ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಉಸ್ತುವಾರಿ ಸಮಿತಿ ಸಭೆ  ಸಭೆಯಿಂದ ಸಂಸದರ ಆಪ್ತ  ಮದನ್ ಕುಮಾರ್ ಹಾಗು ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಅವರನ್ನು ಹೊರಗೆ ಕಳುಹಿಸಿದ ಶಾಸಕರು

ಮಂಡ್ಯ (ಆ.19): ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಉಸ್ತುವಾರಿ ಸಮಿತಿ ಸಭೆಯಿಂದ ಸಂಸದರ ಆಪ್ತ ಮದನ್ ಕುಮಾರ್ ಹಾಗು ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಅವರನ್ನು ಹೊರಗೆ ಕಳುಹಿಸಿ ಸಂಸದರಿಗೆ ಇರಿಸು ಮುರಿಸು ಉಂಟು ಮಾಡಿದರು. 

Add Asianetnews Kannada as a Preferred SourcegooglePreferred

ಸಭೆಯ ಆರಂಭದಲ್ಲೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಿಇಒ ಜಿಆರ್‌ಜೆ ದಿವ್ಯ ಪ್ರಭು ಅವರನ್ನುದ್ದೇಶಿಸಿ ಸಭೆಗೆ ಸಂಬಂಧಿಸದ ಕೆಲವರು ಸಭೆಯಲ್ಲಿ ಇದ್ದಾರೆ. ಅವರನ್ನು ಹೊರಗೆ ಕಳುಹಿಸುವಂತೆ ಹೇಳಿದರು. ಅದೇ ಸಮಯದಲ್ಲಿ ಸಂಸದರ ಆಪ್ತ ಮದನ್ ಕುಮಾರ್ ಹಾಗು ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಸಂಸದೆ ಸುಮಲತಾ ಹಿಂಬದಿ ಕುಳಿತಿದ್ದರು. ಇದು ತಕ್ಷಣಕ್ಕೆ ಸಿಇಒ ಅವರಿಗೆ ಅರ್ಥವಾಗಲಿಲ್ಲ. ಸಭೆಗೆ ಸಂಬಂಧಿಸಿದವರನ್ನಷ್ಟೇ ಆಹ್ವಾನಿಸಲಾಗಿದೆ. ಅವರಷ್ಟೆ ಸಭೆಯಲ್ಲಿದ್ದಾರೆ ಎಂದರು. 

ಮಂಡ್ಯ ಜಿಲ್ಲೆಯನ್ನು ನಿಮಗೆ ಬರೆದು ಕೊಟ್ಟಿದ್ದಾರಾ? ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಸವಾಲ್

ಸರಿಯಾಗಿ ನೋಡಿ ಸಭೆಗೆ ಸಂಬಂಧಿಸಿದವರೂ ಇದ್ದಾರೆ ಎಂದಾಗ ಸಭೆಯಲ್ಲಿ ಯಾರಿರಬೇಕು ಯಾರಿರಬಾರದು ಎನ್ನುವುದನ್ನು ಜಿಲ್ಲಾಡಳಿತ ನಿರ್ಧರಿಸುತ್ತದೆ. ಅ ಅಧಿಕಾರ ನಮಗಿಲ್ಲ ಎಂದಾಗ ಸಂಸದರ ಅಪ್ತ ಕಾರ್ಯದರ್ಶಿ ಹಾಗು ಆಪ್ತರು ಇರುವುದನ್ನು ರವೀಂದ್ರ ಪ್ರಸ್ತಾಪಿಸಿದರು. ಆಗ ಸಭೆಯಿಂದ ಇಬ್ಬರು ಹೊರನಡೆದರು. 

ಇದೇ ವೇಳೆ ಸುಮಲತಾ ಅಂಬರೀಶ್ ಅವರು ಗೈಡ್‌ಲೈನ್ಸ್ ಪ್ರಕಾರ ವಿಧಾನ ಪರಿಷತ್ ಸದಸ್ಯರೂ ಇರುವಂತಿಲ್ಲ. ಹಾಗಾದರೆ ಅವರನ್ನು ಹೊರಗೆ ಕಳಿಸಬೇಕಲ್ಲವೆ ಎಂದು ತಿರುಗುಬಾಣ ಬಿಟ್ಟಾಗ ಶಾಸಕ ಪುಟ್ಟರಾಜು ನಾನು ಸಂಸದನಾಗಿದ್ದ ಅವಧಿಯಲ್ಲಿ ಎಂಎಲ್‌ಸಿಗಳು ಸಭೆಯಲ್ಲಿ ಭಾಗವಹಿಸಬಹುದಿತ್ತು. ಅವರಿಗೂ ಆಹ್ವಾನ ನೀಡುತ್ತಿದ್ದೆವು ಎಂದರು. 

ಈ ವೇಳೆ ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಸಭೆಯಿಂದ ಹೊರನಡೆದರು. ಅಪ್ಪಾಜಿಗೌಡ ಅಲ್ಲಿಯೇ ಇದ್ದರು.