ಸಮಿತಿ ಸಂಚಾಲಕರು ಲೋಕೇಶ್‌ ಕೆ.ಎಲ್‌, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಬೆಸ್ಕಾಂನ ಅಧಿಕಾರಿಗಳು, ಭಾಗವಹಿಸಿದ್ದರು.

ನೀಲಿ ನಕ್ಷೆ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ

ಪ್ರಧಾನಿ ಮೋದಿಯವರು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ವಿದ್ಯುತ್ಛಕ್ತಿ ಸಮಿತಿ ರಚಿಸಿದ್ದಾರೆ, ಇದೊಂದು ವರದಾನವಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸುಮಾರು 734 ಕೋಟಿ ರು. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಜಿಲ್ಲೆ ಕೈಗಾರಿಕೆ, ಕೃಷಿ ಮತ್ತು ತೋಟಗಾರಿಕೆಗೆ ಪ್ರಸಿದ್ಧಿಯಾಗಿರುವ ಜಿಲ್ಲೆಯಾಗಿದೆ. ಗ್ರೇಟರ್‌ ನೋಯಿಡಾ ಬಿಟ್ಟರೆ, ಜಿಲ್ಲೆ ಕೈಗಾರಿಕೆಯಲ್ಲೂ ಕ್ರಾಂತಿ ಮಾಡಲಿದೆ. ಜಿಲ್ಲೆಯ ಅಧಿಕೃತ ಹಾಗೂ ಅನಧಿಕೃತ ಕೊಳವೆ ಬಾವಿಗಳಿಗಾಗಿ ರೈತರು ಎಷ್ಟುಹೂಡಿಕೆ ಮಾಡಿದ್ದಾರೆ, ಇವರಿಗೆ ವಿದ್ಯುತ್‌ ಸಂಪರ್ಕ ನೀಡಲು ಸರ್ಕಾರ ಎಷ್ಟುವೆಚ್ಚ ಮಾಡಬೇಕಿದೆ. ಇದರಿಂದ ಎಷ್ಟುಜನರಿಗೆ ಉದ್ಯೋಗ ದೊರೆಯಲಿದೆ. ಎಷ್ಟುಉತ್ಪಾದನೆ ಆಗಲಿದೆ ಎಂಬ ಬಗ್ಗೆ ಒಂದು ವರದಿ ಸಿದ್ಧಪಡಿಸಿ. ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆವಾರು ಸಮಸ್ಯೆ ಗುರುತಿಸಿ, ಸೂಕ್ತ ಯೋಜನೆಗೆ ಆದ್ಯತೆ ನೀಡಬೇಕು, ಇದರ ಜೊತೆಗೆ ಇನ್ನೂ ಅಗತ್ಯವಿರುವ ಯೋಜನೆಗಳೊಂದಿಗೆ ಬೆಸ್ಕಾಂ, ಕೆಪಿಟಿಸಿಎಲ್‌, ನವೀಕರಿಸಬಹುದಾದ ಇಂಧನ ಇಲಾಖೆ, ಪವರ್‌ ಗ್ರಿಡ್‌ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲಿರುವ ಎಲ್ಲಾ ಯೋಜನೆಗಳ ನೀಲಿ ನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸಂಸದ ಬಸವರಾಜ ಸೂಚಿಸಿದರು.

Follow Us:
Download App:
  • android
  • ios