ಕೊರೋನಾ ಕರಿ ಛಾಯೆ: ಕೂಡಲಸಂಗಮ ರಥೋತ್ಸವ ರದ್ದು
ಕೂಡಲಸಂಗಮ ಜಾತ್ರೆ ರದ್ದು ಇಂದು ನಡೆಯಬೇಕಿದ್ದ ರಥೋತ್ಸವ| ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ| ಸರ್ಕಾರದ ಆದೇಶದ ಮೇರೆಗೆ ಮಾರ್ಚ್ 17 ರಂದೇ ದೇವಾಲಯಕ್ಕೆ ಬೀಗ ಹಾಕಿ ಭಕ್ತರ ದರ್ಶನ ಸ್ಥಗಿತ| ದಾಸೋಹ ಭವನ, ಬಸವ ಸ್ಮಾರಕ, ಯಾತ್ರಿ ನಿವಾಸ, ಸಾರ್ವಜನಿಕ ಗ್ರಂಥಾಲಯ ಪ್ರವೇಶ ನಿಷೇಧ|
ಹುನಗುಂದ(ಏ.12): ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಭಾರತ ಲಾಕ್ಡೌನ್ ಮಾಡಿದ ಕಾರಣ ಇಂದು(ಏ. 12) ರಂದು ನಡೆಯಬೇಕಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಸಂಗಮೇಶ್ವರ ರಥೋತ್ಸವವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ರದ್ದು ಪಡಿಸಿದೆ.
ರಥೋತ್ಸವದ ಅಂಗವಾಗಿ ಒಂದು ವಾರದ ಕಾಲ ನಡೆಯುತ್ತಿದ್ದ ವಿವಿದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಭಕ್ತರು ಅಂದು ತಮ್ಮ ಮನೆಯಲ್ಲಿಯೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕೆ ಹೊರತು ಕೂಡಲಸಂಗಮಕ್ಕೆ ಯಾರು ಆಗಮಿಸಬಾರದು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ಮನವಿ ಮಾಡಿದ್ದಾರೆ.
ಮೂವರು ಚಿಕ್ಕ ಮಕ್ಕಳಿಗೆ ಕೊರೋನಾ: ಕರುನಾಡಲ್ಲಿ ಮುಂದುವರಿದ ರುದ್ರ ನರ್ತನ...!
ಪ್ರತಿ ವರ್ಷ ಸಂಗಮೇಶ್ವರ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಿದ್ದರು, ಜಾತ್ರೆಯ ಮುನ್ನಾ ದಿನ ಬಾಗಲಕೋಟೆಯಿಂದ ಕಾಲ್ನಡಿಗೆಯ ಮೂಲಕ ಕೂಡಲಸಂಗಮಕ್ಕೆ ಸಂಗಮೇಶ್ವರ ಬಂಗಾರದ ಕಳಸವನ್ನು ಮೆರವಣಿಗೆಯ ಮೂಲಕ ತರುತ್ತಿದ್ದರು. ಈ ಪಾದಯಾತ್ರೆಯಲ್ಲಿ 20 ರಿಂದ 30 ಸಾವಿರ ಭಕ್ತರ ಪಾಲ್ಗೊಳ್ಳುತ್ತಿದ್ದರು. ಸಂಗಮೇಶ್ವರ ರಥೋತ್ಸವಕ್ಕೆ ಬೆಳಗಲ್ಲಿನಿಂದ ಹಗ್ಗ, ಇದ್ದಲಗಿಯ ಹಿಲಾಲ, ಗಂಜಿಹಾಳದ ತರಗು ಬಾಳಿ ಕಂಬ, ನಂದಿಕೊಲು, ಗುಳೆದಗುಡ್ಡದಿಂದ ಉತ್ಸವದ ಕಳಸ ಹಾಗೂ ಪಲ್ಲಕ್ಕಿ ಬರುತ್ತಿತ್ತು. ಪ್ರಸ್ತಕ ವರ್ಷ ಈ ಎಲ್ಲ ಕಾರ್ಯಗಳನ್ನು ರದ್ದುಪಡಿಸಲಾಗಿದೆ.
ಐತಿಹಾಸಿ, ಚಾರಿತ್ರಿಕ ಹಿನ್ನೆಲೆ ಹೊಂದಿದ ಸಂಗಮೇಶ್ವರ ಜಾತ್ರೆ ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ, ಜಾತ್ರೆ ರದ್ದಾಗಿರುವುದು ಇದು ಪ್ರಥಮಬಾರಿಯಾಗಿದೆ.
ಬೀಗ ಹಾಕಿ 25 ದಿನ:
ಕೊರೋನಾ ವೈರಸ್ ಭೀತಿಯಿಂದ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನಕ್ಕೆ ಬೀಗ ಹಾಕಿ ಶನಿವಾರಕ್ಕೆ 25 ದಿನಗಳಾಗಿದೆ. ಸರ್ಕಾರದ ಆದೇಶದ ಮೇರೆಗೆ ಮಾರ್ಚ್ 17 ರಂದು ದೇವಾಲಯಕ್ಕೆ ಬೀಗ ಹಾಕಿ ಭಕ್ತರ ದರ್ಶನ ಸ್ಥಗಿತಗೊಳಿಸುವುದರ ಜೊತೆಗೆ ದಾಸೋಹ ಭವನ, ಬಸವ ಸ್ಮಾರಕ, ಯಾತ್ರಿ ನಿವಾಸ, ಸಾರ್ವಜನಿಕ ಗ್ರಂಥಾಲಯ ಪ್ರವೇಶವನ್ನು ನಿಷೇಧಿಸಲಾಗಿದೆ.