Asianet Suvarna News Asianet Suvarna News

ಜಾಗತಿಕ ಸ್ತರದಲ್ಲಿ ಕೆಂಪೇಗೌಡ ವಿರಾಜಮಾನ: ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು ಮಾತ್ರವಲ್ಲ, ಕರ್ನಾಟಕಕ್ಕೇ ನಾಯಕ, ಮೃತ್ತಿಕೆ ಸಂಗ್ರಹ ಅಭಿಯಾನ ವೇಳೆ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಬಣ್ಣನೆ

Minister CN Ashwathnarayan Talks Over Kempegowda grg
Author
First Published Oct 22, 2022, 12:30 AM IST

ಬೆಂಗಳೂರು(ಅ.22): ವಿಜಯನಗರದ ಅರಸ ಕೃಷ್ಣದೇವಾಯರಿಂದ ಸ್ಫೂರ್ತಿ ಪಡೆದು ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಸ್ತರದಲ್ಲಿ ವಿರಾಜಮಾನವಾಗಿದೆ. ಇಂತಹ ಕೆಂಪೇಗೌಡ ಅವರು ಬೆಂಗಳೂರಿಗೆ ಮಾತ್ರವಲ್ಲ, ಇಡೀ ಕರ್ನಾಟಕದ ನಾಯಕರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮಣ್ಣು ಪಂಚಭೂತಗಳಲ್ಲಿ ಒಂದಾಗಿದೆ. ರಾಜ್ಯದ ಪ್ರತಿಯೊಂದು ಹಳ್ಳಿಯ ಕೆರೆಕಟ್ಟೆ, ಕಲ್ಯಾಣಿ, ನದಿ ಪುಷ್ಕರಿಣಿ, ತೊರೆಗಳಿಂದ ಕೆಂಪೇಗೌಡರ ಗೌರವಾರ್ಥ ಸಂಗ್ರಹಿಸಲಾಗುತ್ತಿದೆ. ಇದರ ಹಿಂದೆ ಇಡೀ ಕರ್ನಾಟಕವೇ ಒಂದು ಎನ್ನುವ ಉದಾತ್ತ ಸಂದೇಶ ಇದೆ ಎಂದು ಬಣ್ಣಿಸಿದರು.

ದೆಹಲಿ ರೋಡ್‌ ಶೋ: ನ.16ರಿಂದ ಬಿಟಿಎಸ್‌-25, 5ಜಿ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಕುರಿತು ಚರ್ಚೆ, ಅಶ್ವತ್ಥ್‌

ಅಭಿಯಾನವು ನ.7ರವರೆಗೆ ನಡೆಯಲಿದ್ದು, ಇದನ್ನು ಕೆಂಪೇಗೌಡ ಥೀಮ್‌ ಪಾರ್ಕ್ ಮತ್ತು ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು. ಬೆಂಗಳೂರು ಆ ಕಾಲದಿಂದಲೂ ರಚನಾತ್ಮಕ ಚಟುವಟಿಕೆಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಹೆಸರಾಗಿದೆ. ಯಶವಂತಪುರ, ರಾಜಾಜಿನಗರ ಮುಂತಾದ ಉತ್ತರ ಭಾಗಗಳಲ್ಲಿ ಉದ್ಯಮ ಸಂಸ್ಕೃತಿ ಮೊದಲಿನಿಂದಲೂ ಬೇರೂರಿದೆ. ಇದಕ್ಕೆ ಕಾರಣಕರ್ತರಾದ ಕೆಂಪೇಗೌಡರಿಗೆ ಇಷ್ಟುತಡವಾಗಿಯಾದರೂ ಗೌರವ ಸಲ್ಲುತ್ತಿರುವುದು ಸಮಾಧಾನದ ಸಂಗತಿಯಾಗಿದೆ ಎಂದರು.

ಪ್ರತಿಮೆ ಸ್ಥಾಪನೆಯ ಹಿಂದೆ ಮಾಜಿ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರ ಸಂಕಲ್ಪ ಶಕ್ತಿ ಇದೆ. ಇದಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹೆಗಲು ನೀಡಿದ್ದಾರೆ. ಇದರಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ತೃಪ್ತಿ ನನ್ನದಾಗಿದೆ. ಇನ್ನು ಮುಂದೆ ಇದು ಬೆಂಗಳೂರಿನ ಹೆಗ್ಗುರುತಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಈ ಯೋಜನೆ ಸಾಕಾರಕ್ಕೆ ಜೋಡೆತ್ತುಗಳಂತೆ ಹೆಗಲು ಕೊಟ್ಟಿದ್ದೇವೆ. ಜತೆಗೆ ಯಡಿಯೂರಪ್ಪನವರು ಹಾಕಿದ ಶ್ರೀಕಾರದ ಬಲವೂ ಇದೆ. ಕೆಂಪೇಗೌಡರ ಸಂದೇಶವನ್ನು ಜನರಿಗೆ ತಲುಪಿಸಲು ಮುಂದೆಯೂ ನಾವು ಶ್ರಮಿಸಲಿದ್ದೇವೆ ಎಂದು ತಿಳಿಸಿದರು.
 

Follow Us:
Download App:
  • android
  • ios