ಸಿಎಎ ಬಗ್ಗೆ ಭಯ ಪಡುವ ಅಗತ್ಯವಿಲ್ಲ| ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಿಸಿ ಜನ ಜಾಗೃತಿ ಅಭಿಯಾನದ ಬೃಹತ್‌ ಸಮಾವೇಶ| ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಪೌರತ್ವ ಜಾಗೃತಿ ಅಭಿಯಾನ|

ಜಮಖಂಡಿ(ಜ.30): ಪೌರತ್ವ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಹಾಗೂ ಕಮ್ಯುನಿಷ್ಟರು ಅಪಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಲ್ಲಿನ ಬಸವಭವನ ಮೈದಾನದಲ್ಲಿ ಬುಧವಾರ ಸಂಜೆ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿಎಎ ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಿಸಿ ಜನ ಜಾಗೃತಿ ಅಭಿಯಾನದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ಮೂರು ದೇಶಗಳ ಹಿಂದು,ಬೌದ್ಧ, ಕ್ರಿಶ್ಚಯನ್‌, ಪಾರ್ಸಿ ಸೇರಿ ಆರು ಧರ್ಮಗಳ ಜನರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿದೆ. ಮೂರು ದೇಶದಲ್ಲಿ 6 ಧರ್ಮದ ಜನರಿಗೆ ಆಂತರಿಕ ಭದ್ರತೆ, ನೆಲೆಸಲು ಉತ್ತಮ ವಾತಾವರಣ ಲಭಿಸಿದ ಹಿನ್ನೆಲೆಯಲ್ಲಿ ಅವರಿಗೆ ಭಾರತ ದೇಶದಲ್ಲಿ ಪೌರತ್ವ ನೀಡಲಾಗುತ್ತಿದೆ ಹೊರತು ದೇಶದಲ್ಲಿ ನೆಲಸಿರುವ ಜನರ ಪೌರತ್ವ ಕಸಿದುಕೊಳ್ಳುತ್ತಿಲ್ಲ ಸ್ಪಷ್ಟಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸನ್‌ 1955ರಲ್ಲಿ ಪೌರತ್ವ ಕಾಯ್ದೆ ಜಾರಿಯಾಗಿದೆ. ದೇಶದ ಜನರ ಪೌರತ್ವ ಕಿತ್ತುಕೊಳ್ಳಲು ಕಾಯ್ದೆ ಹುಟ್ಟಿಕೊಂಡಿಲ್ಲ. ಕಾಂಗ್ರೆಸ್‌ ಮತ್ತು ಕಮ್ಯುನಿಷ್ಟರು ದೇಶದಲ್ಲಿ ಜನರಲ್ಲಿ ಇಲ್ಲಸಲ್ಲದ ಮಾತುಗಳ ಮೂಲಕ ಅವರಲ್ಲಿ ಭಯದ ವಾತಾವರಣ ಸೃಷ್ಟಿಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಪೌರತ್ವ ಕಾಯ್ದೆ ಕುರಿತು ಜನರಿಗೆ ಸ್ಪಷ್ಟವಾಗಿ ಮಾಹಿತಿ ನೀಡುತ್ತಿಲ್ಲ. ದೇಶದ ಮುಸ್ಲಿಮರನ್ನು ದೇಶದಿಂದ ಹೊರಗೆ ಹಾಕಲಾಗುತ್ತಿದೆ. ನಂಬಿಕೆ ಮೂಡಿಸುತ್ತಿರುವುದರಿಂದ ಕಾಯ್ದೆ ಕುರಿತು ಅನವಶ್ಯಕ ಚರ್ಚೆಗಳು ನಡೆಯುತ್ತಿವೆ ಎಂದರು.

ದೇಶದಲ್ಲಿ 60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷಕ್ಕೆ 100 ವರ್ಷ ಆಡಳಿತ ಮಾಡಿದರೇ ಜಮ್ಮು-ಕಾಶ್ಮೀರ ಭಾರತ ಭೂಪಟದಿಂದ ಮಾಯವಾಗುತ್ತಿತ್ತು. ಕಾಂಗ್ರೆಸ್‌ ಪೌರತ್ವ ಕಾಯ್ದೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಬ್ರಿಟಿಷರಗಿಂತ ಕಾಂಗ್ರೆಸ್‌ ಪಕ್ಷ ಹೆಚ್ಚು ಲೂಟಿ ಮಾಡಿದೆ. ಭಾರತ ದೇಶದ ಮುಸ್ಲಿಮರಿಗಿಂತ ಕಾಂಗ್ರೆಸ್‌ ಪಕ್ಷ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ಭಾರತದ ವಿರೋಧಿಗಳು ಮುಸ್ಲಿಮರಲ್ಲ, ಕಾಂಗ್ರೆಸ್ಸಿನವರು. ಭಾರತ ದೇಶದ ಜನರು ಕಾಂಗ್ರೆಸ್‌ ಪಕ್ಷದ ಸುಳ್ಳುಗಳ ಮಾತುಗಳಿಗೆ ಯಾರೊಬ್ಬರು ಕಿವಿ ಕೊಡಬಾರದು. ಪೌರತ್ವ ತಿದ್ದುಪಡಿ ಮಸೂದೆಯಿಂದ ಭಾರತ ದೇಶದ ಯಾವುದೇ ಒಬ್ಬ ಮುಸ್ಲಿಂ ದೇಶದಿಂದ ಹೊರಗೆ ಹೋಗುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ ನಂತರ ವಿಶ್ವದಲ್ಲಿ ಭಾರತ ದೇಶದ ಶ್ರೇಯಸ್ಸು ಬಹಳಷ್ಟು ಬದಲಾವಣೆಯಾಗಿದೆ ಎಂದರು.

ನಗರ ಘಟಕ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮಾಂತರ ಘಟಕ ಅಧ್ಯಕ್ಷ ಮಹಾದೇವ ನ್ಯಾಮಗೌಡ ವೇದಿಕೆಯಲ್ಲಿದ್ದರು.

ಪೌರತ್ವ ತಿದ್ದುಪಡಿ ಬೃಹತ್‌ ಸಮಾವೇಶದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ವಿಪ ಸದಸ್ಯ ಜಿ.ಎಸ್‌.ನ್ಯಾಮಗೌಡ, ಬಸವರಾಜ ಯಕಂಚಿ, ಉದ್ಯಮಿ ಜಗದೀಶ ಗುಡಗುಂಟಿ, ಬಸವರಾಜ ಸಿಂಧೂರ, ಮನೋಹರ ಶಿರೋಳ, ದೇವಲ ದೇಸಾಯಿ, ಡಾ.ರಾಕೇಶ ಲಾಡ ಪಾಲ್ಗೊಂಡಿದ್ದರು.
ಮಲ್ಲು ಹುಟಗಿ ಪ್ರಾರ್ಥಿಸಿದರು. ವಕೀಲ ಚಂದ್ರಕಾಂತ ಉಪಾಧ್ಯೆ ಸ್ವಾಗತಿಸಿ-ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಮಂತರಾಯ ಬಿರಾದಾರ ನಿರೂಪಿಸಿದರು. ಅಜಯ ಕಡಪಟ್ಟಿ ವಂದಿಸಿದರು.

ಜಾಗೃತಿ ಅಭಿಯಾನ

ಕಾರ್ಯಕ್ರಮಕ್ಕೂ ಮುಂಚೆ ನಗರದ ಹಳೆ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ತಾಲೂಕಾ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿಎಎ ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಿಸಿ ಜನಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜನಜಾಗೃತಿ ಅಭಿಯಾನ ಮೆರವಣಿಗೆ ಬಸವಭವನ ವೇದಿಕೆ ತಲುಪಿತು. ಮೆರವಣಿಗೆಯಲ್ಲಿ ಬಿಜೆಪಿ ಗಣ್ಯರು,ಸಾವಿರಾರು ಕಾರ್ಯಕರ್ತರು, ವಿವಿಧ ಸಂಘಟನೆಗಳು ಸದಸ್ಯರು ಪಾಲ್ಗೊಂಡಿದ್ದರು.