ಭಾನುವಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಮುಂಗಾರು ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು/ ಮಂಗಳೂರು: ಮುಂಗಾರು ಮಳೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬೆಂಗಳೂರು ನಗರದಲ್ಲಿ ಭಾನುವಾರ ದಿನದ ಬಹುತೇಕ ಸಮಯ ಸಾಧರಣ ಮಳೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಭಾನುವಾರ ಮಳೆ ಕ್ಷೀಣಿಸಿತ್ತು. ಬೆಂಗಳೂರಿನಲ್ಲಿ ಮರಗಳು ಬಿದ್ದು ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಮವಾರ ಹಾಗೂ ಮಂಗಳವಾರವೂ ಬೆಂಗಳೂರಿನಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಸಾಧರಣ ಮಳೆ ಆರಂಭಗೊಂಡಿದ್ದು, ಬಳಿಕ ಸಂಜೆ ವರೆಗೂ ಬಿಟ್ಟು ಬಿಟ್ಟು ಸಾಧಾರಣ ಪ್ರಮಾಣದ ಮಳೆಯಾಗಿದೆ. ಗ್ರಾಮೀಣ ಭಾಗದ ಹಲವೆಡೆ ಉತ್ತಮ ಮಳೆಯಾಗಿದೆ.
ರಸ್ತೆ ಮೇಲೆಯೇ ನಿಂತ ಮಳೆ ನೀರು
ಇನ್ನು ಭಾನುವಾರ ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ನಂತರ 11.30ರಲ್ಲಿ ಆರಂಭವಾದ ತುಂತುರು ಮಳೆ ನಂತರ ರಭಸವಾಗಿ ಆರಂಭವಾಗಿ ಸುಮಾರು 1 ಗಂಟೆ ಸುರಿಯಿತು. ರಜೆ ದಿನ ಕಳೆಯಲು ವಿವಿಧ ಕಡೆಗಳಲ್ಲಿ ಬಂದಿದ್ದ ಜನರು ಕಿರಿಕಿರಿಗೊಂಡರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿಯೇ ತೊಯ್ದು ಪರದಾಡಿದರು.
ಕೆಲ ಅಂಡರ್ ಪಾಸ್ಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯಿತು. ಸಂಜೆ 4ರ ವೇಳೆಗೆ ಮತ್ತೆ ಆರಂಭವಾದ ಮಳೆ ಸತತ ಎರಡು ತಾಸು ಮಳೆ ಸುರಿಯಿತು. ಮೇಲ್ಸೇತುವೆಗಳಲ್ಲಿಯೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಂಜೆ 6ರ ನಂತರ ಮಳೆ ಬಿಡುವು ನೀಡಿದ್ದರೂ ಇಡೀ ದಿನ ಜನರು ಕಿರಿಕಿರಿ ಅನುಭವಿಸಿದರು.
ಎಲ್ಲಿ? ಎಷ್ಟು ಮಳೆ?
ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ 13.8 ಮಿಲಿ ಮೀಟರ್ ಮಳೆಯಾಗಿದೆ. ಮೂಲ್ಕಿ ತಾಲೂಕಿನಲ್ಲಿ 30.7 ಮಿ.ಮೀ., ಮಂಗಳೂರಿನಲ್ಲಿ 22.6, ಉಳ್ಳಾಲದಲ್ಲಿ 22.5, ಕಡಬದಲ್ಲಿ 18.1, ಮೂಡುಬಿದಿರೆಯಲ್ಲಿ 17, ಸುಳ್ಯದಲ್ಲಿ 14.2, ಬಂಟ್ವಾಳದಲ್ಲಿ 12.7, ಪುತ್ತೂರಿನಲ್ಲಿ 9.6, ಬೆಳ್ತಂಗಡಿಯಲ್ಲಿ 7.8 ಮಿ.ಮೀ., ಭಾನುವಾರ ಸಂಜೆವರೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 14.8 ಮಿ.ಮೀ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 0.8 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.


