Asianet Suvarna News Asianet Suvarna News

'ಹೊಸ ನೀತಿ ಜಾರಿ: ಪಾರದರ್ಶಕ, ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಕ್ರಮ'

ತೆಲಂಗಾಣ ರಾಜ್ಯದ ಮರಳು ನೀತಿಯ ಆಧಾರವಾಗಿಟ್ಟುಕೊಂಡು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ| 

Minister of Mines and Earth Sciences C C Patil Talks Over New Sand Policy Enforcement
Author
Bengaluru, First Published May 2, 2020, 8:54 AM IST

ಗದಗ(ಮೇ.02): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದಾಗಿ ಜನತೆಗೆ ಕಡಿಮೆ ದರದಲ್ಲಿ ಸುಲಭ ಹಾಗೂ ಪಾರದರ್ಶಕವಾಗಿ ಮರಳು ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ.ತೆಲಂಗಾಣ ರಾಜ್ಯದ ಮರಳು ನೀತಿಯ ಆಧಾರವಾಗಿಟ್ಟುಕೊಂಡು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 

ಅವರು ಶುಕ್ರವಾರ ಸಂಜೆ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೊಸ ಮರಳು ನೀತಿಯನ್ವಯ ಹಳ್ಳ, ತೊರೆ, ಕೆರೆಗಳಲ್ಲಿನ ಮರಳು ನಿಕ್ಷೇಪಗಳನ್ನು ಗ್ರಾಮ ಪಂಚಾಯತಿ ಅನುಮತಿಯೊಂದಿಗೆ ರೈತರೇ ನೇರವಾಗಿ ಮರಳನ್ನು ತೆಗೆಯಬಹುದಾಗಿದೆ.

ಗದಗ: ಮಹಾಮಾರಿ ಕೊರೋನಾ ಗೆದ್ದ ವೃದ್ಧೆ, ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಗ್ರಾಪಂ ವ್ಯಾಪ್ತಿಯಲ್ಲಿ ನಿರ್ವಹಿಸುವ ಸಮುದಾಯಿತ್ವ ಕಾಮಗಾರಿಗಳು, ಮನೆ, ರಸ್ತೆ ಕಾಮಗಾರಿಗಳಿಗೆ ಲಘು ವಾಹನ ಮತ್ತು ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನದಿ, ಆಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿನ ಮರಳು ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳ ಮೂಲಕ ಗ್ರಾಹಕರಿಗೆ ಜಿಲ್ಲಾ ಮರಳು ಸಮಿತಿ ನಿಗದಿ ಪಡಿಸಿದ ದರದಲ್ಲಿ ಮರಳು ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಈ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಮೊಬೈಲ್‌ ಆ್ಯಪ್‌ ಮೂಲಕ ಗ್ರಾಹಕರು ನೇರವಾಗಿ ಮರಳು ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಲೀಸ್‌ ಪಾಯಿಂಟ್‌ ಪಡೆದಂತಹವರು ತಮ್ಮ ಲೀಸ್‌ ಅವಧಿ ಮುಗಿದ ನಂತರ ಮತ್ತೆ ಆ ಅವಧಿಯನ್ನು ನವೀಕರಣ ಗೊಳಿಸಲಾಗುವುದಿಲ್ಲ. ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಹೊಸದಾಗಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗುತ್ತಿದೆ ಎಂದರು.

ಅಕ್ರಮ ಮರಳುಗಾರಿಕೆಯಲ್ಲದೇ ಅನಧಿಕೃತ ಖನಿಜ ಗಣಿಗಾರಿಕೆ, ಸಾಗಾಣಿಕೆ ಮತ್ತು ಅನಧಿಕೃತ ಖನಿಜ ದಾಸ್ತಾನು ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್‌.ವಿ. ಸಂಕನೂನರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಡಾ. ಆನಂದ ಕೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಇದ್ದರು.

ಜಿಲ್ಲೆಯ ಕೋವಿಡ್‌-19ಕ್ಕೆ ಸಂಬಂಧಿಸಿದಂತೆ (ಪಿ-304) 59 ವರ್ಷದ ಮಹಿಳೆ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಸಂತಸದ ವಿಷಯವಾಗಿದ್ದು ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಶುಶ್ರೂಕಿಯರಿಗೆ ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios