ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರು ಕುಂಚೇನಹಳ್ಳಿ ಬಳಿ ಸರಣಿ ಅಪಘಾತಕ್ಕೀಡಾಗಿದೆ. ಹಿಂಬದಿಯಿಂದ ಬಂದ ಖಾಸಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಸದರ ಕಾರು ಮುಂದಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಗುದ್ದಿದೆ. ಅದೃಷ್ಟವಶಾತ್ ಸಂಸದರು ಯಾವುದೇ ಅಪಾಯವಾಗಿಲ್ಲ.

ಶಿವಮೊಗ್ಗ (ಜ.21): ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರು ಬುಧವಾರ ಅಪಘಾತಕ್ಕೀಡಾಗಿದೆ. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಸಂಸದರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಣಿ ಅಪಘಾತ ನಡೆದಿದ್ದು ಹೇಗೆ?

ಸಂಸದರು ಶಿಕಾರಿಪುರದಲ್ಲಿ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು. ಈ ವೇಳೆ ಕುಂಚೇನಹಳ್ಳಿ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಖಾಸಗಿ ಕಾರೊಂದು ಸಂಸದರ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಂಸದರ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಪೊಲೀಸ್ ಬೆಂಗಾವಲು (ಎಸ್ಕಾರ್ಟ್) ವಾಹನಕ್ಕೆ ಡಿಕ್ಕಿಯಾಗಿದೆ. ಈ ಸರಣಿ ಡಿಕ್ಕಿಯಿಂದಾಗಿ ಸಂಸದರ ಕಾರಿನ ಮುಂಭಾಗ ಮತ್ತು ಹಿಂಭಾಗ ಸ್ವಲ್ಪ ಮಟ್ಟಿಗೆ ನುಜ್ಜುಗುಜ್ಜಾಗಿದೆ.

ಎಸ್ಕಾರ್ಟ್ ವಾಹನದಲ್ಲೇ ಪ್ರಯಾಣ ಮುಂದುವರಿಕೆ

ಅಪಘಾತ ಸಂಭವಿಸಿದ ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಸಂಸದರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ. ಸಂಸದರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ಖಚಿತವಾದ ನಂತರ, ಅವರು ಅದೇ ಪೊಲೀಸ್ ಬೆಂಗಾವಲು ವಾಹನದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಂದ ನಿಗದಿತ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಸದರ ಕಾರಿಗೆ ಡಿಕ್ಕಿ ಹೊಡೆದ ವಾಹನ ಮತ್ತು ಚಾಲಕನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.