ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 24 ಸೊಂತರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಎಡವಟ್ಟು ಆಗಿದೆ.

ಚಾಮರಾಜನಗರ, (ಮೇ.03): ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಆಮ್ಲಜನಕ ಕೊರತೆಯಿಂದಾಗಿ 24 ಗಂಟೆಗಳಲ್ಲಿ 24 ಕೊರೋನಾ ಸೊಂಕಿತರು ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಇದೀಗ ಇದರ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತನ ಮೃತದೇಹ ಪತ್ತೆಯಾಗಿದೆ.

'ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ: ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ'

ಚಾಮರಾಜನಗರ ತಾಲೂಕು ಆಲ್ದೂರು ಗ್ರಾಮದ ಸುರೇಶ್ ಮೃತಪಟ್ಟಿರುವ ಸೋಂಕಿತ. ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ನಾಪತ್ತೆಯಾಗಿದ್ದರೂ, ಆಸ್ಪತ್ರೆಯವರು ಆತನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

ತನ್ನ ಪತಿ ಕಾಣಿಸುತ್ತಿಲ್ಲ ಎಂದು ಸುರೇಶ್ ಪತ್ನಿ ಎಲ್ಲೆಡೆ ಹುಡುಕಾಡಿದ್ದಾರೆ. ಪತಿಯ ಬಗ್ಗೆ ಆಸ್ಪತ್ರೆಯಲ್ಲೂ ವಿಚಾರಿಸಿದ್ದಾರೆ. ಆದರೂ ಎಲ್ಲಿಯೂ ಸರಿಯಾದ ಮಾಹಿತಿ ಸಿಗದೆ ಬೇಸತ್ತ ಆಕೆ ಕೊನೆಗೆ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಕೊರೋನಾ ಸೋಂಕಿತ ತಮ್ಮ ಪತಿ ಕಾಣಿಸುತ್ತಿಲ್ಲ, ಆಸ್ಪತ್ರೆಯಲ್ಲಿ ಕೇಳಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅವರು ಪತ್ರಕರ್ತರ ಬಳಿ ಅಲವತ್ತುಕೊಂಡಿದ್ದಾರೆ. ಬಳಿಕ ಮಾಧ್ಯಮದವರ ಮಧ್ಯಪ್ರವೇಶದಿಂದಾಗಿ ಆಕೆಯ ಪತಿಯ ಶವ ಆಸ್ಪತ್ರೆಯ ಶವಾಗಾರದಲ್ಲಿರುವುದು ಗೊತ್ತಾಗಿದೆ.

ಚಾಮರಾಜನಗರ ಆಸ್ಪತ್ರೆ ದುರಂತ : ಘಟನೆಯ ತನಿಖೆಗೆ ರಾಜ್ಯ ಸರ್ಕಾರ ಆದೇಶ 

ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಇಂದು (ಸೋಮವಾರ) ಬೆಳಗ್ಗೆ ಇದೇ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸುರೇಶ್ ಶವವಾಗಿ ಪತ್ತೆಯಾಗಿದ್ದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅದನ್ನು ಅನಾಥ ಶವ ಎಂದು ಭಾವಿಸಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದರು.

ಸುರೇಶ್ ಮೃತದೇಹ ಶವಾಗಾರದಲ್ಲಿ ಕಂಡುಬಂದಿದ್ದನ್ನು ತಿಳಿದ ಬಳಿಕ ಅವರ ಕುಟುಂಬಸ್ಥರು ಗೋಳಾಡಿದ್ದು, ಕೊರೋನಾ ರೋಗಿಯನ್ನು ಹೊರಹೋಗಲು ಬಿಟ್ಟು ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.