2022ರಲ್ಲಿ ಪರಿಷ್ಕರಿಸಬೇಕಿದ್ದ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಇನ್ನೂ ಜಾರಿಗೆ ತರದ ಕಾರಣ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸಿನಂತೆ ವೇತನವನ್ನು ತಕ್ಷಣ ಪರಿಷ್ಕರಿಸಬೇಕು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ಬಳ್ಳಾರಿ (ಮಾ.5): ರಾಜ್ಯದಲ್ಲಿ 2022ರಲ್ಲಿ ಪರಿಷ್ಕರಿಸಬೇಕಾಗಿದ್ದ ಕನಿಷ್ಠ ವೇತನವನ್ನು ಇನ್ನೂ ಜಾರಿಗೆ ತರದಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಾರ್ಮಿಕ ಸಂಘಟನೆಗಳ ಪ್ರಕಾರ, ಕನಿಷ್ಠ ವೇತನವು ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದ್ದು, ಅವರ ಕುಟುಂಬದ ಜೀವನ ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ. ಬೆಲೆ ಏರಿಕೆ ಹಾಗೂ ಹಣದುಬ್ಬರದ ಹಿನ್ನೆಲೆಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ವೇತನವನ್ನು ಪರಿಷ್ಕರಿಸಬೇಕೆಂಬ ನಿಯಮವಿದ್ದರೂ, ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.

ಕನಿಷ್ಠ ವೇತನ ಸಲಹಾ ಮಂಡಳಿ ಕೌಶಲ್ಯ ರಹಿತ ಕಾರ್ಮಿಕರಿಗೆ ಕನಿಷ್ಠ 21,000 ರಿಂದ 35,000 ರವರೆಗೆ ವೇತನ ನಿಗದಿಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಿಂದ ಲಕ್ಷಾಂತರ ಕಾರ್ಮಿಕರಲ್ಲಿ ನಿರೀಕ್ಷೆ ಮೂಡಿದರೂ, ಅಧಿಸೂಚನೆ ಹೊರಬಾರದಿರುವುದರಿಂದ ನಿರಾಶೆ ಉಂಟಾಗಿದೆ.

ಇದೇ ವೇಳೆ ಸರ್ಕಾರಿ ಇಲಾಖೆಗಳಲ್ಲೇ ವರ್ಷಗಳ ಕಾಲ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಇನ್ನೂ ಸೇವಾ ಭದ್ರತೆ ಇಲ್ಲದೆ ದಿನನಿತ್ಯ ಅಭದ್ರತೆಯಲ್ಲೇ ಕೆಲಸ ಮಾಡಬೇಕಾಗಿದೆ. ಪಿಎಫ್, ರಜೆ ಸೇರಿದಂತೆ ಕಾನೂನು ಬದ್ದ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಹರಸಾಹಸ ಪಡಬೇಕಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.