ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ದಾಬಸ್‌ಪೇಟೆ - ಚೆನೈ ರಾಷ್ಟ್ರೀಯ ಹೆದ್ದಾರಿ 648 ನಿರ್ಮಾಣ ತುಂಬಾ ಅನುಕೂಲಕರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ದಾಬಸ್‌ಪೇಟೆ (ಸೆ.10): ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ದಾಬಸ್‌ಪೇಟೆ - ಚೆನೈ ರಾಷ್ಟ್ರೀಯ ಹೆದ್ದಾರಿ 648 ನಿರ್ಮಾಣ ತುಂಬಾ ಅನುಕೂಲಕರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ದಾಬಸ್‌ಪೇಟೆ ಪಟ್ಟಣದಲ್ಲಿ ಮೊದಲ ಬಾರಿಗೆ ಸಚಿವರು ಅಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ 648ರ ನೀಲನಕ್ಷೆ ಮತ್ತು ಹೆದ್ದಾರಿ ಸ್ವರೂಪ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.

Add Asianetnews Kannada as a Preferred SourcegooglePreferred

ಬಹಳ ಹಳೆಯದಾದ ಯೋಜನೆಯ ಕಾಮಗಾರಿ ಅಂತಿಮ ಘಟ್ಟ ತಲುಪಿದೆ. ಪ್ರಥಮ ಬಾರಿಗೆ ವೀಕ್ಷಿಸಿದ್ದೇನೆ, ಹಲವು ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಾರಗೊಳ್ಳಲಿದೆ. ಇಂದು ಸಂಪೂರ್ಣ ದಿನ ಹೆದ್ದಾರಿ ವೀಕ್ಷಿಸಿದ್ದೇನೆ. ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ತ್ವರಿತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಮಾನತೆ ತತ್ವದ ಬೀಜ ಬಿತ್ತಿದವರು ಬಸವಣ್ಣವರು: ಜಗದೀಶ್ ಶೆಟ್ಟರ್

ಹೊರವರ್ತುಲ ರಸ್ತೆ: ದಾಬಸ್‌ಪೇಟೆ ಒಳಗೊಂಡಂತೆ ರಾಜಧಾನಿ ಬೆಂಗಳೂರು ಹೊರವರ್ತುಲ ರಸ್ತೆ ಗಮನದಲ್ಲಿದ್ದು, ಆ ಕಾಮಗಾರಿ ಪ್ರಾರಂಭವಾಗಬೇಕು. 648 ರಾಷ್ಟ್ರೀಯ ಹೆದ್ದಾರಿ ಬಹುಮಖ್ಯ, ಹೈದರಾಬಾದ್, ಚೆನೈಗೆ, ದಾಬಸ್‌ಪೇಟೆ ಸಂಪರ್ಕಕ್ಕೆ ಒತ್ತು ನೀಡುತ್ತೇವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.

ವಾಹನ ನಿರ್ಬಂಧ ಚರ್ಚಿಸುವೆ: ಬೆಂಗಳೂರು-ಮೈಸೂರು ದಶಪಥದಲ್ಲಿ ಕೆಲವು ವಾಹನಗಳ ನಿರ್ಬಂಧ ಇದೆ. ಈ ಹೆದ್ದಾರಿಯಲ್ಲೂ ಯಾವ ವಾಹನಗಳಿಗೆ ಅವಕಾಶ ಮತ್ತು ನಿರ್ಬಂಧ ಎಂಬುದರ ಬಗ್ಗೆ ಚರ್ಚಿಸುತ್ತೇನೆ. ಮೈಸೂರು ದಶಪಥ ರಸ್ತೆಯ ಸ್ವರೂಪವೇ ಬೇರೆ, ಈ ಹೆದ್ದಾರಿಯ ಸ್ವರೂಪವೇ ಬೇರೆ, ಸಭೆ, ಚರ್ಚೆ ಮುಖಾಂತರ ಯಾವುದು ಉತ್ತಮ ನಿರ್ಧಾರವೋ ಅದಕ್ಕೆ ಒತ್ತು ನೀಡುತ್ತೇವೆ. ಕೆಶಿಪ್ ರಸ್ತೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದ ಎಂದು ಹೇಳಿದರು.

ಸ್ಥಳೀಯರ ಒತ್ತಾಯಕ್ಕೆ, ಭರವಸೆ: ಗ್ರಾಪಂ ಸದಸ್ಯ ಬಸವರಾಜು, ಮುಖಂಡ ಮಹೇಶ್ ಹಾಗೂ ಎಲ್ಲಾ ನಾಗರಿಕರು ಸೇರಿ, ದಾಬಸ್‌ಪೇಟೆ ಹೃದಯ ಭಾಗದಲ್ಲಿ ಹಾದು ಹೋಗುವ ಹೆದ್ದಾರಿ, ಇಡೀ ಪಟ್ಟಣವನ್ನು ಎರಡು ವಿಭಾಗ ಮಾಡಿದೆ. ಆರ್ಯ-ವೈಶ್ಯ ಬೀದಿ ಮಧ್ಯೆ ರಸ್ತೆಯಲ್ಲಿ, ನಾಗರಿಕರು ರಸ್ತೆ ದಾಟಲು ಅವಕಾಶ ಅಥವಾ ಕೆಳಸೇತುವೆ, ಸ್ಕೈ ವಾಕ್ ಮಾಡಿಕೊಡಬೇಕೆಂದು ಒತ್ತಾಯಿಸಿದಾಗ, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಯಕುಮಾರ್ ಮತ್ತು ಮುಖ್ಯ ವ್ಯವಸ್ಥಾಪಕ ರವೀಂದ್ರನಾಥ್, ಸಚಿವರಿಗೆ ನೀಲನಕ್ಷೆ ಕುರಿತು ವಿವರಿಸಿದರು. ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಬೆಂಗಳೂರು-ಚನ್ನೈ ಎಕ್ಸ್‌ ಪ್ರೆಸ್‌ ಹೈವೇ ಪರಿಶೀಲನೆ: ನಗರದ ಹೊರವಲಯದ ಕೊಳತೂರು ಗೇಟ್ ಬಳಿ ಹಾದು ಹೋಗಿರುವ ಬೆಂಗಳೂರು-ಚನ್ನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಿಕಿಹೊಳಿ, ಶಾಸಕ ಶರತ್ ಬಚ್ಚೇಗೌಡರೊಂದಿಗೆ ಪರಿಶೀಲಿಸಿದರು. ತಾಲೂಕಿನ ಸೂಲಿಬೆಲೆ ಗಡಿಭಾಗದ ನಲ್ಲೂರು ಬಳಿಯ ಟೋಲ್‌ನಿಂದ ನಗರದ ಹೊರವಲಯದ ಕೊಳತೂರು ಗೇಟ್ ವರೆಗೂ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ, ಹೆದ್ದಾರಿ ಯೋಜನಾ ನಿರ್ದೇಶಕಿ ಅರ್ಚನಾ ಅವರಿಂದ ಸಂಪೂರ್ಣ ಮಾಹಿತಿ ಪಡೆದರು. ಅಷ್ಟೇ ಅಲ್ಲದೆ ಹೆದ್ದಾರಿಗಳಲ್ಲಿ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

ಸರ್ವೀಸ್ ರಸ್ತೆಗೆ ಮನವಿ: ಇದೇ ವೇಳೆ ಕೊಳತೂರು ಗ್ರಾಮದ ರೈತರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ನಮ್ಮ ಜಮೀನು ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ನಮ್ಮ ಜಮೀನಿಗೆ ತೆರಳಲು ಸರ್ವೀಸ್ ರಸ್ತೆ ಇಲ್ಲದೆ ಸಾಕಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಚಿವರು, ರೈತರು ಹೆದ್ದಾರಿ ಪ್ರಾಧಿಕಾರಕ್ಕೆ ತಮ್ಮ ಜಮೀನನ್ನು ಬಿಟ್ಟುಕೊಟ್ಟರೆ ಅವರಿಗೆ ಸರ್ವೀಸ್ ರಸ್ತೆ ಕೊಟ್ಟು ಜಮೀನಿಗೆ ತೆರಳಲು ಅವಕಾಶ ಮಾಡಿಕೊಡಬೇಕು. ಪ್ರಾಧಿಕಾರದ ಅಧಿಕಾರಿಗಳು ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.

ರೈಲ್ವೆ ಓವರ್ ಬ್ರಿಡ್ಜ್ ಸ್ಥಳ ಪರಿಶೀಲನೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೊರಳೂರು ಗೇಟ್ ಬಳಿ ರೈಲ್ವೇ ಅಂಡರ್ ಬ್ರಿಡ್ಜ್ ನಿರ್ಮಾಣದ ಬೇಡಿಕೆ ದಶಕಗಳಿಂದ ಇರುವ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯೋಜನೆಗೆ ಅಗತ್ಯ ಎಲ್ಲಾ ಅನುದಾನ ಕೊಡಿಸುವ ಭರವಸೆ ನೀಡಿದರು. ಸ್ಥಳೀಯವಾಗಿ ಇರುವ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.