ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯೋರ್ವರು ಮೃತಪಟ್ಟಿದ್ದು ಚುನಾವಣಾ ಆಯೋಗ ಮಹತ್ವದ ಸೂಚನೆ ನೀಡಿದೆ. 

ಮಂಡ್ಯ (ಡಿ.18):  ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕ್ರಮಬದ್ಧಗೊಂಡ ನಂತರದಲ್ಲಿ ಅಭ್ಯರ್ಥಿಯೊಬ್ಬ ಸಾವನ್ನಪ್ಪಿದ್ದು, ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ನಿಧನರಾಗಿರುತ್ತಾರೆ ಎಂದು ನಮೂದಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಮದ್ದೂರು ತಾಲೂಕಿನ ಎಸ್‌.ಐ.ಹೊನ್ನಲಗೆರೆ ಗ್ರಾಪಂನ ಎಚ್‌.ಹೊಸಹಳ್ಳಿ ಕ್ಷೇತ್ರದ ಸಾಮಾನ್ಯ ವರ್ಗದಿಂದ ಎಚ್‌.ಸಿ.ನಾಗರಾಜು ಉ.ಬೋಸಪ್ಪ ಎಂಬುವರು ಡಿ.11ರಂದು ನಾಮಪತ್ರ ಸಲ್ಲಿಸಿದ್ದರು. ಡಿ.14ರಂದು ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲಿಸಿ ಕ್ರಮ ಬದ್ಧವಾಗಿರುತ್ತದೆ ಎಂದು ಘೋಷಿಸಿದ್ದರು. ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಅವಧಿಯಲ್ಲೂ ಇವರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿಲ್ಲ. ಹೀಗಾಗಿ ಇವರಿಗೆ ಚಿಹ್ನೆ ಹಂಚಿಕೆ ಮಾಡಿ ಸ್ಪರ್ಧಿಸಿರುವ ಅಭ್ಯರ್ಥಿಯ ಪಟ್ಟಿಪ್ರಪತ್ರ-10ನ್ನು ಡಿ.14ರಂದು ಪ್ರಕಟಿಸಲಾಗಿತ್ತು.

ಡಿವೈಎಸ್ಪಿ ಲಕ್ಷ್ಮೀ ನಿಗೂಢ ಸಾವಿನ ಬೆನ್ನಲ್ಲೇ ಪೊಲೀಸ್ ದಂಪತಿ ಆತ್ಮಹತ್ಯೆ .

ಡಿ.14ರಂದೇ ಅಭ್ಯರ್ಥಿ ಮರಣ ಹೊಂದಿದ ಹಿನ್ನೆಲೆಯಲ್ಲಿ ಮತಪತ್ರದಲ್ಲಿ ಇವರ ಹೆಸರನ್ನು ಮುದ್ರಿಸಬೇಕೇ ಬೇಡವೇ ಎಂಬ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ರಾಜ್ಯ ಚುನಾವಣಾ ಆಯೋಗದ ಬಗ್ಗೆ ಸ್ಪಷ್ಟೀಕರಣ ಕೋರಿದ್ದರು.

ಕರ್ನಾಟಕ ಪಂಚಾಯತ್‌ ರಾಜ್‌ (ಚುನಾವಣೆ ನಡೆಸುವ) ಅಧಿನಿಯಮ 1993 ಪ್ರಕರಣ 28ರಂತೆ ಮನ್ನಣೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿಯು ಮರಣಹೊಂದಿದಲ್ಲಿ ಮಾತ್ರ ಚುನಾವಣೆ ಮುಂದೂಡಲು ಅವಕಾಶವಿದೆ. ಗ್ರಾಪಂ ಚುನಾವಣೆ ಪಕ್ಷರಹಿತ ಚುನಾವಣೆಯಾಗಿರುವುದರಿಂದ ಮುಂದೂಡುವಂತಿಲ್ಲ. ಈ ಅಭ್ಯರ್ಥಿಗೆ ಚಿಹ್ನೆಯನ್ನು ಹಂಚಿಕೆ ಮಾಡಿ ಸ್ಪರ್ಧಿಸುವ ಅಭ್ಯರ್ಥಿ ಹೆಸರು ಪ್ರಪತ್ರ-10ರಲ್ಲಿ ಬಂದಿರುವುದರಿಂದ ಮತಪತ್ರದಲ್ಲಿ ಇವರ ಹೆಸರನ್ನು ಮುದ್ರಿಸಬೇಕಿರುತ್ತದೆ.

ಚುನಾವಣಾಧಿಕಾರಿಗಳು ಅಭ್ಯರ್ಥಿಯು ಮೃತಪಟ್ಟಿರುವ ಬಗ್ಗೆ ಸೂಕ್ತ ದಾಖಲೆ ಪಡೆದುಕೊಂಡು ಅಭ್ಯರ್ಥಿ ಮೃತಪಟ್ಟಿರುವ ಬಗ್ಗೆ ಮತಗಟ್ಟೆಯ ಮುಂದೆ ಪ್ರದರ್ಶಿಸಲಾಗುವ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೃತ ಅಭ್ಯರ್ಥಿಯ ಹೆಸರಿನ ಮುಂದೆ ನಿಧನರಾಗಿರುತ್ತಾರೆ ಎಂದು ನಮೂದಿಸುವುದು. ಈ ಬಗ್ಗೆ ನೋಟಿಸನ್ನು ಆ ಕ್ಷೇತ್ರದ ಮತಗಟ್ಟೆಗಳ ಮುಂದೆ ಹಾಗೂ ಗ್ರಾಪಂ ನಾಮಫಲಕದಲ್ಲಿ ಪ್ರಕಟಿಸುವಂತೆ ಹಾಗೂ ನೋಟಿಸನ್ನು ಪ್ರಚುರಪಡಿಸಿದ ಬಗ್ಗೆ ಮಹಜರ್‌ ಮಾಡಿ ದಾಖಲೆಯಾಗಿಟ್ಟುಕೊಳ್ಳುವಂತೆ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ.