ಮಂಡ್ಯದಲ್ಲಿ ಬಿಗ್ ಆಪರೇಷನ್ ಕಮಲ : ಬಿಜೆಪಿಯತ್ತ ಶಾಸಕರು?
ರಾಜ್ಯ ರಾಜಕೀಯದಲ್ಲಿ ಇದೀಗ ಹೊಸ ವಿಚಾರವೊಂದು ಸದ್ದಾಗಿದೆ. ಮಂಡ್ಯದಲ್ಲಿ ಬಿಗ್ ಆಪರೇಷನ್ ಕಮಲ ನಡೆಯುವ ಬಗ್ಗೆ ಸುಳಿವೊಂದು ದೊರಕಿದೆ. ಸ್ವತಃ ಸಚಿವರೇ ಈ ಬಗ್ಗೆ ಮಾತನಾಡಿದ್ದಾರೆ.
ಮಂಡ್ಯ (ಫೆ.14): ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನೋಡಿದರೆ ನಿಮಗೆ ಹಾಗೆ ಅನ್ನಿಸುವುದಿಲ್ಲವಾ? ಹೀಗೆಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸ್ಥಾನ ಗೆಲ್ಲುತ್ತಿದ್ದ ಬಿಜೆಪಿ ಗ್ರಾ.ಪಂನಲ್ಲಿ 750-800 ಸ್ಥಾನ ಗೆದ್ದಿದೆ. ಇದನ್ನ ನೋಡಿದಾಗ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಗೊತ್ತಾಗುತ್ತೆ.ಕೆಳ ಹಂತದಿಂದ ಪಕ್ಷ ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು..
ನಾನು ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರನ್ನು ದೂರುವುದಿಲ್ಲ. ನಮ್ಮ ಪಕ್ಷದ ಬಲವರ್ಧನೆಗೆ ಬೇಕಾದ ಕೆಲಸ ಮಾಡುತ್ತಿದ್ದೆವೆ ಎಂದರು.
ಕಾಂಗ್ರೆಸ್ ಸ್ಥಿತಿ ಗೋವಿಂದ...ಗೋವಿಂದ: ಭವಿಷ್ಯ ನುಡಿದ ಸಚಿವ
ಬಿಜೆಪಿಗೆ ಶಾಸಕ ಎಂ.ಶ್ರೀನಿವಾಸ್ ಸೆಳೆಯುವ ಯತ್ನ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ನಾರಾಯಣಗೌಡ ನಾವು ಯಾರನ್ನೂ ಸೆಳೆಯುವ ಪ್ರಯತ್ನ ಮಾಡಿಲ್ಲ. ಒಂದಿಬ್ಬರು ಎಂಎಲ್ಎ ಬಿಟ್ಟರೆ ಉಳಿದವರು ನಮ್ಮ ಜೊತೆಗಿದ್ದಾರೆ. ಕೆಲವು ಸಿಕ್ರೇಟ್ ಗಳನ್ನು ಬಹಿರಂಗ ವಾಗಿ ಹೇಳುವುದಕ್ಕೆ ಆಗಲ್ಲ. ಬಿಜೆಪಿ ಮುನ್ನಡೆಸಲು ಜೊತೆಯಾಗಿ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಅದನ್ನು ನಾನು ಈಗ ಬಹಿರಂಗ ಮಾಡಲ್ಲ. ಈಗ ಹೇಳಿದ್ರೆ ನೀವು ಅದರ ದಾರಿ ತಪ್ಪಿಸುತ್ತೀರಿ. ಎಲ್ಲವೂ ಒಳ್ಳೆಯದು ಆದ ನಂತರ ನಿಮ್ಮ ಬಳಿ ಹೇಳುತ್ತೇನೆ ಎಂದು ಮಂಡ್ಯದಲ್ಲಿ ಅಪರೇಷನ್ ಕಮಲದ ಸುಳಿವನ್ನು ಸಚಿವ ನಾರಾಯಣ ಗೌಡ ನೀಡಿದರು.