Asianet Suvarna News Asianet Suvarna News

Bidar: ಭಾವಿ ಅಗ್ನಿವೀರರಿಗೆ ಸಚಿವ ಪ್ರಭು ಚವ್ಹಾಣ್‌ ಪ್ರೋತ್ಸಾಹ

ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರರ ನೇಮಕಾತಿ ರಾರ‍ಯಲಿ ಸ್ಥಳಕ್ಕೆ ಭೇಟಿ ನೀಡಿ ಭಾವಿ ಅಗ್ನಿವೀರರಲ್ಲಿ ಧೈರ್ಯ ತುಂಬಿದರು.

Minister Prabhu Chauhan encourages future Agniveers at Bidar gvd
Author
First Published Dec 17, 2022, 11:20 PM IST

ಬೀದರ್‌ (ಡಿ.17): ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರರ ನೇಮಕಾತಿ ರಾರ‍ಯಲಿ ಸ್ಥಳಕ್ಕೆ ಭೇಟಿ ನೀಡಿ ಭಾವಿ ಅಗ್ನಿವೀರರಲ್ಲಿ ಧೈರ್ಯ ತುಂಬಿದರು. ಕ್ರೀಡಾಂಗಣದಲ್ಲಿ ಹಸಿರು ಬಾವುಟ ತೋರಿಸುವ ಮೂಲಕ ಓಟದ ಪರೀಕ್ಷೆಗೆ ಚಾಲನೆ ನೀಡಿದ ಸಚಿವರು, ರಾರ‍ಯಲಿಯಲ್ಲಿ ನಡೆಯುತ್ತಿದ್ದ ಉದ್ದ ಜಿಗಿತ, ಎತ್ತರದ ಜಿಗಿತ ಸೇರಿದಂತೆ ವಿವಿಧ ಪರೀಕ್ಷಾ ಸ್ಥಳಗಳಿಗೆ ತೆರಳಿ ಅಭ್ಯರ್ಥಿಗಳಿಗಳಲ್ಲಿ ಹುರುಪು ತುಂಬಿದರು. ಸೇನಾ ನೇಮಕಾತಿಗೆ ಏರ್ಪಡಿಸುವ ದೈಹಿಕ, ಲಿಖಿತ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಉತ್ತೀರ್ಣರಾಗಿ ಭಾರತ ಮಾತೆಯ ಸೇವೆ ಮಾಡಬೇಕೆನ್ನುವ ತಮ್ಮ ಬಯಕೆ ಈಡೇರಲಿ ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. 

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಯಾವುದೇ ಕಾರಣಕ್ಕೂ ತೀವ್ರ ನಿರಾಸೆಗೆ ಒಳಗಾಗಬಾರದು. ಇಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಕೊಂಡು ಮುಂದಿನ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ಧೃಡ ಸಂಕಲ್ಪದೊಂದಿಗೆ ಸತತ ಪ್ರಯತ್ನಪಟ್ಟಲ್ಲಿ ಅಸಾಧ್ಯವೆನಿಸುವುದು ಯಾವುದೂ ಇರುವುದಿಲ್ಲ ಹಾಗಾಗಿ ಎಲ್ಲ ಅಭ್ಯರ್ಥಿಗಳು ಧನಾತ್ಮಕ ಚಿಂತನೆಯೊಂದಿಗೆ ಗುರಿ ಸಾಧಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಅಗ್ನಿಪಥ ಎಂಬ ಮಹತ್ವದ ಯೋಜನೆಯ ಅಡಿಯಲ್ಲಿ ಅಗ್ನಿವೀರರ ನೇಮಕಾತಿಗಾಗಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ರಾರ‍ಯಲಿಗೆ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಪ್ರತಿದಿನ ಸಾವಿರಾರು ಅಭ್ಯರ್ಥಿಗಳಿಗೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ರಾರ‍ಯಲಿಯನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವ ಸೇನಾ ಅಧಿಕಾರಿಗಳ ಕೆಲಸ ಮೆಚ್ಚುವಂಥದ್ದು, ನಾಡಿನ ವಿವಿಧೆಡೆಯಿಂದ ಜಿಲ್ಲೆಗೆ ಆಗಮಿಸಿರುವ ಯುವಕರು ಅತ್ಯಂತ ಉತ್ಸಾಹದಿಂದ ರಾರ‍ಯಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ ಮಾತೆಯ ಸೇವೆ ಸಲ್ಲಿಸುವುದಕ್ಕಾಗಿ ಅಗ್ನಿವೀರರಾಗಿ ನೇಮಕವಾಗಲು ಯುವಕರು ತೋರಿಸುತ್ತಿರುವ ಉತ್ಸಾಹ ಕಂಡು ಸಂತೋಷವಾಗುತ್ತಿದೆ ಎಂದು ತಿಳಿಸಿದರು. 

ಚಿತ್ರದುರ್ಗ ಜಿಲ್ಲೆಯ ರೈತರಿಗೆ 223 ಕೋಟಿ ಬೆಳೆ ಪರಿಹಾರ: ಸಚಿವ ಬಿ.ಸಿ.ಪಾಟೀಲ್‌

ಬೀದರ್‌ನಲ್ಲಿ ನಡೆಯುತ್ತಿರುವ ರಾರ‍ಯಲಿಗೆ ನೋಂದಣಿಯಾಗಿರುವ ಅಭ್ಯರ್ಥಿಗಳ ಸಂಖ್ಯೆ, ಪ್ರತಿ ದಿನ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು, ವಿವಿಧ ಹಂತಗಳ ಪರೀಕ್ಷೆಗಳು ಹೀಗೆ ರ್ಯಾಲಿಯ ಕುರಿತು ಸೇನಾ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕರ್ನಲ್‌ ಮನೀಶ ಭೋಲಾ, ಕರ್ನಲ ಬೆಂಜಮಿನ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣ ಸಿದ್ದಪ್ಪ ಜಲಾದೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ, ಸೇನಾ ನೇಮಕಾತಿ ರಾರ‍ಯಲಿಯ ನೋಡಲ್‌ ಅಧಿಕಾರಿ ಹಾಗೂ ಹಿರಿಯ ಪಶುವೈದ್ಯಾಧಿಕಾರಿ ಡಾ.ಗೌತಮ ಅರಳಿ, ಮುಖಂಡರಾದ ರಾಮಶೆಟ್ಟಿಪನ್ನಾಳೆ, ರಾವಸಾಬ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios