Asianet Suvarna News Asianet Suvarna News

ಹಬ್ಬದ ಎಫೆಕ್ಟ್: ಗಬ್ಬೆದ್ದು ನಾರುತ್ತಿರುವ ಬೆಂಗ್ಳೂರು..!

*  ಆಯುಧ ಪೂಜೆ, ವಿಜಯ ದಶಮಿ ಹಬ್ಬದ ಹಿನ್ನೆಲೆ
*  ನಿತ್ಯಕ್ಕಿಂತ 2.5 ಸಾವಿರ ಟನ್‌ ಹೆಚ್ಚುವರಿ ಕಸ ಉತ್ಪಾದನೆ
*  ಕಸ ವಿಲೇವಾರಿಗೆ ಪೌರ ಕಾರ್ಮಿಕರ ಕೊರತೆ
 

More Garbage in Bengaluru Due to Festive Season grg
Author
Bengaluru, First Published Oct 16, 2021, 7:42 AM IST

ಬೆಂಗಳೂರು(ಅ.16):  ಆಯುಧ ಪೂಜೆ(Ayudha Puja) ಹಾಗೂ ವಿಜಯ ದಶಮಿ(Vijayadashami) ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ(Bengaluru) ಸುಮಾರು ಎರಡೂವರೆ ಸಾವಿರ ಟನ್‌ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದು, ನಗರದ ಮಾರುಕಟ್ಟೆ ಪ್ರದೇಶಗಳು ಹಾಗೂ ಹಲವು ರಸ್ತೆಗಳ ಬದಿಯಲ್ಲಿ ರಾಶಿಗಟ್ಟಲೇ ಕಸ ಬಿದ್ದಿದೆ.

ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ನಿತ್ಯ ಸುಮಾರು ನಾಲ್ಕು ಸಾವಿರ ಟನ್‌ ತ್ಯಾಜ್ಯ(Garbage) ಉತ್ಪಾದನೆಯಾಗುತ್ತದೆ. ಕಳೆದೆರಡು ದಿನಗಳಿಂದ ಸುಮಾರು 6,500 ಟನ್‌ ತ್ಯಾಜ್ಯ ಸೃಷ್ಟಿಯಾಗಿದೆ. ಅಂದರೆ, ಸುಮಾರು ಎರಡೂವರೆ ಸಾವಿರ ಟನ್‌ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪಾಲಿಕೆ(BBMP) ಕಸದ ಟಿಪ್ಪರ್‌ಗಳು ಹಾಗೂ ಕ್ಯಾಂಪ್ಯಾಕ್ಟರ್‌ಗಳನ್ನು ಚಾಲಕರು ಸ್ವಚ್ಛಗೊಳಿಸಿ ಪೂಜೆ ಮಾಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ(Garbage Disposal) ಸಾಧ್ಯವಾಗಿಲ್ಲ. ಹೀಗಾಗಿ ಮಾರುಕಟ್ಟೆ(Market) ಪ್ರದೇಶಗಳು, ಪಾದಚಾರಿ ಮಾರ್ಗಗಳು, ಮೈದಾನದ ಮೂಲೆಗಳು, ಖಾಲಿ ನಿವೇಶನಗಳು ಸೇರಿದಂತೆ ಹಲವೆಡೆ ರಾಶಿಗಟ್ಟಲೇ ಕಸ ಬಿದ್ದಿದೆ.

ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಂದ ಮಾವಿನ ಎಲೆ, ಬಾಳೆಕಂದು, ಬೂದುಕುಂಬಳಕಾಯಿ, ಹೂವು ಸೇರಿದಂತೆ ಇತರೆ ವಸ್ತುಗಳನ್ನು ಗುರುವಾರ ನಗರಕ್ಕೆ ತಂದು ಮಾರಾಟ ಮಾಡಿದರು. ಪ್ರಮುಖವಾಗಿ ಕೆ.ಆರ್‌.ಮಾರುಕಟ್ಟೆ, ಮೈಸೂರು ರಸ್ತೆ, ಯಶವಂತಪುರ ಮಾರುಕಟ್ಟೆ, ಕೆ.ಆರ್‌.ಪುರಂ. ಯಲಹಂಕ, ಹೆಬ್ಬಾಳ, ಮಲ್ಲೇಶ್ವರ, ಬಸವನಗುಡಿ, ರಾಜಾಜಿನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಹೀಗಾಗಿ ಆ ಪ್ರದೇಶಗಳಲ್ಲಿ ಹೆಚ್ಚಿನ ತ್ಯಾಜ್ಯ ಸೃಷ್ಟಿಯಾಗಿತ್ತು. ಶುಕ್ರವಾರ ಸಂಜೆಯ ವೇಳೆಗೆ ಬಹುತೇಕ ವ್ಯಾಪಾರಿಗಳು ವ್ಯಾಪಾರ ಮುಗಿಸಿಕೊಂಡು ಮನೆಗಳತ್ತ ತೆರಳಿದರು. ಖರೀದಿಯಾಗದೆ ಉಳಿದಿದ್ದ ಬಾಳೆಕಂದು, ಬಾಳೆ ಎಲೆ, ಮಾವಿನ ಸೊಪ್ಪುಗಳನ್ನು ಅಲ್ಲಲ್ಲೇ ಬಿಟ್ಟಿರುವುದರಿಂದ ತಾಜ್ಯ ಹೆಚ್ಚಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲಿದಿರಿ ಜೋಕೆ: ಬೀಳುತ್ತೆ 25 ಸಾವಿರ ವರೆಗೆ ದಂಡ..!

ಚರಂಡಿ ಸೇರಿದ ತ್ಯಾಜ್ಯ

ನಗರದಲ್ಲಿ ಕಳೆದೆರಡು ದಿನಗಳಿಂದ ಮಳೆ ಆಗುತ್ತಿರುವುದರಿಂದ ಪಾಲಿಕೆಗೆ ಕಸ ವಿಲೇವಾರಿ ಸಮಸ್ಯೆಯಾಗಿದೆ. ಸಾಮಾನ್ಯ ದಿನಗಳಲ್ಲೇ ತ್ಯಾಜ್ಯ ವಿಲೇವಾರಿ ಪಾಲಿಕೆಗೆ ತಲೆನೋವಾಗಿದೆ. ಇನ್ನು ನಗರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ರಸ್ತೆಯಲ್ಲಿ ಹರಿಯುವ ಮಳೆ ನೀರಿನೊಂದಿಗೆ ಸಣ್ಣ ತ್ಯಾಜ್ಯಗಳು ಚರಂಡಿ ಸೇರುತ್ತಿದೆ. ಇದರಿಂದ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದು, ರಸ್ತೆಗಳ ಮೇಲೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಹರಿಯುತ್ತಿದೆ. ಮಳೆಯಿಂದ(Rain) ಕಸ ಕೊಳೆತು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಹಿಡಿದುಕೊಂಡು ಓಡಾಡುವುದು ಕಂಡುಬಂತು.

ಸಾಂಕ್ರಾಮಿಕ ರೋಗ ಭೀತಿ

ನಗರದಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಈ ನಡುವೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದರಿಂದ ಸಾಂಕ್ರಾಮಿಕ ರೋಗಗಳು(Infectious Diseases) ಹರಡುವ ಭೀತಿ ಎದುರಾಗಿದೆ. ಹಸಿ ಕಸ ನೀರಿನೊಂದಿಗೆ ಬೇಗ ಕೊಳೆಯುವುದರಿಂದ ಸೊಳ್ಳೆಗಳು(Mosquito) ಹೆಚ್ಚಾಗುತ್ತವೆ. ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ಜನರು ಓಡಾಡುವುದರಿಂದ ಆರೋಗ್ಯದ(Health) ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ರಾಶಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕಿದೆ.

ಅಸಮರ್ಪಕ ಕಸ ವಿಲೇವಾರಿ

ನಗರದಲ್ಲಿ ಸ್ವಚ್ಛತಾ(Clean) ಕಾರ್ಯ ಮಾಡುವ ಪೌರಕಾರ್ಮಿಕರು ಕಳೆದೆರಡು ದಿನಗಳಿಂದ ಹಬ್ಬದಲ್ಲಿ ತೊಡಗಿದ್ದು, ಕೆಲವರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಹೀಗಾಗಿ ಕಸ ವಿಲೇವಾರಿ ಸಮರ್ಪಕವಾಗಿ ಆಗಿಲ್ಲ. ಬಡಾವಣೆಗಳಲ್ಲಿ ಮನೆ-ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ಸರಿಯಾಗಿ ಆಗಿಲ್ಲ. ಹೀಗಾಗಿ ಹಲವು ಬಡಾವಣೆಗಳಲ್ಲಿ ನಿವಾಸಿಗಳು ಮನೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸಮೀಪದ ಖಾಲಿ ಜಾಗಗಳು ಹಾಗೂ ರಸ್ತೆಯ ಪಕ್ಕದಲ್ಲಿ ಎಸೆದಿದ್ದು, ಸಣ್ಣ ಸಣ್ಣ ಕಸದ ಗುಡ್ಡೆಗಳು ಸೃಷ್ಟಿಯಾಗಿವೆ.
 

Follow Us:
Download App:
  • android
  • ios