*  ಹಳ್ಳಿಯಲ್ಲಿ ವಾಯುವಿಹಾರ*  ಮಕ್ಕಳ ಜತೆ ಸೆಲ್ಫಿ*  ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದ ಸಚಿವ ಅಶೋಕ  

ಬೀದರ್‌(ಮೇ.29): ಆಡಳಿತ ಯಂತ್ರವನ್ನು ಜನರ ಬಳಿಗೆ ಕೊಂಡೊಯ್ಯುವ ಸದುದ್ದೇಶದಿಂದ ಪ್ರಾರಂಭಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಡಿ ಕಂದಾಯ ಸಚಿವ ಆರ್‌.ಅಶೋಕ ಅವರು ಶನಿವಾರ ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ವಡಗಾಂವ(ಡಿ)ದಲ್ಲಿ ಯಶಸ್ವಿಯಾಗಿ ಗ್ರಾಮವಾಸ್ತವ್ಯ ಮುಗಿಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದ ಆರ್‌.ಅಶೋಕ ಗ್ರಾಮದ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ, ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದ್ದರು. ಶನಿವಾರ ಬೆಳಗ್ಗೆ ಗ್ರಾಮದಲ್ಲಿ ವಾಯು ವಿಹಾರ ಮಾಡಿದ ಸಚಿವರು, ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಚಿಕ್ಕ ಹೋಟೆಲ್‌ವೊಂದರ ಮರದ ಕಟ್ಟೆಯ ಮೇಲೆ ಕುಳಿತು ಚಹಾ ಸೇವಿಸುತ್ತ ಗ್ರಾಮಸ್ಥರ ಅಹವಾಲು ಆಲಿಸಿದರು. ಈ ವೇಳೆ ಚಿಕ್ಕಮಕ್ಕಳನ್ನು ಮಾತನಾಡಿಸಿದರು. ಸಚಿವರೊಂದಿಗೆ ಮಕ್ಕಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಡಿಕೆಶಿಯನ್ನು ಬಿಜೆಪಿಗೆ ಕರೆದ ಪುಣ್ಯಾತ್ಮ ಯಾರೆಂದು ಹೇಳಲಿ: ಅಶೋಕ

ವಾಯು ವಿಹಾರ ಮುಂದುವರಿಸಿದ ಸಚಿವರು ರಸ್ತೆಯ ಪಕ್ಕದಲ್ಲಿ ಕಿರಾಣಿ ಅಂಗಡಿಗೆ ತೆರಳಿ ಮಾಲೀಕರ ಕುಶಲೋಪರಿ ವಿಚಾರಿಸಿದರು. ಅದಾಗಿ ಮುಂದೆ ಹೋಗುತ್ತಿದ್ದಂತೆ ಹಳೆಯ ಮನೆಯೊಂದನ್ನು ಗಮನಿಸಿ ಅಲ್ಲಿಗೆ ತೆರಳಿದಾಗ ಮನೆ ಮಂದಿಯನ್ನು ಮಾತನಾಡಿಸಿದರು.

ಬಳಿಕ ಸಮೀಪದ ಬಿಬಾನಾಯಕ ತಾಂಡಾದ ಶಿವಾಜಿ ಜಾಧವ್‌ ಅವರ ಮನೆಗೆ ತೆರಳಿ ಲಂಬಾಣಿಗರ ಸಾಂಪ್ರದಾಯಿಕ ಊಟ ಸೇವಿಸಿದರು. ಬಿಸಿ ಬಿಸಿ ಜೋಳದ ರೊಟ್ಟಿ, ಕಡ್ಲಿ, ಅವರೆ, ಹೆಸರು ಕಾಳುಗಳ ಗುಗ್ಗರಿ ಮತ್ತು ಮೆಂಥೆ ಪಲ್ಲೆ. ತೊಂಡೆಕಾಯಿ ಪಲ್ಲೆ. ಮೊಸರಿನ ಜೊತೆಗೆ ಮಜ್ಜಿಗೆಯನ್ನು ಬೆಳಗಿನ ಉಪಹಾರವಾಗಿ ಸೇವಿಸಿ ಕುಟುಂಬದವರಿಗೆ ಧನ್ಯವಾದ ತಿಳಿಸಿದರು.

ಇದಕ್ಕೂ ಮೊದಲು ತಾಂಡಾಕ್ಕೆ ಆಗಮಿಸಿ ಸಚಿವ ಆರ್‌. ಅಶೋಕ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರಿಗೆ ಕುಂಭ ಕಳಶ ಹೊತ್ತ ತಾಂಡಾದ ಮಹಿಳೆಯರು ಮೆರವಣಿಗೆ ಮೂಲಕ ಕರೆದೊಯ್ದರು. ಈ ಸಂದರ್ಭದಲ್ಲಿ ಲಂಬಾಣಿ ಜಾನಪದ ನೃತ್ಯಕ್ಕೆ ಇಬ್ಬರೂ ಸಚಿವರು ಹೆಜ್ಜೆ ಹಾಕಿದರು.