ಆಂಧ್ರಪ್ರದೇಶದ ಅಶ್ವಿನಿ ಹಾಗೂ ಆಕೆಯ ಪುತ್ರ ನಿಡುಮಾಮಿಡಿ ಯಶ್ವಿನ್‌ ಮೃತರು. ಈ ಘಟನೆಯಲ್ಲಿ ಅರ್ಜುನ್‌ ಬಿಸ್ಟಾ, ಅವರ ಪತ್ನಿ ಕಮಾ ಬಿಸ್ಟಾ, ಬೊಲೆರೋ ಪಿಕ್‌ಆಪ್ ಚಾಲಕ ದಿಲ್ ಬಹುದ್ದೂರ್ ಶ್ರೇಷ್ಠ ಹಾಗೂ ಆಟೋ ಚಾಲಕ ಸಂಜು ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬೆಂಗಳೂರು(ಅ.26): ಸರಣಿ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟು, ದಂಪತಿ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊರಮಾವು ಹೊರ ವರ್ತುಲ ರಸ್ತೆಯ ಬಿಎಂಟಿಸಿ ಬಸ್ ನಿಲ್ದಾಣ ಸಮೀಪ ಸಂಭವಿಸಿದೆ.

ಆಂಧ್ರಪ್ರದೇಶದ ಅಶ್ವಿನಿ (29) ಹಾಗೂ ಆಕೆಯ ಪುತ್ರ ನಿಡುಮಾಮಿಡಿ ಯಶ್ವಿನ್‌ (7) ಮೃತರು. ಈ ಘಟನೆಯಲ್ಲಿ ಅರ್ಜುನ್‌ ಬಿಸ್ಟಾ, ಅವರ ಪತ್ನಿ ಕಮಾ ಬಿಸ್ಟಾ, ಬೊಲೆರೋ ಪಿಕ್‌ಆಪ್ ಚಾಲಕ ದಿಲ್ ಬಹುದ್ದೂರ್ ಶ್ರೇಷ್ಠ ಹಾಗೂ ಆಟೋ ಚಾಲಕ ಸಂಜು ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಆಟೋ, ಬೊಲೆರೋ ಪಿಕ್‌ಆಪ್‌ ಹಾಗೂ ಬೈಕ್‌ಗಳು ಜಖಂಗೊಂಡಿದ್ದು, ಆಟೋ ಹಾಗೂ ಬೊಲೆರೋ ಚಾಲಕರು ಬಂಧಿತರಾಗಿದ್ದಾರೆ.

ಬೆಂಗಳೂರು: ರಸ್ತೆ ವಿಭಜಕ ದಾಟಿ ಎದುರಿಗೆ ಬಂದ ಕಾರಿಗೆ ಗುದ್ದಿದ ಕಾರು, ಓರ್ವ ಸಾವು

ಘಟನೆ ವಿವರ:

ಹೊರಮಾವು ಹೊರ ವರ್ತುಲ ರಸ್ತೆಯ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಬಿಎಂಟಿಸಿ ಬಸ್‌ ನಿಂತಿದೆ. ಅದೇ ಹೊತ್ತಿಗೆ ರಾಮಮೂರ್ತಿನಗರ ಕಡೆಯಿಂದ ಬಂದ ಆಟೋ ಚಾಲಕ ಹಿಂದಿನಿಂದ ಬಸ್ಸಿಗೆ ಗುದ್ದಿಸಿದ್ದಾನೆ. ಆಗ ಆಟೋ ಹಿಂದೆ ಬರುತ್ತಿದ್ದ ಬೊಲೆರೋ ಪಿಕ್ಆಪ್‌ ವಾಹನವು ಆಟೋವನ್ನು ತಪ್ಪಿಸಲು ಹೋಗಿ ಬಲಗಡೆಗೆ ತೆಗೆದುಕೊಂಡಾಗ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಆಗ ನಿಯಂತ್ರಣ ತಪ್ಪಿ ಬೈಕ್‌ನಲ್ಲಿದ್ದ ತಾಯಿ-ಮಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ರೀತಿ ಆಟೋದಲ್ಲಿ ಬಿಸ್ಟಾ ದಂಪತಿಗೂ ಪೆಟ್ಟಾಗಿದೆ. ಚಾಲಕರಿಗೂ ಗಾಯವಾಗಿದೆ.

ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಶ್ವಿನಿ ಮತ್ತು ಆಕೆಯ ಪುತ್ರ ಯಶ್ವಿನ್‌ ಕೊನೆಯುಸಿರೆಳೆದಿದ್ದಾರೆ. ಗಾಯಾಳು ಬಿಸ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರು ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯವಾಗಿದ್ದ ಆಟೋ ಚಾಲಕ ಸಂಜು ಹಾಗೂ ಬೊಲೆರೋ ಪಿಕ್ಆಪ್ ವಾಹನದ ಚಾಲಕ ದಿಲ್ ಬಹುದ್ದೂರ್‌ ಶ್ರೇಷ್ಠನನ್ನು ಚಿಕಿತ್ಸೆ ಬಳಿಕ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯದಶಮಿ ಹಬ್ಬ ಅಂಗವಾಗಿ ಕೆ.ಜಿ.ಹಳ್ಳಿಯಲ್ಲಿದ್ದ ತಮ್ಮ ಪೋಷಕರ ಮನೆಗೆ ಮಂಗಳವಾರ ಪತ್ನಿ ಅಶ್ವಿನಿ ಹಾಗೂ ಮಗ ಯಶ್ವಿನ್ ಜತೆ ಅವರು ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.