ಆಸ್ತಿಗಾಗಿ ದೊಡ್ಡಪ್ಪನ ರುಂಡ, ಮುಂಡ ಬೇರೆ ಮಾಡಿದ
ವ್ಯಕ್ತಿಯೋರ್ವ ಆಸ್ತಿಗಾಗಿ ದೊಡ್ಡಪ್ಪನ ರುಂಡ ಕಡಿದು ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಟಿ. ನರಸೀಪುರ [ಸೆ.22]: ಆಸ್ತಿಯನ್ನು ಕೊಡಲಿಲ್ಲವೆಂದು ಕೊಟ್ಟಿಗೆಯಲ್ಲಿ ಮಲಗಿದ್ದ ದೊಡ್ಡಪ್ಪನನ್ನು ಸ್ನೇಹಿತನ ಜೊತೆಗೂಡಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಚಾಮನಹಳ್ಳಿಯಲ್ಲಿ ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದಿದೆ. ರುಂಡವನ್ನು ಹೊತ್ತೊಯ್ಯುವಾಗ ಹಂತಕರಿಬ್ಬರೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಚಾಮನಹಳ್ಳಿ ನಿವಾಸಿ ಕೆಂಪೇಗೌಡ (65) ಹತ್ಯೆಯಾದವರು. ತಮ್ಮನ ಮಗ ವೆಂಕಟೇಶ್ ಎಂಬವರ ಪುತ್ರ ಚೇತನ್ ಎಂಬಾತ ತನ್ನ ಸ್ನೇಹಿತ ಬನ್ನೂರು ತ್ಯಾಗರಾಜ ಮೊಹಲ್ಲಾದ ಸಿದ್ದರಾಜು ಎಂಬವರ ಪುತ್ರ ಮಧು ಜೊತೆಗೂಡಿ ದೊಡ್ಡಪ್ಪನನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.
ಘಟನೆ ಹಿನ್ನೆಲೆ:
ಹಲವು ವರ್ಷಗಳಿಂದ ಕೆಂಪೇಗೌಡ ಹಾಗೂ ಚೇತನ್ ನಡುವೆ ಆಸ್ತಿ ವಿವಾದ ಹಾಗೂ ನಿವೇಶನ ಒತ್ತುವರಿ ವಿಚಾರವಾಗಿ ಕಲಹ ನಡೆಯುತ್ತಿತ್ತು. ತಂದೆತಾಯಿ ಇಬ್ಬರೂ ಇಲ್ಲದೆ ಅನಾಥನಾಗಿದ್ದ ಚೇತನ್ ಬದುಕು ಕಟ್ಟಿಕೊಳ್ಳಲು ದೊಡ್ಡಪ್ಪನನ್ನು ಹಲವು ಬಾರಿ ತನಗೆ ಸೇರಬೇಕಾದ ಆಸ್ತಿಯನ್ನು ಕೇಳುತ್ತಿದ್ದರು ಎನ್ನಲಾಗಿದೆ.
ಕೊಟ್ಟಿಗೆಯಲ್ಲಿ ಮಲಗಿದ್ದವನನ್ನು ಎಬ್ಬಿಸಿದ:
ಮದುವೆಯಾಗಲು ಇತ್ತೀಚೆಗಷ್ಟೇ ವಧುವನ್ನು ಗೊತ್ತು ಮಾಡಿಕೊಂಡು ಬಂದಿದ್ದ ಚೇತನ್ ಕೊನೆಯ ಬಾರಿ ಕೆಂಪೇಗೌಡರ ಬಳಿ ಆಸ್ತಿ ಕೊಡುವ ವಿಚಾರವನ್ನು ಪ್ರಸ್ತಾಪಿಸಿದಾಗಲೂ ನೀರಾಕರಿಸಿದಾಗ ರೊಚ್ಚಿಗೆದ್ದು, ದೊಡ್ಡಪ್ಪನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಅದರಂತೆ ಶುಕ್ರವಾರ ಮಧ್ಯರಾತ್ರಿ ಚಾಮನಹಳ್ಳಿಯಲ್ಲಿರುವ ಮನೆಯ ಕೊಟ್ಟಿಗೆಯಲ್ಲಿ ಮಲಗಿದ್ದ ಕೆಂಪೇಗೌಡರನ್ನು ಎಬ್ಬಿಸಿ ಕೊಲೆಗೈದಿದ್ದಾನೆ.
ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಹಾಗೂ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಮಲ್ಲಿಕ್ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಎಂ.ಆರ್. ಲವ ಹಾಗೂ ಬನ್ನೂರು ಪೊಲೀಸ್ ಠಾಣೆಯ ಯೋಗನಂಜಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ನೀಡಲಾಯಿತು.
ರುಂಡ ತುಂಡು
ಸ್ನೇಹಿತ ಮಧು ಜೊತೆ ಆಗಮಿಸಿದ ಚೇತನ್ ಮೊದಲು ಮನೆಯ ಬಾಗಿಲನ್ನು ಬಡಿದು ಕೆಂಪೇಗೌಡರನ್ನು ಕರೆದಿದ್ದಾನೆ. ಅವರು ಕೊಟ್ಟಿಗೆಯಲ್ಲಿ ಮಲಗಿದ್ದಾರೆಂದು ಮನೆಯಲ್ಲಿದ್ದ ಮಹಿಳೆಯರು ಹೇಳಿದಾಗ ಕೊಟ್ಟಿಗೆ ಬಳಿ ತೆರಳಿ ಕೆಂಪೇಗೌಡರು ಹೊರ ಬರುವಂತೆ ಮನವೊಲಿಸಿ ಕೊಡಲಿಯಲ್ಲಿ ರುಂಡವನ್ನು ತುಂಡರಿಸಿದ್ದಾನೆ. ವೃದ್ಧನ ತಲೆ ಹಿಡಿದು ಊರರೆಲ್ಲಾ ಓಡಾಡಿದ ಹಂತಕರಿಬ್ಬರೂ ಮುಖ್ಯರಸ್ತೆ ಬಳಿಗೆ ಬಂದಾಗ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.