ಮನೇಲಿ ಜಗಳವಾಡಿ, ನಗರಕ್ಕೆ ಬಂದಿದ್ದ ಅಪ್ರಾಪ್ತೆ ರಕ್ಷಣೆ : ಪುಸಲಾಯಿಸಿ ಕರೆದೊಯ್ದಿದ್ದವರು ಅರೆಸ್ಟ್
ಮನೆಯಲ್ಲಿ ಜಗಳವಾಡಿ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರಿನಲ್ಲಿ ರಕ್ಷಣೆ ಮಾಡಲಾಗಿದ್ದು, ಆಕೆಯನ್ನು ಪುಸಲಾಯಿಸಿ ಕರೆದೊಯ್ಯುತ್ತಿದ್ದ ಯುವಕರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು [ಡಿ.15]: ಮನೆಯಲ್ಲಿ ಜಗಳ ಮಾಡಿಕೊಂಡು ಮೈಸೂರಿನಿಂದ ನಗರಕ್ಕೆ ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆ ದೊಯ್ಯುತ್ತಿದ್ದ ಇಬ್ಬರು ಯುವಕರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದು, ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
16 ವರ್ಷದ ಬಾಲಕಿಯನ್ನು ರಕ್ಷಿಸಿದ ಹೊಯ್ಸಳ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಪ್ರಶಂಸನಾ ಪತ್ರ ನೀಡಿದ್ದಾರೆ. ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಕರೆದೊಯ್ದು ಬಿಡಲಾಗಿದೆ.
ಅಪ್ರಾಪ್ತೆ ಮನೆಯಲ್ಲಿ ಜಗಳ ಮಾಡಿಕೊಂಡು ಮೈಸೂರಿನಿಂದ ರೈಲಿನಲ್ಲಿ ನಗರಕ್ಕೆ ಬಂದಿದ್ದಳು. ಶುಕ್ರವಾರ ರಾತ್ರಿ 11.45ರ ಸುಮಾರಿಗೆ ಯುವತಿ ಕ್ವಿನ್ಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇಬ್ಬರು ಯುವಕರು ಆಕೆಯನ್ನು ಹಿಂಬಾಲಿಸುತ್ತಿದ್ದರು. ಅನುಮಾನಗೊಂಡ ಸಾರ್ವಜನಿಕರೊಬ್ಬರು ಹೈಗ್ರೌಂಡ್ಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಎಸ್.ಆರ್.ಅರಿಬೆಂಚಿ, ಜ್ಯೋತಿಬಾಯಿ ಹಾಗೂ ಚಂದ್ರಕಲಾ ಅವರು ಸ್ಥಳಕ್ಕೆ ತೆರಳಿದ್ದರು.
PUCಯಲ್ಲಿ ಪ್ರಥಮ ರ್ಯಾಂಕ್ ಬಂದಿದ್ದ ವಿವಾಹಿತೆ ಗ್ರಾಮಲೆಕ್ಕಾಧಿಕಾರಿ ನಾಪತ್ತೆ...
ಅಷ್ಟರಲ್ಲಿ ಯುವತಿ ಇಬ್ಬರು ಯುವಕರ ಜತೆ ನಡೆದುಕೊಂಡು ಹೋಗುತ್ತಿದ್ದಳು. ಹೊಯ್ಸಳ ಸಿಬ್ಬಂದಿ ಬಾಲಕಿಯನ್ನು ಪ್ರಶ್ನಿಸಿದಾಗ, ಹಣ ಕೊಡುತ್ತೇವೆ ಎಂದು ಹೇಳಿದರು. ಹೀಗಾಗಿ ಅವರ ಜತೆ ಹೋಗುತ್ತಿರುವುದಾಗಿ ಹೇಳಿದ್ದಳು. ಕೂಡಲೇ ಪೊಲೀಸರು ಯುವಕರನ್ನು ಬಾಲಕಿ ಜತೆ ಠಾಣೆಗೆ ಕರೆ ತಂದಿದ್ದಾರೆ.
ಬಾಲಕಿ ಜಗಳ ಮಾಡಿಕೊಂಡು ನಗರಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ್ದು, ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇನ್ನು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.