ಬಿಜೆಪಿ ಸರ್ಕಾರದಿಂದ ನೀಡಲಾಗುತ್ತಿದ್ದ ಕಿಸಾನ್‌ ಸಮ್ಮಾನ್‌ ಯೋಜನೆಯ 4 ಸಾವಿರ ನೀಡುವ ಯೋಜನೆಯನ್ನು ಪ್ರಸ್ತುತ ಸರ್ಕಾರ ನಿಲ್ಲಿಸಿದ್ದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಶಿರಾ (ಮೇ.16): ಬಿಜೆಪಿ ಸರ್ಕಾರದಿಂದ ನೀಡಲಾಗುತ್ತಿದ್ದ ಕಿಸಾನ್‌ ಸಮ್ಮಾನ್‌ ಯೋಜನೆಯ 4 ಸಾವಿರ ನೀಡುವ ಯೋಜನೆಯನ್ನು ಪ್ರಸ್ತುತ ಸರ್ಕಾರ ನಿಲ್ಲಿಸಿದ್ದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ’ಕಿಸಾನ್ ಸಮ್ಮಾನ್ ಯೋಜನೆ’ಯಡಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ಜಮೆಯಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಮೊತ್ತಕ್ಕೆ 4 ಸಾವಿರ ರೂಪಾಯಿ ಸೇರಿಸಿ ಒಟ್ಟು 10 ಸಾವಿರ ರೂಪಾಯಿ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಪ್ರಸ್ತುತ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿರುವುದು ಬೇಸರದ ಸಂಗತಿ. ಸರ್ಕಾರಗಳು ಬದಲಾದಾಗ ಜನಪರ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಅವರು ಆಗ್ರಹಿಸಿದರು.

Add Asianetnews Kannada as a Preferred SourcegooglePreferred

ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಪ್ರತಿ ತಿಂಗಳು 14.5 ಕೋಟಿ ರುಪಾಯಿ ಪ್ರೋತ್ಸಾಹಧನ ಬರುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಲಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತಂದು, ಪ್ರತಿ ಲೀಟರ್ ಹಾಲಿಗೆ 3 ರುಪಾಯಿ ಇದ್ದ ಪ್ರೋತ್ಸಾಹಧನವನ್ನು 5 ರುಪಾಯಿಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಹಸು, ಎಮ್ಮೆಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಈಗಿನ ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ, ಮಾತನಾಡಿ ನೇಜಂತಿ ಕುಗ್ರಾಮದಲ್ಲಿ ಇಂದು ಸಹಕಾರ ಸಂಘ ಪ್ರಾರಂಭ ಆಗಿರುವುದು ಇಡೀ ಊರಿಗೆ ಒಂದು ಆರ್ಥಿಕವಾಗಿ ಶಕ್ತಿ ಕೊಡುವಂತಹ ಕಾರ್ಯಕ್ರಮ. ಗ್ರಾಮದವರೆಲ್ಲರೂ ಕೂಡ ಅರ್ಥೈಸಿ ಆದಾಯ ಇರತಕ್ಕಂತ ಹೈನುಗಾರಿಕೆ ಉದ್ಯಮವನ್ನು ನೀವು ಉಳಿಸಿಕೊಂಡು ಬೆಳೆಸುವತ್ತ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿದೆ ಎಂದರು.

ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿ

ತುಮಕೂರು ಹಾಲು ಒಕ್ಕೂಟದ ಗುಬ್ಬಿ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಈ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಅಭಿಲಾಷ್ ಗೌಡ ಇಂಜಿನಿಯರ್ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಲಕ್ಷಗಟ್ಟಲೆ ಸಂಬಳ ಪಡೆದು ಜೀವನ ನಡೆಸುತ್ತಿದ್ದರು. ಇಂದು ತಮ್ಮ ಸ್ವಗ್ರಾಮದಲ್ಲಿ ಗೆಳೆಯ ಮೋಹನ್ ಜೊತೆ ಗೂಡಿ ಬೃಹತ್ ಆಧಾರ್ ಡೈರಿ ಫಾರಂ ಮತ್ತು ಸೈಲೇಜ್ ಘಟಕ ಸ್ಥಾಪಿಸಿ, ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಶ್ರಮಿಸಿ ಇಂದು ಉದ್ಘಾಟನೆ ಮಾಡಿ ಹೈನುಗಾರಿಕೆ ಉದ್ಯಮಕ್ಕೆ ಹೊಸ ಅರ್ಥ ನೀಡುವಲ್ಲಿ ಜೊತೆಗೆ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇವರ ಈ ನಡೆ ಇತರರಿಗೂ ಸ್ಫೂರ್ತಿದಾಯಕವಾಗಲಿ ಎಂದರು.