ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಿ ಕೆಆರ್‌ಎಸ್‌ ಉಳಿಸಲು ಆಗ್ರಹಿಸಿ ಸೆ.19 ರಂದು ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಬೃಹತ್‌ ರೈತ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. 

ಮೈಸೂರು (ಸೆ.11): ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಿ ಕೆಆರ್‌ಎಸ್‌ ಉಳಿಸಲು ಆಗ್ರಹಿಸಿ ಸೆ.19 ರಂದು ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಬೃಹತ್‌ ರೈತ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. 

Add Asianetnews Kannada as a Preferred SourcegooglePreferred

ಕಬ್ಬು ಬೆಳೆಗಾರರ ವಿವಿಧ ಬೇಡಿಕೆ, ಕನ್ನಂಬಾಡಿ ಕಟ್ಟೆ ಸುತ್ತಮುತ್ತ 20 ಕಿ.ಮೀ. ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧ ಮಾಡಬೇಕು. ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣಕ್ಕೆ ಮುಂದಾಗಿದ್ದು, ಇದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ತೊಂದರೆ ಎದುರಾಗುತ್ತದೆ. ರೈತರ ವಿವಿಧ ಸಮಸ್ಯೆಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಹಾಗೂ ಸರ್ಕಾರಕ್ಕೆ ಎಚ್ಚರಿಗೆ ನೀಡುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Mysore Dasara 2022 ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಬೊಮ್ಮಾಯಿ ಘೋಷಣೆ!

ರಾಜ್ಯ ಸರ್ಕಾರ ಕಬ್ಬಿಗೆ ಎಸ್‌ಎಪಿ ಘೋಷಣೆ, ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸದಿದ್ದರೆ ದಸರಾ ದಿನದಂದು ನಾಲ್ಕು ದಿಕ್ಕುಗಳಿಂದಲೂ ರಸ್ತೆ ತಡೆ ನಡೆಸಲಾಗುವುದು. ಎತ್ತಿನಗಾಡಿ, ಟ್ರ್ಯಾಕ್ಟರ್‌ ಹಾಗೂ ಕೃಷಿ ಪರಿಕರ ಸಮೇತ ರಸ್ತೆ ತಡೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ದಸರಾ ಈ ಭಾಗದ ನಾಡಹಬ್ಬ. ಅತೀವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ದಸರಾ ಹೆಸರಿನಲ್ಲಿ ಮೋಜು ಮಸ್ತಿ ಬೇಡ, ಸರಳ ಆಚರಣೆ ಮಾಡಿ ಆ ಹಣವನ್ನು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಬೇಕು. ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ಬಿಜೆಪಿ ಸರ್ಕಾರ ಬೇಜವಾಬ್ದಾರಿ ಆಡಳಿತ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮೈಸೂರಿನಲ್ಲೂ ಕೆಲವು ಕಡೆ ಮಳೆನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ ಕೆರೆ- ಕಟ್ಟೆ ಒತ್ತುವರಿ. ನಗರಗಳಿಗೆ ನೀರು ಸರಬರಾಜು ಮಾಡಲು ರೈತರ ಭೂಮಿಯನ್ನು ನಾಶ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬಡವರ ರಸ್ತೆಗಳಲ್ಲ. ಟೋಲ್‌ಗಳಲ್ಲಿ ದುಬಾರಿ ಹಣ ನೀಡಿ ಪ್ರಯಾಣ ಮಾಡಲು ರೈತ ಹಾಗೂ ಜನಸಾಮಾನ್ಯನಿಂದ ಸಾಧ್ಯವಾಗುವುದಿಲ್ಲ. ಎನ್‌ಎಚ್‌ ರಸ್ತೆ, ವಿಮಾನ ನಿಲ್ದಾಣ, ಬುಲೆಟ್‌ ಟ್ರೈನ್‌ಗಳನ್ನು ಕಾರ್ಪೋರೆಟ್‌ ಕಂಪನಿಗಳ ಪರವಾಗಿ ಮಾಡಲಾಗುತ್ತಿದೆ. ಎನ್‌ಎಚ್‌ ಕೆಲಸಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ನಮಗೆ ಬೇಕಾಗಿರುವುದು ಜಿಲ್ಲಾ, ತಾಲೂಕು, ಗ್ರಾಮೀಣ ಹಾಗೂ ನಗರದ ರಸ್ತೆಗಳ ಅಭಿವೃದ್ಧಿ ಎಂದು ಅವರು ಆಗ್ರಹಿಸಿದರು.

ಪುನೀತ್‌ ರಾಜ್‌ಕುಮಾರ್ ನಿಧನದ ವೇಳೆ ಕೊಟ್ಟ ಮಾತು ಉಳಿಸಿಕೊಂಡ ತಮಿಳು ನಟ

ಅತಿವೃಷ್ಟಿ ಪ್ರದೇಶದಲ್ಲಿ ತೊಂದರೆಗೀಡಾಗಿರುವ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು. ಹಾಗೂ ಮುಂದಿನ ದಿನಗಳಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು. ನಾವು ಕೇಂದ್ರಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಜಿಎಸ್‌ಟಿ ಮೂಲಕ ತೆರಿಗೆ ಕಟ್ಟಿದ್ದೇವೆ. ನೈಸರ್ಗಿಕ ವಿಕೋಪದಿಂದ ತೋದರೆ ಎದುರಾದರೆ ಕೇಂದ್ರದಲ್ಲಿ ಫಂಡ್‌ ಇದೆ. ಅದನ್ನು ರಾಜ್ಯ ಸರ್ಕಾರ ಪಡೆಯಬೇಕು ಎಂದು ಅವರು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಮುಖಂಡರಾದ ಪಿ. ಮರಂಕಯ್ಯ, ವಿಜೇಂದ್ರ, ಮಂಡಕಳ್ಳಿ ಮಹೇಶ್‌, ಪ್ರಭಾಕರ್‌, ಮಹದೇವನಾಯಕ, ಮಲ್ಲೇಶ್‌, ಬೆಂಕಿಪುರ ಚಿಕ್ಕಣ್ಣ ಮೊದಲಾದವರು ಇದ್ದರು.