22 ಕುಟುಂಬಗಳಿಗೆ ಮಿಲಿಟರಿ ಅಧಿಕಾರಿಗಳಿಂದ ನೋಟಿಸ್ : ಹೆಚ್ಚಿದ ಆತಂಕ
ಒಟ್ಟು 22 ಕುಟುಂಬಗಳು ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿವೆ ಎಂದು ನೋಟಿಸ್ ನೀಡಲಾಗಿದ್ದು ಇದೀಗ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರು [ಜ.31]: ಮಿಲಿಟರಿ ಜಮೀನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ಸೇನಾಧಿಕಾರಿಗಳು ದೇವರ ಜೀವನಹಳ್ಳಿ ವಾರ್ಡ್ನ ಮೋದಿ ಗಾರ್ಡನ್ ಮಿಲಿಟರಿ ರಸ್ತೆಯ 22 ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ.
ಮೋದಿ ಗಾರ್ಡನ್ ಮಿಲಿಟರಿ ರಸ್ತೆ ಸೇರಿದಂತೆ ನಗರದಲ್ಲಿ 32 ರಸ್ತೆಗಳ ಅಭಿವೃದ್ಧಿಗೆ ಬೇಕಾದ ಮಿಲಿಟರಿ ಭೂಮಿ ಪಡೆದು ಬಿಬಿಎಂಪಿಯಿಂದ ಅನೇಕಲ್ ಬಳಿಕ 300 ಎಕರೆ ಜಮೀನನ್ನು ರಕ್ಷಣಾ ಇಲಾಖೆ ನೀಡುವುದಕ್ಕೆ ಈ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೋದಿ ಗಾರ್ಡನ್ ಮಿಲಿಟರಿ ರಸ್ತೆಯಲ್ಲಿರುವ ರಕ್ಷಣಾ ಇಲಾಖೆಯ ಜಮೀನು ಒತ್ತುವರಿಯಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದರು. ಜಂಟಿ ಸರ್ವೇ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಅಂದಿನ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ...
ಆಗ ಬಿಬಿಎಂಪಿ ಅಧಿಕಾರಿಗಳು ಒಂದು ವೇಳೆ ಒತ್ತುವರಿ ಆಗಿರುವುದು ದೃಢಪಟ್ಟರೆ ಅದಕ್ಕೆ ಪರಿಹಾರವಾಗಿ ಪರ್ಯಾಯ ಭೂಮಿಯನ್ನು ಪಾಲಿಕೆಯಿಂದ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೂ ರಕ್ಷಣಾ ಇಲಾಖೆಯ ಅಧಿಕಾರಿಗಳು ಮೋದಿ ಗಾರ್ಡನ್ ಮಿಲಿಟರಿ ರಸ್ತೆಯಲ್ಲಿರುವ 22 ಮನೆ, ಗುರು ದ್ವಾರ ಹಾಗೂ ಮಸೀದಿ ತೆರವು ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಕೆಲವು ಮನೆಗಳಿಗೆ ನೀಡಲಾಗಿದ್ದ ನೋಟಿಸ್ ಅವಧಿ ಮುಕ್ತಾಯಗೊಂಡಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ ಎಂದು ಮಾಜಿ ಮೇಯರ್ ಹಾಗೂ ಸ್ಥಳೀಯ ವಾರ್ಡ್ನ ಸದಸ್ಯ ಸಂಪತ್ರಾಜ್ ತಿಳಿಸಿದ್ದಾರೆ.
ಅಕ್ಷರ ಸಂತ ಹಾಜಬ್ಬ ಬದುಕುತ್ತಿರುವುದು ಕ್ರೈಸ್ತ ಮುಖಂಡರು ಕಟ್ಟಿಸಿಕೊಟ್ಟ ಮನೆಯಲ್ಲಿ..!
ರಕ್ಷಣಾ ಇಲಾಖೆಗೆ ಬಿಬಿಎಂಪಿ ಪತ್ರ
ರಕ್ಷಣಾ ಇಲಾಖೆಯಿಂದ ನಿವಾಸಿಗಳಿಗೆ ನೋಟಿಸ್ ಮಾಡಿರುವುದರಿಂದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್, ಸಬ್ಏರಿಯಾ ರೆಜಿಮೆಂಟ್ನ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ರಕ್ಷಣಾ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸರ್ವೇ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಆಯುಕ್ತರು ರಕ್ಷಣಾ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸಂಪತ್ ರಾಜ್ ಮಾಹಿತಿ ನೀಡಿದ್ದಾರೆ.