ಯತ್ನಾಳ ಸಿಡಿ ಬಾಂಬ್ ವಿಚಾರ: ನೂತನ ಸಚಿವ ನಿರಾಣಿ ಪ್ರತಿಕ್ರಿಯೆ
ಆಲಂ ಪಾಷಾ ಮಾಡಿರುವ ಆರೋಪಕ್ಕೆ ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇನೆ| ಆತ ಒಬ್ಬ ದೊಡ್ಡ ಚೀಟರ್ ಎಂದು ಗೇಲಿ ಮಾಡಿದ ಮುರುಗೇಶ್ ನಿರಾಣಿ|
ಬೆಳಗಾವಿ(ಜ.16): ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ. ನನಗೆ ಯಾವುದೇ ಖಾತೆ ಕೊಟ್ಟರೂ ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಉಮೇಶ್ ಕತ್ತಿ ಅವರು ಎಂಟು ಸಲ ಶಾಸಕರಾಗಿದ್ದಾರೆ, ಅವರು ಹಿರಿಯರಿದ್ದಾರೆ. ಹಿರಿತನಕ್ಕೆ ಆಧರಿಸಿ ಸಿಎಂ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ. ನಾನು ಹಿಂದೆಯೂ ಯಾವುದೇ ಖಾತೆ ಕೇಳಿಲ್ಲ, ಈಗಲೂ ಕೇಳಲ್ಲ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಇಂದು(ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ದೇಶದ ಅತಿದೊಡ್ಡ ಇಥಿನಾಲ್ ಘಟಕವನ್ನ ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಕೆರಕಲಮಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಖಾನೆ ವಿಸ್ತರಣೆಗೂ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪಕ್ಷದ ವರಿಷ್ಠರಿಗೆ ತಾರತಮ್ಯದ ಬಗ್ಗೆ ದಾಖಲೆ ತೋರಿಸಿದ್ದೇನೆ: ಬಿಜೆಪಿ ಶಾಸಕ
ಮುಖ್ಯಮಂತ್ರಿ ಆದಿಯಾಗಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆಲಂ ಪಾಷಾ ಮಾಡಿರುವ ಆರೋಪಕ್ಕೆ ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇನೆ. ಆತ ಒಬ್ಬ ದೊಡ್ಡ ಚೀಟರ್ ಎಂದು ಗೇಲಿ ಮಾಡಿದ್ದಾರೆ. ಇನ್ನು ಯತ್ನಾಳ ಸಿಡಿ ಬಾಂಬ್ ವಿಚಾರವಾಗಿ ಪ್ರತಿಕ್ರಿಯಿಸಲು ಸಚಿವ ನಿರಾಣಿ ನಿರಾಕರಿಸಿದ್ದಾರೆ.