ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ. ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ (ಮಾ.16): ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ತಿಕೋಟಾ ತಾಲೂಕಿನ ರಾಂಪೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಡಡ, ಕ್ರೀಡಾ ಸಲಕರಣೆ, ಎಪಿಎಂಸಿ ಗೋದಾಮು ಉದ್ಘಾಟನೆ ಹಾಗೂ ಚಂದ್ರಗಿರಿ ಘಟಿವಾಳೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ವಿವಿಧ ಕಟ್ಟಡ ಶಂಕುಸ್ಥಾಪನೆಯ ಕಾರ್ಯಕ್ರಮದ ಸಸಿಗೆ ನೀರು ಉಣಿಸುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಕುಡಿಯಲು ನೀರಿನ ಕೊರತೆ ಇದ್ದ ಈ ಭಾಗದಲ್ಲಿ ಕಳೆದ ಒಂದು ದಶಕದಲ್ಲಿ ನೀರಾವರಿಯಿಂದಾಗಿ ಅಂತರ್ಜಲ ವೃದ್ಧಿಯಾಗಿದೆ. ರೈತರು ಕೃಷಿ, ತೋಟಗಾರಿಕೆಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಈಗ ಬಾಬಾನಗರ ಬಳಿ ಜಲಾಶಯ ಕಟ್ಟಲಾಗುವುದು. ಇದರಿಂದ ಈಗಾಗಲೇ ಹೆಚ್ಚಾಗಿರುವ ಭೂಮಿಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಬಂಗಾರ ಖರೀದಿ ಮಾಡಬಹುದು. ಆದರೆ, ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ.

ಹೀಗಾಗಿ ರೈತರು ತಮ್ಮ ಅಮೂಲ್ಯವಾದ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಸಚಿವರು ರೈತರಿಗೆ ಕಿವಿಮಾತು ಹೇಳಿದರು. ಇಲ್ಲಿನ ಮಠದ ಜೀರ್ಣೋದ್ಧಾರ ಬಹಳ ದಿನಗಳ ಬೇಡಿಕೆಯಾಗಿತ್ತು. ಗ್ರಾಮದ ಸಾರ್ವಜನಿಕರ ಆಸೆಯಂತೆ 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಕ್ಕಾಗಿ ಕ್ರಮ ವಹಿಸಲಾಗುವುದು. ಮಠದ ಹತ್ತಿರ 2025-26ನೇ ಸಾಲಿನ ವಾರ್ಷಕ ಕ್ರಿಯಾ ಯೋಜನೆಯಡಿಲ್ಲಿ ಸುಮಾರು 20.55 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋದಾಮು ಈ ಗೋದಾಮು ಅನ್ಯ ಕರ್ತವ್ಯಕ್ಕೂ ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಸುಸಜ್ಜಿತಗವಾದ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದ್ದು, ಜಪಾನಿನ ಕ್ರೋನ್ಸ್ ಕಂಪನಿಯವರು ಸಿಎಸ್.ಆರ್ ಅನುದಾನದಡಿ ಆಟದ ಮೈದಾನ ನಿರ್ಮಾಣ ಮಕ್ಕಳಿಗಾಗಿ ಕ್ರೀಡಾ ಸಲಕರಣೆ ನಿಡಿದ್ದಾರೆ. ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಕ್ರೀಡಾ ಸಲಕರಣೆ, ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ನೀರು ಕೊಟ್ಟ ಎಂ.ಬಿ. ಪಾಟೀಲರನ್ನು ನೆನಪಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. 3600 ಕೋಟಿ ರೂ. ನೀಡಿ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಅತೀ ಎತ್ತರದ ಪ್ರದೇಶಕ್ಕೆ ನೀರು ಕೊಟ್ಟಿದ್ದೇನೆ. ಎಲ್ಲರ ಆಶೀರ್ವಾದದಿಂದ ನೀರು ಕೊಟ್ಟಿದ್ದೇವೆ.

ಈಗ ಎಲ್ಲ ಸಮೃದ್ಧಿ

ನೀರು ಕೊಟ್ಟಿದ್ದನ್ನು ಒಂದೆರೆಡು ದಿನ ನೆನಪಿನಲ್ಲಿಟ್ಟಿಕೊಳ್ಳುವುದಲ್ಲ. ಅದನ್ನು ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂಥದ್ದು ಎಂದರು. ನಾಲ್ಕೈದು ಜಿಲ್ಲೆಗಳ ಅನುದಾನ ತಿಕೋಟಾ ತಾಲೂಕಿಗೆ ತಂದ ಹಿರಿಮೆ ಈ ಬಾಗದಲ್ಲಿ ನೀರಾವರಿ ಒಳಪಟ್ಟಿದ್ದರಿಂದ ಈಗ ಎಲ್ಲ ಸಮೃದ್ಧಿಯಾಗಿದೆ ನಾಲ್ಕೈದು ಜಿಲ್ಲೆಗಳಿಗೆ ಕೊಡುವ ಅನುದಾನವನ್ನು ಕೇವಲ ತಿಕೋಟಾ ತಾಲೂಕಿಗೆ ಕೊಡಿಸಿದ್ದೇನೆ. ಜೊತೆಗೆ ಎರಡು ಮಿನಿ ವಿಧಾನಸೌಧವನ್ನು ಕೊಡಿಸಿದ್ದೇನೆ ಎಂದ ಅವರು, ತನ್ಮೂಲಕ ಈ ಭಾಗದ ರೈತರಿಗೂ ಸಾಕಷ್ಟು ಸಮೃದ್ದಿಯಾಗಿದ್ದಾರೆ ಎಂದು ಹೇಳಿದರು.

ಶ್ರೀಗುರು ಘಟಿವಾಳೇಶ್ವರ ಮಠದ ಶ್ರೀ ವಿದ್ಯಾನಂದ ಓಂಕಾರಯ್ಯ ಪೂಜಾರಿ, ಕಾರ್ಯಕ್ರಮದಲ್ಲಿ ಆಶಿರ್ವವಚನ ನೀಡಿದರು. ಶ್ರೀಗಳಾದ ನಿಜಗುಣಯ್ಯ ಚಂದ್ರಯ್ಯ ಹಿರೇಮಠ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಗೌಡ ದಾಶ್ಯಾಳ, ತಹಸೀಲ್ದಾರ ಸುರೇಶ ಚವಲರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಸಿಡಿಪಿಓ ಎಸ್.ಸಿ.ಮ್ಯಾಗೇರಿ, ತಾಪಂ ಇಒ ಬಸವಂತರಾಯಗೌಡ ಬಿರಾದಾರ, ಎಪಿಎಂಸಿ ಜಂಟಿ ನಿರ್ದೇಶಕ ಅಲ್ಲಾಭಕ್ಷ, ತಾಪಂ ಮಾಜಿ ಅಧ್ಯಕ್ಷ ಸಿದ್ದು ಬೆಳಗಾವಿ, ಮುಖಂಡರಾದ ಭಾಗೀರಥಿ ತೇಲಿ, ಶ್ರೀಶೈಲ ತುಳಜನ್ನವರ, ಸಾಹೇಬಗೌಡ ಕೆಂಪವಾಡ, ರಾಜು ಬೀಳೂರ, ಬಸವರಾಜ ಬೀಳೂರ, ಮಲ್ಲಪ್ಪ ಹೊನವಾಡ, ವಿಜಯಾನಂದ ಹಿರೇಮಠ, ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಉಪಸ್ಥಿತರಿದ್ದರು.