ರಾಜ್ಯದ ಜನತೆ ಚೆನ್ನೈಗೆ ಅಲೆಯುವುದನ್ನು ತಪ್ಪಿಸಿ| ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರಳೀಧರ್‌ಗೆ ಮಾಧುಸ್ವಾಮಿ ಮನವಿ| ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಪಾಸ್‌ಪೋರ್ಟ್‌ ಕೇಂದ್ರ|

ಬೆಂಗಳೂರು(ಫೆ.27): ರಾಜ್ಯದ ಜನತೆ ಅಮೆರಿಕದ ವೀಸಾ ಪಡೆಯಬೇಕಾದರೆ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆ ಅಲೆದಾಡಬೇಕಾಗಿದೆ. ಹೀಗಾಗಿ ವೀಸಾ ನೀಡುವ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಆರಂಭಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್‌ ಅವರನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳಿಧರನ್‌ ನೇತೃತ್ವದಲ್ಲಿ ಬುಧವಾರ ವಿಕಾಸಸೌಧದಲ್ಲಿ ನಡೆದ ಪಾಸ್‌ಪೋರ್ಟ್‌ ಸೇವೆಗಳ ಕುರಿತ ಸಭೆಯಲ್ಲಿ ಅವರು ಈ ಬೇಡಿಕೆ ಇಟ್ಟರು. ಬೆಂಗಳೂರಿನಲ್ಲಿ ಅಮೆರಿಕ ವೀಸಾ ಪಡೆಯುವಂತೆ ಆಗಬೇಕು. ಜತೆಗೆ ಭಾರತೀಯರು ವಿದೇಶದಲ್ಲಿ ಮರಣ ಹೊಂದಿದರೆ ಅವರ ಶವ ತಾಯ್ನಾಡಿಗೆ ತರುವುದು ಕ್ಲಿಷ್ಟಕರ. ಈ ಬಗ್ಗೆ ವಿದೇಶಗಳೊಂದಿಗೆ ಚರ್ಚಿಸಿ ನಿಯಮ ಸರಳೀಕರಿಸಬೇಕು ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಇವುಗಳ ಬಗ್ಗೆ ಕೇಂದ್ರ ಗಮನ ಹರಿಸಬೇಕು ಎಂದರು.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಪಾಸ್‌ಪೋರ್ಟ್‌ ಕೇಂದ್ರ!

ಬಳಿಕ ಮಾತನಾಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್‌, ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಪಾಸ್‌ಪೋರ್ಟ್‌ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಾಲ್‌ಸೆಂಟರ್‌ ತೆರೆದಿದೆ. ಹಾಗೆಯೇ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಭಾರತದ ರಾಯಭಾರಿ ಕಚೇರಿಗಳಲ್ಲಿ ತಮ್ಮ ವಿವರ ನೋಂದಾಯಿಸುವ ಜವಾಬ್ದಾರಿ ಮರೆಯಬಾರದು ಎಂದು ಹೇಳಿದರು.