Asianet Suvarna News Asianet Suvarna News

ಕೈ ಕೊಟ್ಟಮಳೆರಾಯ: ಆಕಾಶದತ್ತ ಮುಖ ಮಾಡಿದ ಗುಂಡ್ಲುಪೇಟೆ ರೈತರು!

ಮುಂಗಾರು ಮಳೆಗೆ ರೈತ ಖುಷಿಯಿಂದಲೇ ಬಿತ್ತನೆ ಮಾಡಿದ್ದ. ಕಾಲ ಕಾಲಕ್ಕೆ ಮಳೆ ಬಿದ್ದು, ಉತ್ತಮ ಫಸಲು ಬರುವ ಸಮಯದಲ್ಲಿ ರೈತರಿಗೆ ಮಳೆರಾಯ ಕೈ ಕೊಟ್ಟಿದ್ದಾನೆ. ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಮಳೆಗಾಲದಲ್ಲಿ ರೈತರ ಮುಖದಲ್ಲಿ ಕಳೆ ಕಟ್ಟುವ ಬದಲು ಕಳೆಗುಂದಿದ್ದಾರೆ.

lack of monsoon rain Gundlupet farmers are worried rav
Author
First Published Jun 13, 2023, 10:25 PM IST

ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ (ಜೂ.13) : ಮುಂಗಾರು ಮಳೆಗೆ ರೈತ ಖುಷಿಯಿಂದಲೇ ಬಿತ್ತನೆ ಮಾಡಿದ್ದ. ಕಾಲ ಕಾಲಕ್ಕೆ ಮಳೆ ಬಿದ್ದು, ಉತ್ತಮ ಫಸಲು ಬರುವ ಸಮಯದಲ್ಲಿ ರೈತರಿಗೆ ಮಳೆರಾಯ ಕೈ ಕೊಟ್ಟಿದ್ದಾನೆ. ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಮಳೆಗಾಲದಲ್ಲಿ ರೈತರ ಮುಖದಲ್ಲಿ ಕಳೆ ಕಟ್ಟುವ ಬದಲು ಕಳೆಗುಂದಿದ್ದಾರೆ.

ತಾಲೂಕಿನಲ್ಲಿ ಬಹುತೇಕ ಎಲ್ಲಾ ಕಡೆ ಮುಂಗಾರು ಮಳೆಗೆ ರೈತರು ಬಿತ್ತನೆ ಮಾಡಿದ್ದರು. ಫಸಲು ವಡೆ ಕಟ್ಟುವ ಸಮಯದಲ್ಲಿ ರೈತರಿಗೆ ಉತ್ತಮ ಫಸಲು ಸಿಗಲಿದೆ ಎಂದುಕೊಂಡಿದ್ದ ರೈತರ ಭಾವನೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ.

Karnataka monsoon: ಮುಂಗಾರು ಮಳೆ ಮಂದ​ಗತಿ, ರೈತರ ಸ್ಥಿತಿ ಅಧೋ​ಗತಿ!

ಈ ಸಾಲಿನ ಮುಂಗಾರು ಮಳೆಗೆ ತಾಲೂಕಿನಲ್ಲಿ ಪ್ರಮುಖವಾಗಿ ಹತ್ತಿ, ಜೋಳ, ಸೂರ್ಯಕಾಂತಿ, ಕಡ್ಲೆಕಾಯಿ, ಮುಸುಕಿನಜೋಳ, ರಾಗಿ ಬಿತ್ತೆನೆ ಮಾಡಿದ ಬಳಿಕ ಬಿದ್ದ ಮಳೆಗೆ ಪೈರು ಉತ್ತಮವಾಗಿ ಮೇಲೆ ಬಂದಿತ್ತು.

ತಾಲೂಕಿನ ಬೇಗೂರು ಹೋಬಳಿಯಲ್ಲಿ ಸೂರ್ಯಕಾಂತಿ ಕೆಲ ಕಡೆ ಹೂವು ಬಿಟ್ಟಿವೆ. ಕೆಲ ಕಡೆ ಹೂವು ಬಿಟ್ಟಿಲ್ಲ. ಹತ್ತಿ, ಜೋಳ ಬೆಳೆವ ಹಂತದಲ್ಲಿವೆ. ಹಂಗಳ ಹಾಗೂ ತೆರಕಣಾಂಬಿ ಹೋಬಳಿಯಲ್ಲಿ ಬೆಳವಣಿಗೆ ಹಂತದಲ್ಲಿವೆ. ಆಕಾಶದತ್ತ ಮುಖ ಮಾಡಿದ್ದ ರೈತರಿಗೆ ಈ ಸಾಲಿನ ಮುಂಗಾರು, ರೈತರ ಪಾಲಿಗೆ ವರದಾನ ವಾಗಲಿದೆ ಎಂದು ನಿಟ್ಟುಸಿರು ಬಿಡುವ ವೇಳೆಗೆ ಮತ್ತೆ ಮಳೆರಾಯ ಕೈ ಕೊಟ್ಟಿದ್ದಾನೆ. ಇದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮುಂಗಾರು ಮಳೆಗೆ ರೈತರು ಈ ಬಾರಿಯೂ ಸಾಲ ಸೋಲ ಮಾಡಿ, ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದರು. ಮಳೆ ಬಿದ್ದಿದ್ದರೆ ರೈತರಿಗೆ ಭಾರಿ ಅನುಕೂಲವಾಗುವ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದು ನೋಡಿದರೆ ಮುಂದೆ ನಮ್ಮ ಪಾಡೇನು ಎಂದು ರೈತರು ಆಕಾಶದತ್ತ ನೋಡುವಂತಾಗಿದೆ.

ತೋಟಗಾರಿಗೆ ಬೆಳೆಗೂ ಮಳೆ ಬೇಕು!

ಗುಂಡ್ಲುಪೇಟೆ: ತಾಲೂಕಿ®ಲ್ಲಿ ಬೆಳೆದಿರುವ ಜೋಳ, ಹತ್ತಿ, ಸೂರ್ಯಕಾಂತಿ ಬೆಳೆಗೆ ಈಗ ಮಳೆ ಅಗತ್ಯವಾಗಿಬೇಕು. ಅಲ್ಲದೇ ತೋಟಗಾರಿಕೆ ಫಸಲಿಗೂ ಮಳೆ ಬೇಕು. ತೋಟಗಾರಿಕೆ ಬೆಳೆಗಳಾದ ಅರಿಶಿನ,ಬಾಳೆ, ಈರುಳ್ಳಿ ಸೇರಿದಂತೆ ತರಕಾರಿ ಬೆಳೆಗೂ ಮಳೆ ಬೇಕು. ತೋಟಗಾರಿಕೆ ಬೆಳೆಗೆ ಈಗ ಮಳೆ ಬಿದ್ದರೆ ರೋಗ, ರುಜಿನ, ಕೀಟಗಳ ನಿಯಂತ್ರಣ ಆಗಲಿದೆ. ತೋಟಗಾರಿಕೆ ಬೆಳೆಗೆ ಗೊಬ್ಬರ ಹಾಕುವ ಸಮಯ. ಈ ಸಮಯದಲ್ಲಿ ಮಳೆ ಬಿದ್ದರೆ ಗೊಬ್ಬರ ಸಂಪೂರ್ಣ ಕರಗಿ ಭೂಮಿ ಉತ್ಕೃಷ್ಟವಾಗಲಿದೆ ಹಾಗೂ ಮಳೆ ಬೀಳದ ಕಾರಣ ಅಂತರ್ಜಲ ಕುಸಿತವಾಗಲಿದೆ ಎಂಬ ಆತಂಕವೂ ಇದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು ಹೇಳಿದ್ದಾರೆ.

ಅಲೂಗಡ್ಡೆ ಬಿತ್ತನೆಗೆ ಬ್ರೇಕ್‌

ಗುಂಡ್ಲುಪೇಟೆ: ಆಲೂಗೆಡ್ಡೆ ಬಿತ್ತನೆಗೆ ಮಳೆ ಬೇಕಿದ್ದು, ಮಳೆ ಬೀಳದ ಕಾರಣ ರೈತರು ಆಲೂಗೆಡ್ಡೆ ಬಿತ್ತನೆ ಪೆಂಡಿಂಗ್‌ ಇಟ್ಟಿದ್ದಾರೆ. ತಾಲೂಕಿನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಆದರೆ, ಮಳೆ ಬೀಳದ ಕಾರಣ ಆಲೂಗೆಡ್ಡೆ ಬಿತ್ತನೆಗೆ ಬ್ರೇಕ್‌ ಬಿದ್ದಿದೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು ತಿಳಿಸಿದ್ದಾರೆ.

ಮಳೆ ಬಿದ್ರೂ ಇಳುವರಿ ಕುಂಠಿತ?

ಗುಂಡ್ಲುಪೇಟೆ: ಮಳೆ ಬೀಳದ ಕಾರಣ ಫಸಲಿನಲ್ಲಿ ಇಳುವರಿ ಕುಂಠಿತವಾಗಲಿದೆ. ತಾಲೂಕಿನಲ್ಲಿ 12500 ಹೆಕ್ಟೇರ್‌ ಸೂರ್ಯಕಾಂತಿ, 2900 ಹೆಕ್ಟೇರ್‌ ಹತ್ತಿ, 450 ಹೆಕ್ಟೇರ್‌ ಕಡ್ಲೇಕಾಯಿ, 8500 ಹೆಕ್ಟೇರ್‌ ಜೋಳ, 350 ಹೆಕ್ಟೇರ್‌ ಮುಸುಕಿನ ಜೋಳ ಬಿತ್ತನೆಯಾಗಿದೆ. ಕಡ್ಲೇಕಾಯಿ ಬಿತ್ತನೆ ಬೇಗೂರು, ಕಸಬಾ ಹೋಬಳಿಯಲ್ಲಿ ಆಗಿದೆ. ಹಂಗಳ ಹಾಗೂ ತೆರಕಣಾಂಬಿ ಹೋಬಳಿಯಲ್ಲಿ ಬಿತ್ತನೆಯಾಗಿಲ್ಲ.

ಶರಾವತಿ ಹಿನ್ನೀರಿನ ಕಣ್ಣೀರ ಕತೆ ದೃಶ್ಯ ಕಾವ್ಯವಾಗಿಇ ಅನಾವರಣ!

ಸೂರ್ಯಕಾಂತಿ ಹೂವು ಬಿಟ್ಟಿರುವ ಫಸಲಿಗೆ ಈಗ ಮಳೆ ಬಂದರೂ ಇಳುವರಿ ಕುಂಠಿತ. ಹೂವು ಬಿಡದ ಫಸಲಿಗೆ ಮಳೆ ಬಂದರೆ ಇಳುವರಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ಕೃಷಿ ಇಲಾಖೆಯ ಕಿರಣ್‌ಕುಮಾರ್‌ ತಿಳಿಸಿದ್ದಾರೆ.

Follow Us:
Download App:
  • android
  • ios