ದೂರದಿಂದ ಬಂದು ಡಿಕೆ ಶಿವಕುಮಾರ್ಗೆ ವಿಶ್ ಮಾಡಿದ ರೌಡಿ ಶೀಟರ್!
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರೌಡಿ ವಿಶ್/ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಎಚ್. ಪಿ ನಾಗೇಂದ್ರ ಹತ್ಯೆ ಆರೋಪಿ/ ಕುಖ್ಯಾತ ರೌಡಿ ಜಡೇಜಾ ರವಿ ಬಾಮೈದನೇ ಈ ಡೆಂಜರ್ ಶಿವ
ಬೆಂಗಳೂರು(ಮಾ. 12) ಕಾಂಗ್ರೆಸ್ ನೂತನ ಸಾರಥಿಗೆ ನಟೋರಿಯಸ್ ರೌಡಿಗಳು ವಿಶ್ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಗೆ ಮಂಡ್ಯದ ರೌಡಿ ಡೆಂಜರ್ ಶಿವ ಆಗಮಿಸಿ ವಿಶ್ ಮಾಡಿದ್ದಾನೆ.
ಪತ್ನಿ ಸಮೇತ ಡಿಕೆಶಿ ಮನೆಗೆ ಬಂದು ಡೆಂಜರ್ ಶಿವ ಶುಭ ಹಾರೈಸಿದ್ದಾನೆ. ಕುಖ್ಯಾತ ರೌಡಿ ಜಡೇಜಾ ರವಿ ಬಾಮೈದನೇ ಈ ಡೆಂಜರ್ ಶಿವ. ಲಕ್ಷ್ಮಣನ ಗುಂಪಿನಲ್ಲಿಯೂ ಕಾಣಿಸಿಕೊಂಡಿದ್ದ.
ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಡೇಂಜರ್ ಶಿವ ಇದೀಗ ಪ್ರತ್ಯಕ್ಷವಾಗಿದ್ದಾನೆ. ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಎಚ್. ಪಿ ನಾಗೇಂದ್ರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಈ ಡೆಂಜರ್ ಶಿವ ಇದೇ ಪ್ರಕರಣದಲ್ಲಿ ಜೈಲುಪಾಲಾಗಿ ಜೀವಾವಧಿ ಶಿಕ್ಷೆಗೂ ಒಳಗಾಗಿದ್ದ.
ಅಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಶಿವ. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದ. ಮಂಡ್ಯದಲ್ಲಿ ಡೇಂಜರ್ ಶಿವ ಸೇರಿದಂತೆ 38 ರೌಡಿಗಳನ್ನು ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿತ್ತು. ರಾಜಕೀಯ ಒತ್ತಡ ಹಾಗೂ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರೊಬ್ಬರ ಶ್ಯೂರಿಟಿಯಿಂದಾಗಿ ಗಡಿಪಾರಿನಿಂದ ಬಚಾವ್ ಆಗಿದ್ದ ಈ ಶಿವ ಇದೀಗ ಬಂದು ವಿಶ್ ಮಾಡಿ ಹೋಗಿದ್ದಾನೆ.