Asianet Suvarna News Asianet Suvarna News

Davanagere News: ಲೋಕಾಯುಕ್ತ ಗಾಳಕ್ಕೆ ಬಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಪಿಡಿಒ ನಿಂಗಾಚಾರಿ

ಖಾಸಗಿ ಶಾಲೆಯ ಮಾನ್ಯತೆ ನವೀಕರಣಕ್ಕೆ 50 ಸಾವಿರ ರು.ಗೆ ಬೇಡಿಕೆ ಇಟ್ಟು, ತಮ್ಮ ಕಚೇರಿಯಲ್ಲೇ 15 ಸಾವಿರ ರು. ಪಡೆಯುವಾಗ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಹರಿಹರ ನಗರದಲ್ಲಿ ಗುರುವಾರ ನಡೆದಿದೆ.

Lokayukta raids  Harihara Constituent Education Officer BC Siddappa
Author
First Published Dec 30, 2022, 7:04 AM IST

ದಾವಣಗೆರೆ (ಡಿ.30) : ಖಾಸಗಿ ಶಾಲೆಯ ಮಾನ್ಯತೆ ನವೀಕರಣಕ್ಕೆ 50 ಸಾವಿರ ರು.ಗೆ ಬೇಡಿಕೆ ಇಟ್ಟು, ತಮ್ಮ ಕಚೇರಿಯಲ್ಲೇ 15 ಸಾವಿರ ರು. ಪಡೆಯುವಾಗ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಹರಿಹರ ನಗರದಲ್ಲಿ ಗುರುವಾರ ನಡೆದಿದೆ.

ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಲೋಕಾಯುಕ್ತ(Lokayukta)ರಿಗೆ ಸಿಕ್ಕಿ ಬಿದ್ದ ಆರೋಪಿ. ದುರುಗೋಜಿ ಗೋಪಾಲರಾವ್‌ ಎಜುಕೇಷನಲ್‌ ಅಂಡ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಡಿ.ಜಿ. ರಘುನಾಥ್‌ ತಮ್ಮ ಸಂಸ್ಥೆಯ ವಿದ್ಯಾದಾಯಿನಿ ಶಾಲೆಯ ಸಿಬಿಎಸ್‌ಇ ಮಾನ್ಯತೆ ನವೀಕರಣಕ್ಕಾಗಿ ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಲು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಂಪರ್ಕಿಸಿದ್ದರು.

Cover Story Impact: ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ದಾಳಿ..

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸರ್ಟಿಫಿಕೇಟ್‌ ಆಫ್‌ ರೆಕಗ್ನಾಸೇಷನ್‌ ಅಪೆಂಡಿಕ್ಸ್‌ 15 ನಮೂನೆಯಲ್ಲಿ ಭರ್ತಿ ಮಾಡಿಕೊಡಲು ಹಾಗೂ ಶಾಲಾ ಶುಲ್ಕ ನಿಗದಿಪಡಿಸಲು ರಘುನಾಥ ಮನವಿ ಮಾಡಿದ್ದರು. ಈ ಕೆಲಸವನ್ನು ಮಾಡಿಕೊಡುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ 50 ಸಾವಿರ ರು. ಗಳಿಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಡಿ.13ರಂದೇ 10 ಸಾವಿರ ರು. ಗಳನ್ನು ರಘುನಾಥ್‌ರಿಂದ ಸಿದ್ದಪ್ಪ ಪಡೆದಿದ್ದರು.

ಬಾಕಿ ಹಣ 30 ಸಾವಿರ ರು. ಗಳನ್ನು ನೀಡುವಂತೆ ಬಿಇಒ ಸಿದ್ದಪ್ಪ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿದ್ಯಾದಾಯಿನಿ ಶಾಲೆಯ ಆಡಳಿತ ಮಂಡಳಿಯ ಡಿ.ಜಿ. ರಘುನಾಥ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಸಿದ್ದಪ್ಪ 15 ಸಾವಿರ ರು. ಪಡೆಯುತ್ತಿದ್ದಾಗ ದಾಳಿ ನಡೆಸಿ, ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್ಪಿ ಎಂ.ಎಸ್‌. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ, ಪೊಲೀಸ್‌ ಇನ್ಸಪೆಕ್ಟರ್‌ಗಳಾದ ಎಚ್‌.ಎಸ್‌. ರಾಷ್ಟ್ರಪತಿ, ಎನ್‌.ಎಚ್‌. ಆಂಜನೇಯ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸದ್ಯ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪಗೆ ದಸ್ತಗಿರಿ ಮಾಡಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲೋಕಾಯುಕ್ತ ಗಾಳಕ್ಕೆ ಬಿದ್ದ ಕಕ್ಕರಗೊಳ್ಳ ಗ್ರಾಪಂ ಪಿಡಿಒ

 ದಾವಣಗೆರೆ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 2 ಲಕ್ಷ ರು. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಕಕ್ಕರಗೊಳ್ಳ ಗ್ರಾಪಂ ಪಿಡಿಒ ನಿಂಗಾಚಾರಿ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ. ನಗರದ ಬೇತೂರು ರಸ್ತೆ ನಿವಾಸಿ ಮಂಜುನಾಥ ಎಂಬುವರಿಗೆ ಇ-ಸ್ವತ್ತು ಬದಲಾಯಿಸಿಕೊಡಲು 2 ಸಾವಿರ ರು.ಗೆ ಪಿಡಿಒ ನಿಂಗಾಚಾರಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುನಾಥ ಲೋಕಾಯುಕ್ತರಿಗೆ ದೂರು ನೀಡಿದ್ದರು.

ದ.ಕ ಜಿಲ್ಲೆಯ ಮರಳು ಅಡ್ಡೆಗಳಿಗೆ ಲೋಕಾಯುಕ್ತ ದಾಳಿ: 40 ಲಕ್ಷ ಮೌಲ್ಯದ ಸೊತ್ತು ವಶ

ಇಲ್ಲಿನ ಕೊಂಡಜ್ಜಿ ರಸ್ತೆಯ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಮಂಗಳವಾರ ಸಂಜೆ ಲಂಚದ ಹಣ ಪಡೆಯುವಾಗ ಕಕ್ಕರಗೊಳ್ಳ ಗ್ರಾಪಂ ಪಿಡಿಒ ನಿಂಗಾಚಾರಿ ಲೋಕಾಯುಕ್ತ ಅಧಿಕಾರಿಗಳ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್‌.ಕೌಲಾಪುರ ನೇತೃತ್ವದಲ್ಲಿ ಡಿವೈಎಸ್ಪಿ ರಾಮಕೃಷ್ಣ, ಇನ್ಸಪೆಕ್ಟರ್‌ ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿ, 2 ಸಾವಿರ ಲಂಚ ಪಡೆಯುತ್ತಿದ್ದ ಪಿಡಿಓ ನಿಂಗಾಚಾರಿಯನ್ನು ಹಣದ ಸಮೇತ ವಶಕ್ಕೆ ಪಡೆಯಲಾಯಿತು.

Follow Us:
Download App:
  • android
  • ios