Asianet Suvarna News Asianet Suvarna News

ಅಷ್ಟಕ್ಕೂ ಮದುವೆಯಾದ ದಿನವೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಮೂಡಿಗೆರೆ ತಾಲೂಕಿನಲ್ಲಿ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು| ಸೋಮವಾರ ಬೆಳಗ್ಗೆ ಈ ಪ್ರೇಮಿಗಳ ಮದುವೆಯಾಗಿದ್ದು, ಪೋಷಕರ ವಿರೋಧಕ್ಕೆ ಬೇಸತ್ತು ಮಧ್ಯಾಹ್ನವೇ ವಿಷ ಕುಡಿದಿದ್ದರು. ಆದರೆ, ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾರೆ| ಇಬ್ಬರು ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು| ಇಬ್ಬರ ಮದುವೆಗೆ ನೂತನ್‌ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು|  ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಸೋಮವಾರ ಮದುವೆಯಾಗಿದ್ದರು| 

Lovers Commited to Suicide in Mudigere Taluk Chikkamagalur District
Author
Bengaluru, First Published Oct 3, 2019, 2:31 PM IST

ಚಿಕ್ಕಮಗಳೂರು(ಅ.3): ಮದುವೆಯಾದ ದಿನವೇ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಕೊಟ್ಟಿಗೆಹಾರದ ದೇವನಗೂಲ್‌ ಗ್ರಾಮದ ಬಿ.ವಿ. ಅಪೂರ್ವ (22) ಹಾಗೂ ಗೋಣಿಬೀಡಿನ ಹೊಸನಗರದ ನೂತನ್‌ (25) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಈ ಪ್ರೇಮಿಗಳ ಮದುವೆಯಾಗಿದ್ದು, ಪೋಷಕರ ವಿರೋಧಕ್ಕೆ ಬೇಸತ್ತು ಮಧ್ಯಾಹ್ನವೇ ವಿಷ ಕುಡಿದಿದ್ದರು. ಆದರೆ, ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಪ್ರತ್ಯೇಕ ಆಸ್ಪತ್ರೆಗಳಲ್ಲಿ ಸಾವು:

ಬಿ.ವಿ. ಅಪೂರ್ವ ಪದವಿ ಮುಗಿಸಿ ಮೂಡಿಗೆರೆಯ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನೂತನ್‌ ಎಲ್‌ಎಲ್‌ಬಿ ಮುಗಿಸಿದ್ದರು. ಇಬ್ಬರು ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಮದುವೆಗೆ ನೂತನ್‌ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಸೋಮವಾರ ಮದುವೆಯಾಗಿದ್ದಾರೆ. ಮನೆಯವರ ವಿರೋಧ ಸಹಿಸಲಾಗದೇ ಸೋಮವಾರವೇ ಇಬ್ಬರು ವಿಷ ಕುಡಿದು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅಪೂರ್ವ, ವಿಷ ಕುಡಿದ ಮಾಹಿತಿ ಪೋಷಕರಿಗೆ ತಿಳಿಯುತ್ತಿದ್ದಂತೆ ಮೂಡಿಗೆರೆ, ಹಾಸನ ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನೂತನ್‌ ಅವರನ್ನು ಅವರ ಪೋಷಕರು ಮಂಗಳೂರು ಎ.ಜೆ. ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಮಂಗಳವಾರ ತಡರಾತ್ರಿ ಪ್ರೇಮಿಗಳಿಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿನಲ್ಲಿ ಒಂದಾಗಿದ್ದಾರೆ. ಈ ಬಗ್ಗೆ ಬಣಕಲ್‌ ಹಾಗೂ ಗೋಣಿಬೀಡು ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
 

Follow Us:
Download App:
  • android
  • ios