ಉಳಿದ ಮೂರು ವರ್ಷವೂ ಯಡಿಯೂರಪ್ಪನವರೇ ಸಿಎಂ: ಆರ್‌. ಅಶೋಕ| ಸಿಎಂ ದೆಹಲಿ ಪ್ರವಾಸದ ಕುರಿತು ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಕೇಂದ್ರದ ಮನವೊಲಿಸಿ ಹಣ ತಂದೇ ತರುತ್ತಾರೆ. ಅದರಲ್ಲಿ ಅನುಮಾನ ಬೇಡ| ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ| 

ಕೊಪ್ಪಳ(ಸೆ.18): ಮುಂದಿನ ಮೂರು ವರ್ಷವೂ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಅದರಲ್ಲಿ ಯಾವುದೇ ಸಂದೇಹ ಬೇಡ. ಅವರೊಂದು ರೀತಿಯಲ್ಲಿ ರಾಜಾಹುಲಿ ಇದ್ದಂಗೆ ಎಂದು ಕಂದಾಯ ಸಚಿವ ಆರ್‌. ಅಶೋಕ ಸ್ಪಷ್ಟಪಡಿಸಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರ ಬದಲಾವಣೆ ಯತ್ನ ನಡೆದಿದೆ ಎನ್ನುವುದು ಸುಳ್ಳು. ಅವರು ಕಬಡ್ಡಿ ಪ್ಲೇಯರ್‌ ಇದ್ದಂತೆ. ಅವರು ಕ್ಯಾಪ್ಟನ್‌ ರೀತಿಯಲ್ಲಿ ರೈಡ್‌ ಮಾಡ್ತಾರೆ, ಕ್ಯಾಚು ಹಿಡಿತಾರೆ. ಅವರ ದೆಹಲಿ ಪ್ರವಾಸದ ಕುರಿತು ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಕೇಂದ್ರದ ಮನವೊಲಿಸಿ ಹಣ ತಂದೇ ತರುತ್ತಾರೆ. ಅದರಲ್ಲಿ ಅನುಮಾನ ಬೇಡ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ. ಪಕ್ಕದ ಆಂಧ್ರದಲ್ಲಿ ಸರ್ಕಾರ ಶೇ. 60ರಷ್ಟು ವೇತನ ಕಡಿತ ಮಾಡಿದೆ. ಆದರೆ, ನಾವು ಅಂಥದ್ದನ್ನು ಮಾಡಿಲ್ಲ ಎಂದರು.

ಗಂಗಾವತಿ: ಅಕ್ರಮ ಗಣಿಗಾರಿಕೆಗೆ ಸ್ಫೋಟಕ ಬಳಕೆ, ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ

ಮನೆ ಬಾಗಲಿಗೆ ಪಿಂಚಣಿ:

ವೃದ್ಧಾಪ್ಯ ವೇತನ ಪಡೆಯಲು ಇನ್ನು ಮುಂದೆ ಯಾರೂ ಅರ್ಜಿ ಹಿಡಿದುಕೊಂಡು ಸುತ್ತಾಡುವಂತೆ ಇಲ್ಲ. ಅರ್ಹರಿಗೆ 60 ವರ್ಷವಾಗುತ್ತಿದ್ದಂತೆ ನೇರವಾಗಿ ಅವರ ಮನೆಗೆ ಬಾಗಿಲಿಗೆ ಪಿಂಚಣಿ ಮಂಜೂರಿ ಆದೇಶ ಹೋಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು. ಈಗಾಗಲೇ ಬಳ್ಳಾರಿ ಮತ್ತು ಉಡುಪಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡಲಾಗುತ್ತದೆ ಎಂದರು. ಆಧಾರ ಕಾರ್ಡ್‌ ಮತ್ತು ರೇಶನ್‌ ಕಾರ್ಡ್‌ ಆಧಾರ್‌ದಲ್ಲಿಯೇ ವಯಸ್ಸಿನ ಲೆಕ್ಕಾಚಾರದಲ್ಲಿ ಅವರಿಗೆ ವೃದ್ಧಾಪ್ಯ ವೇತನ ಆದೇಶವನ್ನು ಮನೆಗೆ ಕಳುಹಿಸಿಕೊಡಲಾಗುವುದು.