ಹಸಿರು ಝೋನ್‌ನಲ್ಲಿರುವ ಚಿಕ್ಕಮಗಳೂರು ಜಿಲ್ಲೆಗೆ ಪಾಸ್ ಬಳಸಿಕೊಂಡು ರೆಡ್‌ ಝೋನ್‌ನ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬರುತ್ತಿರುವುದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚುವಂತೆ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮೂಡಿಗೆರೆ(ಮೇ.06): ದಕ್ಷಿಣಕನ್ನಡ ಜಿಲ್ಲೆ ಹೆಚ್ಚು ಕೊರೋನಾ ಪ್ರಕರಣಗಳಿಂದ ರೆಡ್‌ ಝೋನ್‌ನಲ್ಲಿದೆ. ಗಡಿಜಿಲ್ಲೆ ಚಿಕ್ಕಮಗಳೂರು ಹಸಿರು ವಲಯದಲ್ಲಿದ್ದರೂ ಆನ್‌ಲೈನ್‌ ಪಾಸ್‌ ಬಳಸಿ ದಕ್ಷಿಣ ಕನ್ನಡ ಭಾಗದಿಂದ ಚಿಕ್ಕಮಗಳೂರು ಗಡಿಯೊಳಗೆ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರವೇಶಿಸುತ್ತಿರುವುದು ಜಿಲ್ಲೆಯ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಬೆಳಗ್ಗೆಯಿಂದಲೇ ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ನಲ್ಲಿ ಆನ್‌ಲೈನ್‌ ಪಾಸ್‌ ಮೂಲಕ ಜಿಲ್ಲೆಗೆ ಬಂದ 200ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿನಿಂತಿದ್ದು ಹೀಗೆ ರೆಡ್‌ ಝೋನ್‌ ಏರಿಯಾದ ಪ್ರಯಾಣಿಕರನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆರೋಗ್ಯ ಸೇವೆ, ಹೆರಿಗೆ, ನಿಧನ ಮುಂತಾದ ತುರ್ತು ಸಂದರ್ಭದಲ್ಲಿರುವ ಪ್ರಯಾಣಿಕರಿಗೆ ಮಾತ್ರ ಪಾಸ್‌ಗಳನ್ನು ನೀಡಬೇಕು. ಆನ್‌ಲೈನ್‌ನಲ್ಲಿ ಪಾಸ್‌ ನೀಡದೇ ನೇರವಾಗಿ ಗ್ರಾಪಂ ಮಟ್ಟದ ಅಧಿಕಾರಿಗಳು ಅಥವಾ ಪೊಲೀಸ್‌ ಠಾಣೆ ಮೂಲಕ ಪಾರದರ್ಶಕವಾಗಿ ಪರಿಶೀಲಿಸಿ ಪಾಸ್‌ ವಿತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾಗರದಲ್ಲಿ 50 ಕೋಟಿ ರುಪಾಯಿ ವೆಚ್ಚದಲ್ಲಿ ಪವರ್‌ಗ್ರಿಡ್‌ ನಿರ್ಮಾಣ

ಕೊಟ್ಟಿಗೆಹಾರದ ಹೃದಯ ಭಾಗದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ದಕ್ಷಿಣಕನ್ನಡ ಭಾಗದಿಂದ ಬರುವ ಪ್ರವಾಸಿಗರು ತಮ್ಮ ವಾಹನದಿಂದ ಇಳಿದು ಚೆಕ್‌ಪೋಸ್ಟ್‌ ಬಳಿ ಬರುತ್ತಾರೆ. ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಪ್ರಯಾಣಿಕರ ಮಾಹಿತಿ ಪಡೆದು ಬಿಡಬೇಕಾಗಿದೆ. ಆದ್ದರಿಂದ ಸಾಲುಗಟ್ಟಿನಿಂತ ವಾಹನಗಳಲ್ಲಿ ಇರುವ ಪ್ರಯಾಣಿಕರು ವಾಹನದಿಂದ ಇಳಿದು ಅಡ್ಡಾಡುತ್ತಿರುವುದು ಕಂಡುಬರುತ್ತಿದೆ. ಚೆಕ್‌ಪೋಸ್ಟ್‌ ಸುತ್ತಮುತ್ತ ಸಮೀಪದಲ್ಲೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿದ್ದು, ಪ್ರಯಾಣಿಕರಲ್ಲಿ ಯಾರಾದರೂ ಸೋಂಕಿತರಿದ್ದಲ್ಲಿ ಸ್ಥಳೀಯರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೊಟ್ಟಿಗೆಹಾರದ ಹೃದಯಭಾಗದಲ್ಲಿರುವ ಚೆಕ್‌ಪೋಸ್ಟ್‌ನ್ನು ಕೊಟ್ಟಿಗೆಹಾರದ ಗಡಿಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.