Asianet Suvarna News Asianet Suvarna News

ರಾಜಕೀಯ ಸುಧಾರಣೆಗೆ ಮಠಗಳು ಮಾರ್ಗದರ್ಶಿಯಾಗಲಿ: ಸಚಿವ ಸಿ.ಸಿ. ಪಾಟೀಲ

ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರಿಗೆ ಡಾ. ತೋಂಟದ ಸಿದ್ಧಲಿಂಗ ಶ್ರೀ ಸ್ಮಾರಕ ರಾಷ್ಟ್ರೀಯ ಪ್ರಶಸಿ ಪ್ರದಾನ

Let the Mathas Be The Guide for Political Reform Says CC Patil grg
Author
First Published Oct 7, 2022, 9:00 PM IST

ಗದಗ(ಅ.07):  ರಾಜಕೀಯ ವ್ಯವಸ್ಥೆ ಸುಧಾರಿಸಲು ಮಠಗಳ ನಿರಂತರ ಮಾರ್ಗದರ್ಶನ ಅವಶ್ಯಕವಾಗಿ ಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಗುರುವಾರ ನಗರದ ತೋಂಟದಾರ್ಯ ಮಠದ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಲಿ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 4ನೇ ಪುಣ್ಯ ಸ್ಮರಣೆ, ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

ಮತದಾನ ಮಾಡುವ ಜನರಿಗೆ ಪ್ರತಿ 5 ವರ್ಷಕ್ಕೊಮ್ಮೆ ಬುದ್ಧಿ ಕಲಿಸಲು ಅವಕಾಶವಿದ್ದರೆ, ಮಠಾಧೀಶರಿಗೆ ನಿತ್ಯವೂ ಅಂತಹ ಅವಕಾಶಗಳಿರುತ್ತವೆ. ಯಾವುದೇ ರಾಜಕಾರಣಿ ತಪ್ಪು ಮಾಡುತ್ತಿದ್ದರೆ ಅವರ ಕಿವಿ ಹಿಂಡಿ ಅವರಿಗೆ ಬುದ್ಧಿ ಹೇಳಿ ಜನಪರ ಕಾಳಜಿಯನ್ನು ನಿರಂತರವಾಗಿ ಜಾಗೃತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಆ ರೀತಿಯ ಕೆಲಸವನ್ನು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ನಿರಂತರವಾಗಿ ಮಾಡುತ್ತಿದ್ದರು.

ಕರ್ನಾಟಕ ಸಾರಿಗೆಯಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆ ಪ್ರಕರಣ: 6 ಸಿಬ್ಬಂದಿ ಮೇಲೆ ಆಪಾದನಾ ಪತ್ರ

12ನೇ ಶತಮಾನದಲ್ಲಿ ಬಸವಣ್ಣನವರು ಬಾಳಿ ಬದುಕಿದ ಹಾದಿಯಲ್ಲಿಯೇ ಲಿಂಗೈಕ್ಯ ಶ್ರೀಗಳು ಬಾಳಿದ್ದರು. ಅವರು ಯಾವುದೇ ಪಕ್ಷಗಳಿರಲಿ, ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತಮವಾದ ಮಾರ್ಗದರ್ಶನ ಮಾಡುತ್ತಿದ್ದರು. ತಪ್ಪು ಮಾಡಿದಾಗ ನಿರ್ಧಾಕ್ಷಿಣ್ಯವಾಗಿ ಹೇಳುವ ಮೂಲಕ ದಿಟ್ಟನಿಲುವು ಪ್ರದರ್ಶನ ಮಾಡುತ್ತಿದ್ದರು. ಲಿಂಗೈಕ್ಯ ಶ್ರೀಗಳ ನಡೆ, ನುಡಿಗಳು ಇಂದಿನ ಸ್ವಾಮೀಜಿಗಳು ಸೇರಿದಂತೆ ನಾಡಿನ ಎಲ್ಲರಿಗೂ ದಾರಿದೀಪವಾಗಿವೆ.

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ನಮ್ಮ ಪಾಲಕರು ಮಕ್ಕಳನ್ನು ಅಂಕಗಳನ್ನು ತೆಗೆಯುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ, ಈ ಹಿಂದೆ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗುರುಗಳನ್ನು ಮನೆಗೆ ಕರೆದು ಅವರಿಂದ ಪೂಜೆ ವಿಶೇಷ ಉಪದೇಶಗಳು ಮಂತ್ರಗಳನ್ನು ಹೇಳಿಸುತ್ತಿದ್ದರು. ಆದರೆ, ಇದು ಇಂದು ಮಾಯವಾಗಿದೆ. ಇದಕ್ಕೆ ಯಾರು ಕಾರಣ ಎಂದು ನೆರೆದಿದ್ದ ಭಕ್ತರನ್ನು ಪ್ರಶ್ನಿಸಿ, ಮಕ್ಕಳಿಗೆ ಗುರು- ಶಿಷ್ಯ ಪರಂಪರೆಯ ಅವಶ್ಯಕತೆ ಕುರಿತು ವಿವರಿಸಿದ ಅವರು, ನಮ್ಮ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿನ ಮಠಗಳ ಅಭಿವೃದ್ಧಿಗೆ .400 ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ, ತೋಂಟದಾರ್ಯ ಮಠದಲ್ಲಿ ಶ್ರೀಗಳ ಕಂಚಿನ ಪುತ್ಥಳಿ ಸ್ಥಾಪಿಸಿ ಅದಕ್ಕೆ ಹಾಗೂ ಶಿವಾನುಭವ ಮಂಟಪದಲ್ಲಿ ಶಾಶ್ವತ ಸೌಂಡ್‌ ವ್ಯವಸ್ಥೆ ಕಲ್ಪಿಸಲು ನಾನು ವೈಯಕ್ತಿಕವಾಗಿ .5 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.

ವಿಪ ಸದಸ್ಯ ಎಸ್‌.ವಿ. ಸಂಕನೂರ ಲಿಂಗೈಕ್ಯ ಶ್ರೀಗಳ ಹೋರಾಟ, ಬದುಕು, ಓದು, ಜ್ಞಾನ ಹೀಗೆ ವಿವಿಧ ವಿಷಯಗಳ ಕುರಿತು ಮಾತನಾಡಿದರು. .5 ಲಕ್ಷ ನಗದು ಫಲಕ ಒಳಗೊಂಡ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಲ್ಕಿ ಹಿರೇಮಠ ಸಂಸ್ಥಾನಮಠದ ಡಾ. ಬಸವಲಿಂಗ ಪಟ್ಟದೇವರಿಗೆ ವಿತರಿಸಲಾಯಿತು. ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಲ್ಲಮಪ್ರಭು ಮಹಾಸ್ವಾಮಿಗಳು ಚಿಂಚಣಿ-ಶಿರೋಳ, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪುರಸ್ಕೃತರಾದ ಅನ್ನಪೂರ್ಣಾತಾಯಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಕಳಕಪ್ಪ ಬಂಡಿ ಚುನಾವಣಾ ಪ್ರಚಾರ ಆರಂಭ!

ಮುಂಡರಗಿ ಹಾಗೂ ಬೈಲೂರು ಮಠದ ನಿಜಗುಣಾನಂದ ಶ್ರೀಗಳು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಆಳಂದದ ತೋಂಟದ ಸಿದ್ಧಲಿಂಗ ಶ್ರೀಗಳ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸಿಕೆರೆಯ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಬಸವಕಲ್ಯಾಣದ ಶಿವಾನಂದ ಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರೀಗಳು ಹಾಜರಿದ್ದರು.

ಮಾಜಿ ಸಚಿವ, ಹಿರಿಯ ಸಹಕಾರಿ ಮುಖಂಡ ಎಸ್‌.ಎಸ್‌. ಪಾಟೀಲ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಡಕಟ್ಟಿನ ಮುಂತಾದವರು ಹಾಜರಿದ್ದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್‌.ಎಸ್‌. ಪಟ್ಟಣಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಶ್ರೀ ಮಠದ ಭಕ್ತರು ಹಾಜರಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.
 

Latest Videos
Follow Us:
Download App:
  • android
  • ios