ವಧು ದಕ್ಷಿಣೆ ನೀಡುವಂತೆ ದಂಪತಿಯನ್ನೇ ಕಿಡ್ನಾಪ್ ಮಾಡಿ ,  ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರನ ತಾಯಿ ಆರೋಪ ಮಾಡುತ್ತಿದ್ದು,  ತನ್ನ ಮಗ ಹಾಗೂ ಸೊಸೆಯನ್ನು ಹುಡುಕಿ ಕೊಡಿ ಎಂದು ಕಲಬುರಗಿ ಎಸ್ ಪಿ ಕಚೇರಿಗೆ ನೊಂದ ತಾಯಿ ಮನವಿ ಮಾಡಿದ್ದಾಳೆ. 

ಕಲಬುರಗಿ[ನ.23]: ವರದಕ್ಷಿಣೆ ಕಿರುಕುಳ ಪ್ರಕರಣ ಸಾಮಾನ್ಯ, ಆದರೆ ಕಲಬುರಗಿ ನಗರದಲ್ಲಿ ವಿಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. ವಧು ದಕ್ಷಿಣೆ ನೀಡುವಂತೆ ದಂಪತಿಯನ್ನೇ ಕಿಡ್ನಾಪ್ ಮಾಡಿ, ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರನ ತಾಯಿ ಆರೋಪ ಮಾಡುತ್ತಿದ್ದು, ತನ್ನ ಮಗ ಹಾಗೂ ಸೊಸೆಯನ್ನು ಹುಡುಕಿ ಕೊಡಿ ಎಂದು ಕಲಬುರಗಿ ಎಸ್‌ಪಿ ಕಚೇರಿಗೆ ನೊಂದ ತಾಯಿ ಮನವಿ ಮಾಡಿದ್ದಾಳೆ. 

Add Asianetnews Kannada as a Preferred SourcegooglePreferred

ಮೂಲತಃ ಮಹಾರಾಷ್ಟ್ರದ ಕೋಳ್ಕಿ ಗ್ರಾಮದ ರಾಜೀವ ನಗರದ ನಿವಾಸಿಗಳಾಗಿದ್ದು, ಭಾಷೆ ಬರದ ಊರಿಗೆ ಬಂದು ಮಗ, ಸೊಸೆಯ ಪೋಟೋ ಹಿಡಿದುಕೊಂಡು ತಾಯಿ ಕಣ್ಣೀರಿಡುತ್ತಾ ನಮ್ಮವರನ್ನು ಹುಡುಕಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಅಜಯ್ ಕಾಳೆ ಹಾಗೂ ಜ್ಯೋತಿ ದಂಪತಿ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕಳೆದ ಒಂದು ವರ್ಷದಿಂದೀಚೆಗೆ ಜ್ಯೋತಿಯ ಮಲತಾಯಿ ವಾಸವಿರುವ ಕಲಬುರಗಿಯ ನಿಡಗುಂದಾ ಗ್ರಾಮದಲ್ಲಿ ವಾಸವಿದ್ದರಂತೆ. 

ಪ್ರತಿದಿನ ತನ್ನ ತಾಯಿಗೆ ಕರೆ ಮಾಡಿ ಮಾತನಾಡುತ್ತಿದ್ದ ಅಜಯ್ ನ ಫೋನ್ ನವೆಂಬರ್ 2ನೇ ತಾರೀಖಿನಿಂದ ಸ್ವಿಚ್ ಆಫ್ ಆಗಿದೆಯಂತೆ. ಇದರಿಂದ ಗಾಬರಿಗೊಂಡು ನಿಡಗುಂದಾ ಗ್ರಾಮಕ್ಕೆ ಬಂದಾಗ ಅಲ್ಲಿಯೂ ಪತ್ತೆಯಾಗಿಲ್ಲ. ನವೆಂಬರ್ 4ರಂದು ಜ್ಯೋತಿಯ ಮಲತಾಯಿಯ ಮಗ ದತ್ತಾ ಹಾಗೂ ರವಿ ಫೋನ್ ಮಾಡಿ ಗ್ರಾಮಕ್ಕೆ ಬಂದು ಪಂಚಾಯತಿ ಮಾಡಿ ಎರಡು ಲಕ್ಷ ರೂಪಾಯಿ ಹಣ ವಧು ದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆಂದು ತಾಯಿ ಆರೋಪಿಸಿದ್ದಾಳೆ. ಅಜಯ್ ಹಾಗೂ ಜ್ಯೋತಿ ಇಬ್ಬರು ಪಾರ್ದಿ ಸಮುದಾಯಕ್ಕೆ ಸೇರಿದವರು. ಪಾರ್ದಿ ಸಮುದಾಯದಲ್ಲಿ ವಧು ದಕ್ಷಿಣೆ ನೀಡಿ ಮದುವೆಯಾಗುವ ಸಂಪ್ರದಾಯ ಇದೆಯಂತೆ.