* ಜಾರಕಿಹೊಳಿಗೆ ಬಿಜೆಪಿ ಗರ್ಭಗುಡಿ ಸಂಸ್ಕೃತಿ ಹೊಂದುವುದಿಲ್ಲ: ಭಯ್ಯಾಪುರ* ರಾಜ್ಯದಲ್ಲಿ ನೋ ಯಡಿಯೂರಪ್ಪ ನೋ ಬಿಜೆಪಿ. ಇದರಲ್ಲಿ ಎರಡು ಮಾತಿಲ್ಲ * ಯಡಿಯೂರಪ್ಪ ಅವರನ್ನು ಸಿಎಂ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವ ರಮೇಶ ಜಾರಕಿಹೊಳಿ 

ಕೊಪ್ಪಳ(ಜೂ.27): ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ಗೆ ಬರಬಹುದು ಅಥವಾ ಜೆಡಿಎಸ್‌ಗಾದರೂ ಹೋಗಬಹುದು. ಆದರೆ, ಅವರಿಗೆ ಬಿಜೆಪಿ ಗರ್ಭಗುಡಿ ಸಂಸ್ಕೃತಿ ಹೊಂದುತ್ತಿಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮತ್ತು ಅವರ ಸ್ನೇಹಿತರು ಮುಂಬೈಗೆ ಹೋಗಿ, ಅಲ್ಲಿಂದ ಬಿಜೆಪಿಗೆ ಹೋಗಿದ್ದರು. ಈಗ ಅವರೆಲ್ಲರೂ ಮತ್ತೆ ಪಕ್ಷ ಬದಲಾಯಿಸಬಹುದು. ಆದರೆ, ಅವರು ಕಾಂಗ್ರೆಸ್‌ಗಾದರೂ ಬರಬಹುದು ಅಥವಾ ಜೆಡಿಎಸ್‌ ಪಕ್ಷಕ್ಕಾದರೂ ಹೋಗಬಹುದು. ರಾಜ್ಯ ರಾಜಕೀಯದಲ್ಲಿ ಯಾರು ಯಾವಾಗ ಪಕ್ಷ ಬದಲಾಯಿಸುತ್ತಾರೋ? ಯಾವ ಪಕ್ಷಕ್ಕೆ ಹೋಗುತ್ತಾರೋ? ಎನ್ನುವುದು ತಿಳಿಯದಾಗಿದೆ. ಯಾರು ಬೇಕಾದರೂ ಯಾವ ಪಕ್ಷಕ್ಕಾದರೂ ಬರಬಹುದು ಎಂದರು.

ಮೋದಿಯನ್ನ ಪ್ರಧಾನಿಯಾಗಿ ಪಡೆದಿರುವುದು ಈ ದೇಶದ ಜನರ ಪುಣ್ಯ: ಹಾಲಪ್ಪ ಆಚಾರ

ರಾಜಕಾರಣ ಎನ್ನುವುದು ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯುತ್ತಿರುತ್ತದೆ. ಅದರಲ್ಲಿ ಯಾರು ಎತ್ತ ಹರಿಯುತ್ತಾರೋ ಎಂದು ಹೇಳಲಾಗದು. ರಮೇಶ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ, ಅವರೇ ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ನಾನು ಈಗಲೂ ಹೇಳುತ್ತೇನೆ, ರಾಜ್ಯದಲ್ಲಿ ನೋ ಯಡಿಯೂರಪ್ಪ ನೋ ಬಿಜೆಪಿ. ಇದರಲ್ಲಿ ಎರಡು ಮಾತಿಲ್ಲ ಎಂದು ಪುನರುಚ್ಚರಿಸಿದರು.

ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ ವಾರ್‌ ನಡೆದಿಲ್ಲ. ಕಾಂಗ್ರೆಸ್‌ನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವವರು ಬಹಳಷ್ಟು ಜನರು ಇದ್ದಾರೆ. ಕೆಲವರ ಅಭಿಮಾನಿಗಳು ಅವರ ಹೆಸರು ಹೇಳಿದ್ದಾರೆ. ಹಾಗೆ ಹೇಳುವುದೇನೂ ಅಪರಾಧವಲ್ಲ. ಆದರೆ, ಇದರಿಂದ ನಾವು ಎಚ್ಚರವಾಗಿರಬೇಕು. ನಾವೇ ಬಿಜೆಪಿಯವರಿಗೆ ಆಹಾರವಾಗಬಾರದು ಎಂದರು.