Asianet Suvarna News Asianet Suvarna News

Kodagu: ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆಗೆ ಶಾಸಕ ಅಪ್ಪಚ್ಚುರಂಜನ್‌ ಸೂಚನೆ

ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಸೇರಿದ ಬೌಂಡರಿ ಗುರುತು ಕಾರ್ಯದಲ್ಲಿ ಅರಣ್ಯ ಇಲಾಖೆ ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆ, ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಶಾಸಕ ಅಪ್ಪಚ್ಚುರಂಜನ್‌ ಅವರು ಅರಣ್ಯ ಇಲಾಖೆಗೆ ಸೂಚನೆ ನೀಡಿದರು. 

MLA Appachu Ranjan instructed the forest department to solve the problem of the villagers gvd
Author
First Published Dec 14, 2022, 3:21 PM IST

ಸೋಮವಾರಪೇಟೆ (ಡಿ.14): ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಸೇರಿದ ಬೌಂಡರಿ ಗುರುತು ಕಾರ್ಯದಲ್ಲಿ ಅರಣ್ಯ ಇಲಾಖೆ ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆ, ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಶಾಸಕ ಅಪ್ಪಚ್ಚುರಂಜನ್‌ ಅವರು ಅರಣ್ಯ ಇಲಾಖೆಗೆ ಸೂಚನೆ ನೀಡಿದರು. 

ಈ ಹಿಂದೆ ಪುಷ್ಪಗಿರಿ ವನ್ಯಜೀವಿಧಾಮ ಅರಣ್ಯ ವಲಯ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರ ಸಮ್ಮುಖದೊಂದಿಗೆ ಸೇರಿ ಜಂಟಿ ಸರ್ವೆ ನಡೆಸಿ ಪುಷ್ಪಗಿರಿ ವೈಲ್ಡ್‌ ಲೈಫ್‌ನ ಗಡಿ ಗುರುತು ಮಾಡಿ ಜನವಸತಿ ಪ್ರದೇಶಕ್ಕೆ ಹತ್ತಿರವಾಗಿ ಗಡಿ ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿ ಜನರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಲಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರ ಬೇಡಿಕೆ ಆಲಿಸಿದ ಶಾಸಕ ರಂಜನ್‌ ಅವರು, ಪುಷ್ಪಗಿರಿ ವಲಯಕ್ಕೆ ಒಳಪಟ್ಟಸ್ಥಳವನ್ನು ಬಿಟ್ಟು ಬೇರೆಡೆಗೆ ಗಡಿ ಗುರುತು ಮಾಡಬಾರದು.

ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ

ಈಗಾಗಲೇ ಅಳಪಡಿಸಿರುವ ಗಡಿ ಕಲ್ಲುಗಳನ್ನು ಮುಂದಿನ 15 ದಿನಗಳ ಒಳಗೆ ತೆರವುಗೊಳಿಸಬೇಕು. ಸ್ಥಳೀಯರಿಗೆ ಯಾವುದೇ ಸಮಸ್ಯೆ ನೀಡಬಾರದು ಎಂದು ವನ್ಯಜೀವಿ ವಲಯದ ಎಸಿಎಫ್‌ ಶ್ರೀನಿವಾಸ್‌ ನಾಯಕ್‌, ಅರಣ್ಯ ಇಲಾಖೆಯ ಎಸಿಎಫ್‌ ಗೋಪಾಲ್‌, ಆರ್‌ಎಫ್‌ಓಗಳಾದ ಚೇತನ್‌, ವಿಮಲ್‌ಬಾಬು ಅವರಿಗೆ ಸೂಚಿಸಿದರು. ತಹಸೀಲ್ದಾರ್‌ ಎಸ್‌.ಎನ್‌. ನರಗುಂದ, ಕೊತ್ನಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಸಿ.ಕೆ. ರಾಮಚಂದ್ರ, ಕುಮಾರಳ್ಳಿ ಅಧ್ಯಕ್ಷ ಉದಯಕುಮಾರ್‌, ಕುಡಿಗಾಣ ಗ್ರಾಮಾಧ್ಯಕ್ಷ ದಿನೇಶ್‌ವಾಸು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮಗಾರಿಗಳಿಗೆ ಶಾಸಕ ರಂಜನ್‌ ಚಾಲನೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.13 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುವ ವಿವಿಧ ರಸ್ತೆ ಕಾಂಕ್ರೀಟ್‌, ಡಾಂಬರು, ಚರಂಡಿ, ಮೋರಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್‌ ಅವರು ಚಾಲನೆ ನೀಡಿದರು. ಇದರೊಂದಿಗೆ ಎನ್‌ಡಿಆರ್‌ಎಫ್‌ ಯೋಜನೆಯಡಿ ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಎಲ್ಲ ಗ್ರಾ.ಪಂ.ಗಳಿಗೆ ಅನುದಾನ ಹಂಚಿಕೆಯಾಗಿದೆ. 

ಗಂಗಾವತಿಯಲ್ಲಿ ನೂತನ ಮನೆ ಗೃಹ ಪ್ರವೇಶ ಮಾಡಿದ ಜನಾರ್ಧನ ರೆಡ್ಡಿ: ಪತ್ನಿ ಅರುಣಾ ಲಕ್ಷ್ಮೀ ಹೇಳಿದ್ದೇನು?

ಕಾವೇರಿ ನೀರಾವರಿ ನಿಗಮದಿಂದ ಕ್ಷೇತ್ರದ 6 ಗ್ರಾ.ಪಂ. ಗಳಾದ ಕೊಡ್ಲಿಪೇಟೆ, ಬ್ಯಾಡಗೊಟ್ಟ, ಹಂಡ್ಲಿ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಭಾಗದಲ್ಲಿ 20 ಕೋಟಿ ರು. ವೆಚ್ಚದಲ್ಲಿ ಕೆಲಸಗಳು ಆರಂಭವಾಗಲಿವೆ ಎಂದರು. ತೋಳೂರುಶೆಟ್ಟಳ್ಳಿ ಗ್ರಾ. ಪಂ. ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮ, ನಡ್ಲಕೊಪ್ಪ, ಸುಗ್ಗಿ ದೇವಸ್ಥಾನ ರಸ್ತೆ, ನಗರಳ್ಳಿ, ಕೆರೆಕೊಪ್ಪ, ಎಡದಂಟೆ, ಸಿಂಗನಹಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಇನಕನಹಳ್ಳಿ, ಕಂಬಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌, ಅಭಿವೃದ್ಧಿ ಅಧಿಕಾರಿ ಮಂಜುಳಾ, ಸದಸ್ಯರಾದ ಮೋಹಿತ್‌, ರುದ್ರಪ್ಪ, ದಿವ್ಯ, ಪ್ರವೀಣ್‌ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios