ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ಆಗಬೇಕು : ರವೀಂದ್ರ ಶ್ರೀಕಂಠಯ್ಯ
- ಅಕ್ರಮಕೋರರನ್ನು ಜೊತೆಯಲ್ಲಿಟ್ಟುಕೊಂಡು ಕಾರ್ಯ ಚಟುವಟಿಕೆ ನಡೆಸುತ್ತಿರುವ ಸಂಸದೆ ಸುಮಲತಾ
- ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ
ಮಂಡ್ಯ (ಆ.20): ಅಕ್ರಮಕೋರರನ್ನು ಜೊತೆಯಲ್ಲಿಟ್ಟುಕೊಂಡು ಕಾರ್ಯ ಚಟುವಟಿಕೆ ನಡೆಸುತ್ತಿರುವ ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಎಂಬಾತ ಅಧಿಕೃತ ಕಾರ್ಯದರ್ಶಿಯೇ ಅಲ್ಲ. ಆತ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಧಮ್ಕಿ ಹಾಕುತ್ತಾನೆ. ಅಧಿಕಾರಿಗಳು ನಮ್ಮ ಬಳಿ ನೋವನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಸುಮಲತಾ ಆಪ್ತರನ್ನು ಹೊರಗೆ ಕಳುಹಿಸಿದ ಶಾಸಕರು
ಸುಮಲತಾ ಸಿಬ್ಬಂದಿ ಚೇತಕ್ ಎಂಬಾತ ನಯ ವಂಚಕ. ಮೆಡಿಕಲ್ ಸೀಟು ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಅವರನ್ನೆಲ್ಲಾ ಸಂಸದೆ ಸುಮಲತಾ ತಮ್ಮ ಪಿಎ ಎಂದು ಹೇಳಿ ಅಧಿಕಾರಿಗಳ ಬಳಿ ಕಳುಹಿಸುತ್ತಾರೆ.
ನಯವಂಚಕರನ್ನು ಇಟ್ಟುಕೊಂಡು ವ್ಯವಹರಿಸುವುದಕ್ಕೆ ಸಂಸದರಿಗೆ ಜಿಲ್ಲೆಯನ್ನು ಬರೆದುಕೊಟ್ಟಿದ್ದೇವಾ ಎಂದರು.
ಶ್ರೀನಿವಾಸ ಭಟ್ ಬಂಧನವಾಗಬೇಕು. ಆತನ ವಿರುದ್ಧ ತನಿಖೆ ನಡೆಯಬೇಕು. ಈ ವಿಚಾರವನ್ನು ಅಷ್ಟು ಸುಲಭವಾಗಿ ನಾವು ಬಿಡುವುದಿಲ್ಲ. ಕಾನೂನಾತ್ಮಕವಾಗಿ ಮುಂದುವರೆಯುತ್ತೇವೆ. ಸುಮಲತಾ ಅವರಿಗೆ ಗೊತ್ತಿದ್ದೆ ತಪ್ಪುಗಳೆಲ್ಲಾ ನಡೆದಿದ್ದು, ಆದ್ದರಿಂದ ಅವರ ವಿರುದ್ಧವು ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದರು.