ಗೆಳೆಯ ಅಂಗಡಿ ಸಾವಿನಿಂದ ವಿಚಲಿತನಾಗಿದ್ದೇನೆ: ಜಾರಕಿಹೊಳಿ
ಅಂಗಡಿಯವರಿಗೆ ಕಾಂಗ್ರೆಸ್, ಬಿಜೆಪಿಯವರು ಯಾರೂ ವಿರೋಧ ಮಾಡುತ್ತಿರಲಿಲ್ಲ| ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ನಮ್ಮ ಮನೆಯಲ್ಲಿ ಬೆಳೆದವರು. ಅವರು ನಮಗೆ ಚಿಕ್ಕ ಸಹೋದರಿ ಹಾಗೆ ಇದ್ದರು. ಅವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಂಡಿದ್ದೇನೆ ಎಂದ ಜಾರಕಿಹೊಳಿ|
ಬೆಳಗಾವಿ(ಅ.03): ಸುರೇಶ್ ಅಂಗಡಿ, ಸಚಿವ ಜಗದೀಶ್ ಶೆಟ್ಟರ್ ಹಾಗೂ ನಾವು ಒಂದು ತಂಡ ರಚನೆ ಮಾಡಿ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿದ್ದೆವು. ಆತ್ಮೀಯ ಗೆಳೆಯನ ಸಾವಿನಿಂದ ವಿಚಲಿತನಾಗಿದ್ದೇನೆ. ಅಂಗಡಿ ಅವರು ಪಕ್ಷಾತೀತವಾಗಿ ಎಲ್ಲರ ಕೆಲಸ ಮಾಡಿಕೊಡುತ್ತಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂಗಡಿಯವರಿಗೆ ಕಾಂಗ್ರೆಸ್, ಬಿಜೆಪಿಯವರು ಯಾರೂ ವಿರೋಧ ಮಾಡುತ್ತಿರಲಿಲ್ಲ. ಅವರ ಪತ್ನಿ ಮಂಗಲಾ ಅಂಗಡಿ ಅವರು ನಮ್ಮ ಮನೆಯಲ್ಲಿ ಬೆಳೆದವರು. ಅವರು ನಮಗೆ ಚಿಕ್ಕ ಸಹೋದರಿ ಹಾಗೆ ಇದ್ದರು. ಅವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಂಡಿದ್ದೇನೆ ಎಂದಿದ್ದಾರೆ.
'ಅಂಗಡಿ ಕೇಂದ್ರದ ಮಂತ್ರಿ ಆಗಿದ್ರೂ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಸರ್ಕಾರಕ್ಕೆ ಆಗಲಿಲ್ಲ'
ಕೋವಿಡ್-19 ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.