ಆಧಾರ್ ತಿದ್ದುಪಡಿ ಮಾಡ್ಸೋಕೆ ಬಂದವ್ರ ಮೇಲೆ ಲಾಠಿ ಪ್ರಹಾರ
ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನ ದಿನನಿತ್ಯ ಅಧಾರ್ ಸೆಂಟರ್ಗೆ ಬಂದರೂ ಕೆಲಸ ಮಾತ್ರ ವಿಳಂಬವಾಗುತ್ತಲೇ ಇತ್ತು. ಇದರಿಂದ ಕೋಪಗೊಂಡ ಸಾರ್ವಜನಿಕರು, ಆಧಾರ್ ಸೆಂಟರ್ ಆಪರೇಟರ್ ನಡುವೆ ಜಟಾಪಡಿ ನಡೆದಿದೆ. ಆಧಾರ್ ತಿದ್ದುಪಡಿ ವಿಳಂಬವಾಗಿರುವುದನ್ನು ಪ್ರಶ್ನಿಸಿದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ತುಮಕೂರು(ಆ.04): ಅಧಾರ್ ತಿದ್ದುಪಡಿ ವಿಳಂಬದ ವಿರುದ್ಧ ಅಧಾರ್ ಸೆಂಟರ್ ಆಪರೇಟರ್ ಮತ್ತು ಸಾರ್ವಜನಿಕರ ಮಧ್ಯೆ ಜಟಾಪಟಿ ನಡೆದಿದ್ದು, ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಪಾವಗಡ ತಾಲೂಕು ಕಚೇರಿಯ ಬಳಿ ನಡೆದಿದೆ.
ಆಪರೇಟರ್ಗಳ ನಿರ್ಲಕ್ಷ್ಯ:
ತಾಲೂಕು ಕಚೇರಿಯ ಅಧಿಕಾರಿ ಮತ್ತು ಅಧಾರ್ ತಿದ್ದುಪಡಿ ಅಪರೇಟರ್ಗಳ ತಪ್ಪು ಮಾಹಿತಿ ಮೇರೆಗೆ ಶನಿವಾರ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ರೈತರು, ನಾಗರಿಕರು ಸೇರಿದಂತೆ ಸಾವಿರಾರು ಮಂದಿ ಜನಸಾಮಾನ್ಯರು ಬೆಳಗ್ಗೆ 6 ಗಂಟೆಗೆ ತಾಲೂಕು ಕಚೇರಿಗೆ ಬಳಿ ಜಮಾಯಿಸಿ ಸರದಿ ಸಾಲಿನಲ್ಲಿ ನಿಂತಿದ್ದರು. ತಿದ್ದುಪಡಿಯಲ್ಲಿ ತಿಂಗಳುಗಟ್ಟಲೇ ಅಪರೇಟರ್ಗಳ ನಿರ್ಲಕ್ಷ್ಯದಿಂದ ಬೇಸತ್ತಿದ್ದ ಸಾರ್ವಜನಿಕರು ಬೆಳಗ್ಗೆ 9ಗಂಟೆಗೆ ಅಧಾರ್ ಸೆಂಟರ್ ಬಾಗಿಲು ತೆರೆಯುತ್ತಿದ್ದಂತೆ ಅಧಿಕಾರಿ ಮತ್ತು ಅಧಾರ್ ವಿಭಾಗದ ಅಪರೇಟರ್ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ ಪ್ರಸಂಗ ನಡೆದಿದೆ.
ಪೊಲೀಸರ ಮಧ್ಯಪ್ರವೇಶ:
ಇದೇ ವೇಳೆ ಅಪರೇಟರ್ ಮತ್ತು ಸಾವರ್ಜನಿಕರ ಮಧ್ಯೆ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿ ಜಟಾಪಟಿಯ ಅಬ್ಬರ ಜೋರಾಗುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಸರದಿ ಸಾಲಿನಲ್ಲಿದ್ದ ಸಾರ್ವಜನಿಕರ ಮೇಲೆ ಲಘು ಲಾಠಿ ಪ್ರಹಾರ ನಡೆಸಿರುವುದಾಗಿ ತಿಳಿದಿದೆ.
ತಾಲೂಕು ಕಚೇರಿ ಅಧಿಕಾರಿ ಮತ್ತು ಅಧಾರ್ ಸೆಂಟರ್ ಅಪರೇಟರ್ಗಳ ನಿರ್ಲಕ್ಷ್ಯದ ಪರಿಣಾಮ 6 ತಿಂಗಳಿಂದ ಅಧಾರ್ ತಿದ್ದುಪಡಿಗೆ ಅಲೆದಾಡುತ್ತಿದ್ದೇವೆ. ಅಧಾರ್ ತಿದ್ದುಪಡಿ ವಿಳಂಬದ ಪರಿಣಾಮ ಬೆಳೆವಿಮೆ, ವೃದ್ಧರು ಮತ್ತು ನಾಗರಿಕರ ಮಾಶಾಸನ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸುಮಾರು 30ರಿಂದ 40 ಕಿಮೀ ದೂರದಿಂದ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಿದ್ದು, ಇಂದು ನಾಳೆ ಎಂದು ಹೀಗೆ ಸತಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಧಾರ್ ಕೇಂದ್ರದಲ್ಲಿ ಬಡವರಿಗೆ ಬೆಲೆ ಇಲ್ಲ. ಏನಾದರೂ ವಿಚಾರಿಸಿದರೆ ಲೆಕ್ಕಕ್ಕಿಡದೆ ಉದಾಸೀನತೆ ತೋರಿ ವಾಪಸ್ಸು ಕಳುಹಿಸುತ್ತಿದ್ದಾರೆ. ನಿತ್ಯ ಪಾವಗಡಕ್ಕೆ ಅಲೆದು ಸಾಕಾಗಿದೆ. ಈ ಬಗ್ಗೆ ತಹಶೀಲ್ದಾರ್ಗೆ ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಶ್ನಿಸಿದರೆ ಪೊಲೀಸರ ದೌರ್ಜನ್ಯ:
ಅಧಾರ್ ತಿದ್ದುಪಡಿ ಮಾಡಿಕೊಡುತ್ತೇವೆ. ಅ.3ರಂದು ಬನ್ನಿ ಎಂದು ಅಧಾರ್ ಕೇಂದ್ರದ ಅಪರೇಟರ್ಗಳು ಟೋಕನ್ ನೀಡಿದ್ದಾರೆ. ಕೆಲವರಿಗೆ ಇದೇ ದಿನವೇ ಟೋಕನ್ ನೀಡುತ್ತೇವೆ ಎಂದು ಭರವಸೆ ನೀಡಿದ ಮೇರೆಗೆ ತಾಲೂಕಿನಾದ್ಯಂತ ಸಾವಿರಾರು ಮಂದಿ ಗ್ರಾಮೀಣ ಜನತೆ ಇಂದು ಪಾವಗಡಕ್ಕೆ ಆಗಮಿಸಿದ್ದೇವೆ. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಕಾಯುತ್ತಿದ್ದೇವೆ. ಬೆಳಗ್ಗೆ 9 ಗಂಟೆಗೆ ಬಾಗಿಲು ತೆರೆದ ಆಧಾರ್ ಕೇಂದ್ರದ ಅಧಿಕಾರಿಗಳು ತಿದ್ದಪಡಿಯಲ್ಲಿ ವಿಳಂಬ ಮಾಡುತ್ತಿದ್ದು, ಈ ದಿನ ಸಹ ತಿದ್ದುಪಡಿ ಮಾಡಿಕೊಡಲು ಸಾಧ್ಯವಿಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿದರೆ ಪೊಲೀಸರು ನಮ್ಮ ಮೇಲೆ ದೌಜರ್ನ್ಯಕ್ಕೆ ಮುಂದಾಗಿ ಲಾಠಿ ಪ್ರಹಾರ ಮಾಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದರು.
ಆಧಾರ್ ಲಿಂಕ್ ಆಗಿಲ್ವಾ, ಪಿಂಚಣಿ ಸಿಗಲ್ಲ!
ಆಧಾರ್ ಆಪರೇಟರ್ಗಳಿಗೆ ತಹಸೀಲ್ದಾರ್ ಎಚ್ಚರಿಕೆ
ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದ ವೇಳೆ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ವರದರಾಜು ಅಧಾರ್ ಕೇಂದ್ರದ ಆಪರೇಟರ್ಗಳಿಂದ ವಿವರ ಪಡೆದು ತಿದ್ದುಪಡಿಯ ವಿಳಂಬದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಅಪರೇಟರ್ಗಳಿಗೆ ಎಚ್ಚರಿಕೆ ನೀಡಿದರು. ನಂತರ ತಿದ್ದುಪಡಿ ಟೋಕನ್ ಪಡೆದವರಿಗೆ ಸಮಾಧಾನ ಹೇಳುವ ಮೂಲಕ ದಿನಾಂಕ ನಿಗದಿಪಡಿಸಿ ಹೊಸಬರಿಗೆ ಅಧಾರ್ ತಿದ್ದಪಡಿಯ ಟೋಕನ್ ಕೂಡಿಸಿದ್ದು ಸಮಸ್ಯೆ ನಿಯಂತ್ರಣಕ್ಕೆ ತಂದಿರುವುದಾಗಿ ತಿಳಿದಿದೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ