ಮಕ್ಕಳಿಲ್ಲದೆ ಕರಗಿನಲ್ಲಿರುವ ದಂಪತಿಗಳ ನಡುವೆಯೇ ತಂದೆಯೊಬ್ಬರು ತಮ್ಮ ಸ್ವಂತ ಮಕ್ಕಳನ್ನು ಮಾರಾಟ ಮಾಡಲು ಹೊರಟ ಘಟನೆ ಉಡುಪಿಯಲ್ಲಿ ನಡೆದಿದೆ. ಸ್ವಂತ ಮಕ್ಕಳನ್ನೇ ಮಾರಾಟ ಮಾಡಲು ಮುಂದಾಗಿದ್ದೇಕೆ, ಅಂತಹ ಅನಿವಾರ್ಯತೆ ಏನಿತ್ತು..? ಇಲ್ಲಿ ಓದಿ.

ಉಡುಪಿ(ಜ.07): ತನ್ನಿಬ್ಬರು ಎಳೆಯ ಮಕ್ಕಳನ್ನು ಸಾಕಾಲಾಗದೆ ತಂದೆಯೊಬ್ಬ ಮಾರಾಟ ಮಾಡಲು ಮುಂದಾಗಿರುವ ವಿಲಕ್ಷಣ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕಾರ್ಕಳ ನೀರೆಯ ದಲಿತ ಸಮುದಾಯಕ್ಕೆ ಸೇರಿದ ಆನಂದ ಎಂಬಾತ ತನ್ನಿಬ್ಬರು ಮಕ್ಕಳನ್ನು ಹಣಕ್ಕಾಗಿ ಮಾರಾಟಕ್ಕೆ ಮುಂದಾಗಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತಂದೆಯನ್ನು ವಿಚಾರಿಸಿ ಬಳಿಕ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳಿಬ್ಬರನ್ನು ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಒಪ್ಪಿಸಿದ್ದಾರೆ.

ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹಕ್ಕೆ ಗೃಹ ಸಚಿವರ ಸಾಥ್

ನೀರೆಯ ಆನಂದನಿಗೆ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಆತನ ಪತ್ನಿ 2 ವರ್ಷದ ಹಿಂದೆ ಗಂಡ, ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಆನಂದನಿಗೆ ನಾಲ್ಕೂವರೆ ವರ್ಷದ ಗಂಡು ಹಾಗೂ ಮೂರುವರೆ ವರ್ಷದ ಹೆಣ್ಣು ಮಗುವಿದ್ದು, ಸರ್ಕಾರಿ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ಅದರಲ್ಲೇ ತನ್ನಿಬ್ಬರು ಮಕ್ಕಳು ಹಾಗೂ ವೃದ್ದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ.

ಮಂಗಳೂರು ಗೋಲಿಬಾರ್: ಘಟನೆ ನೋಡಿದ್ರೆ ನೀವೂ ಸಾಕ್ಷಿ ಹೇಳಬಹುದು..!

ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ, ಆತ ಕುಡಿತದ ಚಟದಿಂದ ಮಕ್ಕಳನ್ನು ಸಾಕುವುದೇ ಕಷ್ಟಕರವಾಗಿತ್ತು. ಈತನ ಕಷ್ಟವರಿತ ಕೆಲ ಮಂದಿ ಮಕ್ಕಳನ್ನು ನಮಗೆ ಕೊಡು ನಿನಗೆ ಹಣ ಕೊಡುತ್ತೇನೆ ಎಂದು ಪುಸಲಾಯಿಸಿದ್ದಾರೆ. ಕೂಲಿ ಕೆಲಸದ ಜತೆಗೆ ಮಕ್ಕಳನ್ನು ಸಾಕುವ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆನಂದ, ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದ.

ಸುದ್ದಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಸದಾನಂದ ನಾಯಕ್‌, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ನೀರೆ ಪಂಚಾಯಿತಿ ಪಿಡಿಒ ಅಂಕಿತಾ ನಾಯಕ್‌ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೋದಿ-ಶಾಗೆ ಕೊಲೆ ಬೆದರಿಕೆ ಹಾಕಿದ್ದ ಯುವಕ ಅಂದರ್..!

ತಾನು ಕೂಲಿಕಾರ್ಮಿಕನಾಗಿದ್ದು, ಮಕ್ಕಳನ್ನು ಸಾಕಲು ಕಷ್ಟವಾದರೆ ನಮಗೆ ಕೊಡಿ ಎಂದು ಹಲವರು ಕೇಳಿದ್ದರು. ಆದರೆ ತಾನು ಮಕ್ಕಳನ್ನು ಯಾರಿಗೂ ಕೊಡುವುದಿಲ್ಲವೆಂದು ಆನಂದ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆ. ಆದರೆ ಮಕ್ಕಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಇಬ್ಬರು ಪುಟ್ಟಮಕ್ಕಳನ್ನು ದತ್ತು ಸಂಸ್ಥೆಗೆ ಸೇರಿಸಿ ಪುನರ್ವಸತಿ ಕಲ್ಪಿಸಿದ್ದಾರೆ.