ಹುಬ್ಬಳ್ಳಿ: ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ ಅಶೋಕ್
ಬಹುದಿನಗಳ ಕನಸು ಹೈಸ್ಕೂಲ್, ಅಂಬೇಡ್ಕರ್ ಕಾಲನಿಗೆ 2 ಎಕರೆ ಜಮೀನು ಮಂಜೂರು| ಮನೆ ಮನೆಗೆ ಭೇಟಿ ನೀಡಿದ ಸಚಿವರು| ಅಧಿಕಾರಿಗಳಿಂದ ಜನರ ಸಮಸ್ಯೆಗೆ ಸ್ಪಂದನೆ| ಶಾಲೆಯಲ್ಲಿ ವಾಸ್ತವ್ಯ ಹೂಡಿದ ಕಂದಾಯ ಸಚಿವರು| ಛಬ್ಬಿ ಗ್ರಾಮದಲ್ಲಿ ಹಬ್ಬದ ಸಂಭ್ರಮ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮಾ.21): ಸ್ಥಳದಲ್ಲಿಯೇ ಹೈಸ್ಕೂಲ್ ಮಂಜೂರು, ಚರಂಡಿ ನಿರ್ಮಾಣಕ್ಕೆ ಹಣ ಮಂಜೂರು, ಅಂಬೇಡ್ಕರ್ ಕಾಲನಿಗೆ ಎರಡು ಎಕರೆ ಜಮೀನು ಮಂಜೂರು.... ಹೀಗೆ ಹತ್ತಾರು ಸಮಸ್ಯೆಗಳನ್ನು ಕಂದಾಯ ಸಚಿವ ಆರ್.ಆಶೋಕ್ ಅವರು ಸ್ಥಳದಲ್ಲಿಯೇ ಪರಿಹರಿಸಿದ ಘಟನೆ ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಕಂಡುಂಬಂದಿತು.
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ್ ಮತ್ತು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಇಡೀ ಸರ್ಕಾರಿ ಆಡಳಿತ ಯಂತ್ರವನ್ನು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಕೊಂಡೊಯ್ದು ಸೇವೆಗೆ ಅಣಿಯಾದಾಗ ಗ್ರಾಮಲ್ಲಿ ಕಂಡುಬಂದ ಚಿತ್ರಣವಿದು.
"
ಮಂಜೂರಾಯ್ತು ವಸತಿ ಶಾಲೆ:
ಬೂ.ಅರಳಿಕಟ್ಟಿ ಹೈಸ್ಕೂಲು ನಮ್ಮೂರಿಂದ 4 ಕಿ.ಮೀ. ದೂರದಲ್ಲಿವೆ. ಶಾಲೆಗೆ ಹೋಗಲು ಸರಿಯಾಗಿ ಬಸ್ ಬರುವುದಿಲ್ಲ. ದಿನಾ ಒಂದೆರಡ ಕ್ಲಾಸ್ ತಪ್ಪುತದೆ. ಇಲ್ಲಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಸ್ಕೂಲ್ಗೆ ಹೋಗುತ್ತೇವೆ. ಹೀಗಾಗಿ ನಮ್ಮೂರಿಗೂ ಒಂದ್ ಹೈಸ್ಕೂಲ್ ಮಂಜೂರು ಮಾಡ್ರಿ ಎಂದು ಗ್ರಾಮಸ್ಥರು, ಶಾಲಾ ಮಕ್ಕಳು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಸಂಬಂಧಿಸಿದ ಸಚಿವರು, ಛಬ್ಬಿಯಲ್ಲಿ 6.50 ಎಕರೆ ಜಮೀನನ್ನು ಮಂಜೂರು ಮಾಡಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯಿಂದ .20 ಕೋಟಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಇದರೊಂದಿಗೆ ಬಹುವರ್ಷಗಳ ಬೇಡಿಕೆಯನ್ನು ಸಚಿವರು ಸ್ಥಳದಲ್ಲೇ ಪರಿಹರಿಸಿದಂತಾಯಿತು.
ದಲಿತರ ಮನೆಯಲ್ಲಿ ಚಹಾ ಸವಿದ ಅಶೋಕ್
ಚರಂಡಿ ನಿರ್ಮಾಣ:
ಗ್ರಾಮದ ಅಂಬೇಡ್ಕರ್ ಕಾಲನಿಯ ಕಲ್ಲಪ್ಪ ಯಲ್ಲಪ್ಪ ದೊಡ್ಡಮನಿ ಅವರ ಮನೆಯ ಕಟ್ಟೆಯ ಮೇಲೆ ಗ್ರಾಮಸ್ಥರೊಂದಿಗೆ ಕುಳಿತ ಸಚಿವ ಅಲ್ಲೇ ಗ್ರಾಮಸ್ಥರ ಅಹವಾಲು ಆಲಿಸಿದರು. ಈ ವೇಳೆ ಅಂಬೇಡ್ಕರ್ ಕಾಲನಿಯ 3 ಗುಂಟೆ ಜಾಗೆಯನ್ನು ಕೆಎಂಎಫ್ಗೆ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ. ಅದಕ್ಕೆ ನಮ್ಮ ಸಮಾಜದ ಅಭಿವೃದ್ಧಿಗೆ ಬೇರೆಡೆ ಜಾಗ ನೀಡುವಂತೆ ಸುರೇಶ್ ಸಚಿವರಲ್ಲಿ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಸಚಿವರು, ಕಂದಾಯ ಇಲಾಖೆಗೆ ಸಂಬಂಧಪಟ್ಟಂತ ಜಾಗ ಹುಡುಕಿ 2 ಎಕರೆ ಜಮೀನನ್ನು ಕಾಲನಿಯ ಅಭಿವೃದ್ಧಿಗಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳಿಗೆ ಜಾಗ ನೋಡುವಂತೆ ಸೂಚಿಸಿದರು.
ಇದೇ ವೇಳೆ ಅಂಬೇಡ್ಕರ್ ಕಾಲನಿಗೆ ಚರಂಡಿ, ಗಟಾರ್ ವ್ಯವಸ್ಥೆಯಿಲ್ಲ. ಇದರಿಂದ ಮಳೆ ಬಂದರೆ ಸಿಕ್ಕಾಪಟ್ಟೆತೊಂದರೆಯಾಗುತ್ತಿದೆ. ಆದಕಾರಣ ಗಟಾರ್, ಚರಂಡಿ ನಿರ್ಮಿಸುವಂತೆ ಬೇಡಿಕೆ ಸಲ್ಲಿಸಿದರು. ಇದಕ್ಕೆ ಅಸ್ತು ಎಂದ ಸಚಿವ ಆರ್.ಅಶೋಕ್, ಇಲ್ಲಿನ ಗಟಾರ್ ನಿರ್ಮಿಸಲು . 22 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ್ಥಳದಲ್ಲೇ ಈ ಸಂಬಂಧ ಆದೇಶವನ್ನು ಹೊರಡಿಸಿದ್ದು ವಿಶೇಷ.
ಇದಕ್ಕೂ ಮುನ್ನ ಮನೆ ಮನೆಗೆ ಭೇಟಿ:
ಇದಕ್ಕೂ ಮುನ್ನ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ಸಚಿವರು ಗ್ರಾಮದಲ್ಲಿನ ಅಂಬೇಡ್ಕರ್ ಕಾಲನಿ ಮನೆ ಮನೆಗೆ ತೆರಳಿದರು. ದಾರಿಯಲ್ಲಿ ಯಾರೇ ಕಂಡರೂ ಅವರನ್ನು ಮಾತನಾಡಿಸುತ್ತಾ, ಏನು ನಿಮ್ಮ ಸಮಸ್ಯೆ, ಇಡೀ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಇಲ್ಲೇ ಪರಿಹರಿಸುತ್ತೇನೆ ಎಂದು ಸಮಸ್ಯೆ ಕೇಳುತ್ತಾ ಸಚಿವರು ಸಾಗುತ್ತಿದ್ದರೆ, ಹಿಂದೆ ಅಧಿಕಾರಿಗಳು ದಂಡು ಬರುತ್ತಿತ್ತು.
ಅಂಬೇಡ್ಕರ್ ಕಾಲನಿಯ ಕಲ್ಲಪ್ಪ ಯಲ್ಲಪ್ಪ ದೊಡ್ಡಮನಿ ಎಂಬುವವರ ಮನೆಗೆ ತೆರಳಿದ ಸಚಿವರು ಅಲ್ಲೇ, ಕಟ್ಟೆಮೇಲೆ ಕುಳಿತು ಗ್ರಾಮಸ್ಥರೊಂದಿಗೆ ಚಹಾ ಸವಿದಿದ್ದು ವಿಶೇಷ. ಹೀಗೆ ಊರೆಲ್ಲೆಲ್ಲ ಸುತ್ತಾಡಿ ಗ್ರಾಮದ ಮಗನಂತೆ ಸಮಾಧಾನಚಿತ್ತರಾಗಿ ಎಲ್ಲರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಿದರು.
ಊರೆಲ್ಲ ಸುತ್ತಾಡುತ್ತಾ ಗ್ರಾಮದ ಮಗನಂತೆ ಮನೆ ಮನೆಗೆ ತಾವೇ ಖುದ್ದಾಗಿ ತೆರಳಿ ಏನಮ್ಮ ನಿಮ್ಮ ಸಮಸ್ಯೆ ಹೇಳಿಕೊಳ್ಳಿ..’ ಎಂದು ಕೇಳುತ್ತಾ ಗ್ರಾಮಸ್ಥರ ಸಮಸ್ಯೆಗಳಿಗೆ ಸಚಿವರು ಕಿವಿಯಾದರು. ಅಲ್ಲದೇ, ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು ವಿಶೇಷ. ಗ್ರಾಮಸ್ಥರು ಕೂಡ ಅಷ್ಟೇ ಉತ್ಸುಕತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಚಿವರು, ಅಧಿಕಾರಿಗಳ ನಿರೀಕ್ಷೆಗೂ ಮೀರಿ ಛಬ್ಬಿ ಗ್ರಾಮ ವಾಸ್ತವ್ಯ ಅತ್ಯದ್ಭುತ ಎನ್ನುವಷ್ಟುಯಶಸ್ವಿಯಾಗಿದ್ದು ವಿಶೇಷ.
ವ್ಹೀಲ್ ಚೇರ್ ವಿತರಣೆ:
ಅಂಗವಿಕಲರಿಗೆ ವ್ಹೀಲ್ ಚೇರ್, ಕನ್ನಡಕ, ಮಕ್ಕಳಿಗೆ ಅಕ್ಷರ ದಾಸೋಹದ ಆಹಾರದ ಕಿಟ್, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಚಿವರು ವಿತರಿಸಿದರು.
ಶಾಲೆಯಲ್ಲಿ ವಾಸ್ತವ್ಯ:
ಸಂಜೆ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಪ್ರದರ್ಶಿಸಿದ ಸಂಗ್ಯಾಬಾಳ್ಯ, ರಂಗಾಯಣದ ಕಲಾವಿದರಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚಿವರ ವಾಸ್ತವ್ಯ ಮಾಡಿದರು.
ಎತ್ತಿನ ಬಂಡಿ ಮೆರವಣಿಗೆ:
ಛಬ್ಬಿ ಗ್ರಾಮಕ್ಕೆ ಮಧ್ಯಾಹ್ನ 12ಗಂಟೆಗೆ ಆಗಮಿಸಿದ ಸಚಿವರು, ಗ್ರಾಮದಲ್ಲಿನ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸಚಿವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಮಹಿಳಾ ಸಂಘಗಳ ಸದಸ್ಯೆಯರು ಆರತಿ ಬೆಳಗಿ, ಪೂರ್ಣಕುಂಭದ ಸ್ವಾಗತ ಕೋರಿದರು. ನಂತರ ಎತ್ತಿನ ಬಂಡಿಯೊಳಗೆ ಸಚಿವರನ್ನು ಹತ್ತಿಸಿ ಊರೆಲ್ಲ ಮೆರವಣಿಗೆ ನಡೆಸಿದರು. ವಿವಿಧ ವಾದ್ಯ- ಮೇಳಗಳು ಪಾಲ್ಗೊಂಡಿದ್ದವು. ಸಿದ್ಧಾರೂಢ ಮಠದಿಂದ ಸರ್ಕಾರಿ ಪ್ರಾಥಮಿಕ ಶಾಲೆವರೆಗೂ ಮೆರವಣಿಗೆ ನಡೆಯಿತು.