ಕೊರೋನಾ ಭೀತಿ ಮಧ್ಯೆ ಮಹಾಲಕ್ಷ್ಮಿ ದೇವಿ ಜಾತ್ರೆ: ಸಾವಿರಾರು ಭಕ್ತರು ಭಾಗಿ
ಕೊರೋನಾ ಸೋಂಕು| ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ| ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿ|
ಬೆಳಗಾವಿ(ಮಾ.19): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ಮಾ.31ರ ರವೆಗೆ ಕರ್ನಾಟಕ ಬಂದ್ ಮಾಡಲು ಆದೇಶಿಸಿದ್ದಾರೆ. ಮಾ. 31 ರವೆಗೆ ರಾಜ್ಯಾದ್ಯಂತ ಯಾವುದೇ ಸಭೆ ಸಮಾರಂಭ, ಮದುವೆ, ಪ್ರತಿಭಟನೆಗಳು, ಶಾಪಿಂಗ್ ಮಾಲ್, ಬಾರ್ ಅಂಡ್ ರೆಸ್ಟೋರೆಂಟ್ಗಳನ್ನ ತೆರೆಯದಂತೆ ಆದೇಶಿಸಿದ್ದಾರೆ.
"
'ಬ್ಯಾಡಗಿ ಜನಕ್ಕೆ ಕೊರೋನಾ ಭಯವೇ ಇಲ್ಲ: ಇಲ್ಲಿ ಕೆಮ್ಮದೇ ಇರಲು ಸಾಧ್ಯವೇ ಇಲ್ಲ'
ಹೀಗಾಗಿ ಜನ ಮನೆ ಬಿಟ್ಟು ಹೊರಗೆ ಬರದಂತೆ ಆಗಿದೆ. ಆದರೆ, ಸರ್ಕಾರದ ಆದೇಶವನ್ನ ಲೆಕ್ಕಿಸದ ಬೆಳಗಾವಿಯ ಜನ ಜಾತ್ರೆ ಮಾಡಿ ಸಂಭ್ರಮ ಪಟ್ಟಿದ್ದಾರೆ.ಹೌದು, ಜಿಲ್ಲೆಯ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದು ಬುಧವಾರ ದೇವಿಯ ರೋಮಾಂಚನಕಾರಿ ಹೊನ್ನಾಟದೊಂದಿಗೆ ಸಂಪನ್ನಗೊಂಡಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಹೆಸರುವಾಸಿಯಾಗಿರುವ ಈ ಜಾತ್ರೆಯಲ್ಲಿ ಗ್ರಾಮದ ಮೈದಾನದಲ್ಲಿ ನಿರ್ಮಿಸಿದ್ದ ಭವ್ಯ ಮಂಟಪದ ಗದ್ದುಗೆ ಮೇಲೆ ಪ್ರತಿಷ್ಠಾಪನೆಗೊಂಡಿದ್ದ ಶ್ರೀ ಮಹಾಲಕ್ಷ್ಮೀ ದೇವಿಯ ಹೊನ್ನಾಟ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.
ಜಾತ್ರೆಗೆ ಬಂದ ಭಕ್ತರು ಕೊರೋನಾಗೂ ನಮಗೂ ಸಂಬಂಧವಿಲ್ವೇನೋ ಎಂಬಂತೆ ಹಾಯಾಗಿ ಜಾತ್ರೆ ಮಾಡಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರ ಆದೇಶಕ್ಕೂ ಯಾವುದೇ ಬೆಲೆ ಕೂಡ ಕೊಟ್ಟಿಲ್ಲ. ಈ ಜಾತ್ರೆಗೆ ಬೆಳಗಾವಿ ಜಿಲ್ಲಾಧಿಕಾರಿ ಅನುಮತಿ ಕೊಡಿದ್ದಾರಾ? ಅಲ್ಲಿ ಪೊಲೀಸರು ಯಾರು ಇರಲಿಲ್ವಾ ಎಂಬೆಲ್ಲ ಪ್ರಶ್ನೆಗಳು ಕಾಡುತ್ತಿವೆ. ಇದಕ್ಕೆಲ್ಲ ಜಿಲ್ಲಾಡಳಿತವೇ ಉತ್ತರ ನೀಡಬೇಕಿದೆ.