Asianet Suvarna News Asianet Suvarna News

Tumakur : ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆ

ತಾಲೂಕಿನ ಹಲವಾರು ಯಾದವ ಮುಖಂಡರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದು ಶಾಸಕ ಮಸಾಲಾ ಜಯರಾಮ್‌ರವರ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಂಡರು.

 Many Leaders Joins BJP In Tumakur snr
Author
First Published Dec 19, 2022, 5:10 AM IST

 ತುರುವೇಕೆರೆ (ಡಿ.19):  ತಾಲೂಕಿನ ಹಲವಾರು ಯಾದವ ಮುಖಂಡರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದು ಶಾಸಕ ಮಸಾಲಾ ಜಯರಾಮ್‌ರವರ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಂಡರು.

ತಾಲೂಕಿನ ಬುಗುಡನಹಳ್ಳಿಯಲ್ಲಿ ನಡೆದ ಬಿಜೆಪಿ (BJP)  ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಯಾದವ ಸಮುದಾಯದ ಮುಖಂಡರು ಮತ್ತು ಎಪಿಎಂಸಿಯ ಮಾಜಿ ಅಧ್ಯಕ್ಷರು, ಬಾಣಸಂದ್ರ ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯರಾದ ನರಸಿಂಹರಾಜು, ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯರಾದ ತೋವಿನಕೆರೆಯ ಸಿದ್ದಲಿಂಗಪ್ಪ ಸೇರಿದಂತೆ ನೂರಾರು ಯಾದವ ಸಮುದಾಯದ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಗೆ ಸೇರ್ಪಡೆಯಾದ ಯಾದವ, ಪರಿಶಿಷ್ಠ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (SC)  ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಮಸಾಲಾ ಜಯರಾಮ್‌ ರವರು ಮಾತನಾಡಿ ಈ ಹಿಂದೆ ಜೆಡಿಎಸ್‌ ನ ಹಿರಿಯ ಧುರೀಣರಾಗಿದ್ದ ಯಾದವ ಸಮುದಾಯದ ಎ.ಕೃಷ್ಣಪ್ಪನವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ಸೋಲಿಗೆ ಮತ್ತು ಅವರ ಸಾವಿಗೆ ಕಾರಣರಾರ‍ಯರು ಎಂಬುದು ಜಿಲ್ಲೆಯ ಯಾದವ ಸಮುದಾಯಕ್ಕೆ ತಿಳಿದಿದೆ.

ತಮ್ಮ ಪಕ್ಷದಲ್ಲಿದ್ದವರಿಗೇ ನಮ್ಮ ತಾಲೂಕಿನ ಧುರೀಣರೊಬ್ಬರು ಹೇಗೆ ಮೋಸ ಮಾಡಿದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮ ಸಮುದಾಯದ ಮುಖಂಡರಿಗೆ ಅವರು ಮಾಡಿದ ಮೋಸಕ್ಕೆ ಕಳೆದ ಚುನಾವಣೆಯಲ್ಲಿ ಯಾದವ ಸಮುದಾಯ ತಕ್ಕ ಶಾಸ್ತಿ ನೀಡಿತ್ತು. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ನೂರಕ್ಕೆ ನೂರರಷ್ಟುಯಾದವ ಮತದಾರರು ತಮ್ಮ ಪರವಾಗಿ ಮತ ಚಲಾಯಿಸುವರು ಎಂದು ಹೇಳಿದರು.

ನರಸಿಂಹರಾಜು ಮತ್ತು ಸಿದ್ದಲಿಂಗಪ್ಪ ನವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿರುವ ಯಾದವ ಮುಖಂಡರ ಸೇರ್ಪಡೆಯಿಂದಾಗಿ ತಮಗೆ ಆನೆಬಲ ಬಂದಂತಾಗಿದೆ. ಪಕ್ಷಕ್ಕೆ ಬಂದಿರುವ ಎಲ್ಲರಿಗೂ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿ ಗೌರವಯುತವಾಗಿ ನೋಡಿಕೊಳ್ಳುತ್ತೇವೆ ಎಂದರು.

ಶಾಸಕ ಮಸಾಲಾ ಜಯರಾಮ್‌ ರವರು ತಮಗೆ ದೊರೆತ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ತಾಲೂಕಿನ ಹಲವಾರು ಗ್ರಾಮಗಳ ಅಭಿವೃದ್ಧಿ ಮಾಡಿರುವುದು ಮತ್ತು ರಸ್ತೆಯನ್ನೇ ಕಾಣದಿದ್ದ ಹಿಂದುಗಳಿದ ವರ್ಗಗಳ ಜನರು ವಾಸಿಸುತ್ತಿರುವ ಪ್ರದೇಶಗಳನ್ನು ಅಭಿವೃದ್ಧಿ ಮಾಡಿರುವ ಕ್ರಮವನ್ನು ಗಮನಿಸಿ ತಾವೆಲ್ಲರೂ ಜಯರಾಮ್‌ರವರ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಬಾಣಸಂದ್ರ ಗ್ರಾ.ಪಂ ಸದಸ್ಯ ಹಾಗೂ ಯಾದವ ಮುಖಂಡರಾದ ನರಸಿಂಹರಾಜು ಮತ್ತು ಸಿದ್ದಲಿಂಗಪ್ಪ ಹೇಳಿದರು.

ಮುಂದೆ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಮಸಾಲಾ ಜಯರಾಮ್‌ರವರನ್ನು ಭರ್ಜರಿ ಬಹಮತಗಳಿಂದ ಗೆಲ್ಲಿಸುವ ಮೂಲಕ ಬಹಳ ವರ್ಷಗಳಿಂದ ತಾಲೂಕಿಗೆ ಸಿಗದ ಮಂತ್ರಿ ಪದವಿಯು ಅವರಿಗೆ ದೊರೆಯುವಂತಾಗಲಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್‌ ಹೇಳಿದರು.

ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಮೃತ್ಯುಂಜಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ವಕ್ತಾರ ಮುದ್ದೇಗೌಡ, ದುಂಡ ರೇಣುಕಯ್ಯ, ಅಮ್ಮಸಂದ್ರ ಗ್ರಾ.ಪಂ ಅಧ್ಯಕ್ಷೆ ಸುಧಾರಂಗಸ್ವಾಮಿ, ವಿ.ಬಿ.ಸುರೇಶ್‌, ಬಾಣಸಂದ್ರ ಗ್ರಾ.ಪಂ ಅಧ್ಯಕ್ಷೆ ಸುಧಾಶ್ರೀನಿವಾಸ್‌, ಸದಸ್ಯರುಗಳಾದ ಬಾಣಸಂದ್ರ ಪ್ರಕಾಶ್‌, ಬಸವರಾಜು, ಡೊಂಕಿಹಳ್ಳಿ ಪ್ರಕಾಶ್‌ ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಮಸಾಲಾ ಜಯರಾಮ್‌ ರವರು ಬುಗುಡನಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಜೆಸಿಬಿ ಯಲ್ಲಿ ಹೂವಿನ ಮಳೆಗೆರೆದು, ಹೆಗಲ ಮೇಲೆ ಹೊತ್ತು ಭವ್ಯ ಮೆರವಣಿಗೆ ನಡೆಸಿದರು.

  • ತಾಲೂಕಿನ ಹಲವಾರು ಯಾದವ ಮುಖಂಡರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದು ಶಾಸಕ ಮಸಾಲಾ ಜಯರಾಮ್‌ರವರ ಸಮ್ಮುಖ ಬಿಜೆಪಿಗೆ ಸೇರ್ಪಡೆ
  • ಬಿಜೆಪಿ ಗೆ ಸೇರ್ಪಡೆಯಾದ ಯಾದವ, ಪರಿಶಿಷ್ಠ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (SC)  ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಶಾಸಕ
Follow Us:
Download App:
  • android
  • ios