ಕೆಎಸ್‌ಆರ್‌ಟಿಸಿ ನಿರ್ವಾಹಕ ತೋರಿಸಿದ ಹೆಚ್ಚಿನ ಬಡ್ಡಿ ಹಣದಾಸೆಗೆ ಬಿದ್ದ ಮಹಿಳೆಯರು ಸ್ವಂತ ಮನೆಗಳನ್ನೆ ಅಡವಿಟ್ಟು ಲಕ್ಷಾಂತರ ರು, ಸಾಲ ಮಾಡಿದ ಹಣವನ್ನು ಕೊಟ್ಟರು ಅತ್ತ ಬಡ್ಡಿಯು ಹಣವೂ ಸಿಗದೇ, ಇತ್ತ ಅಸಲು ಕೈ ಸೇರದೇ ಲಕ್ಷ ಲಕ್ಷ ಪಂಗನಾಮ 

 ಚಿಕ್ಕಬಳ್ಳಾಪುರ (ಜು.16): ಕೆಎಸ್‌ಆರ್‌ಟಿಸಿ ನಿರ್ವಾಹಕ ತೋರಿಸಿದ ಹೆಚ್ಚಿನ ಬಡ್ಡಿ ಹಣದಾಸೆಗೆ ಬಿದ್ದ ಮಹಿಳೆಯರು ತಮ್ಮ ಸ್ವಂತ ಮನೆಗಳನ್ನೆ ಅಡವಿಟ್ಟು ಲಕ್ಷಾಂತರ ರು, ಸಾಲ ಮಾಡಿದ ಹಣವನ್ನು ಕೊಟ್ಟು ಅತ್ತ ಬಡ್ಡಿಯು ಹಣವೂ ಸಿಗದೇ, ಇತ್ತ ಅಸಲು ಕೈ ಸೇರದೇ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ವಂಚನೆ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.

ಬಸ್‌ ನಿರ್ವಾಹಕನ ವಂಚನೆಯ ಜಾಲಕ್ಕೆ ಸಿಲುಕಿ ಬರೋಬ್ಬರಿ 41 ಲಕ್ಷ ರು, ಹಣ ಕಳೆದುಕೊಂಡಿರುವ ಮಹಿಳೆಯರು ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ನಿರ್ವಾಹಕ ಚಿಂತಾಮಣಿ ಮೂಲದ ರಮೇಶ್‌ಕುಮಾರ್‌ ಹಾಗು ಆತನ ಸ್ನೇಹಿತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಲಿಂಗ ಪರಿವರ್ತನೆಗೆ ಮುಂದಾಗಿದ್ದ ಯುವತಿಗೆ ಮಹಿಳೆಯಿಂದಲೇ 2 ಲಕ್ಷ ದೋಖಾ!

ಏನಿದು ಪ್ರಕರಣ?

ಚಿಕ್ಕಬಳ್ಳಾಪುರದ ನಗರದ ನಿವಾಸಿ ಅಶ್ವತ್ಥಮ್ಮ ಹಾಗೂ ಅವರ ಕೆಲವು ಸ್ನೇಹಿತರು ಆಗಾಗ ಪುಣ್ಯ ಕ್ಷೇತ್ರಗಳಿಗೆ ಹೋಗುವ ರೂಢಿ ಇತ್ತು. ಈ ವೇಳೆ 2019 ಸಾಲಿನಲ್ಲಿ ಇವರು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಕೆಎಸ್ಆರ್ಟಿಸಿ ಬಸ್‌ನಲ್ಲಿ ಹೋಗಿದ್ದಾಗ ಬಸ್‌ ನಿರ್ವಾಹಕ ಕೆ.ಜಿ.ರಮೇಶ್‌ ಕುಮಾರ್‌ ಎಂಬಾತನ ಪರಿಚಯವಾಗಿದೆ.

ಒಂದು ದಿನ ರಮೇಶ್‌ ಕುಮಾರ್‌ ಹಾಗೂ ಆತನ ಸಹೋದರ ಬಿಎಂಟಿಸಿ ನೌಕರ ಶ್ರೀನಿವಾಸ್‌ ಇಬ್ಬರೂ ಅಶ್ವತ್ಥಮ್ಮ ಮನೆಗೆ ಬಂದು ನಾವು ಚಿಂತಾಮಣಿಯಲ್ಲಿ ಲಕ್ಷಾಂತರ ರು.ಗಳ ಪೈನಾನ್ಸ್ ಮಾಡುತ್ತಿದ್ದೇವೆ. ನಿಮ್ಮ ಬಳಿ ಹಣವಿದ್ದರೆ ಕೊಡಿ ಪ್ರತಿ ತಿಂಗಳು ಹೆಚ್ಚು ಬಡ್ಡಿಕೊಡುತ್ತೇವೆ ಎಂದು ಹೇಳಿ ಅಶ್ವತ್ಥಮ್ಮರನ್ನು ನಂಬಿಸಿದ್ದಾರೆ.

ಮೈಸೂರು ರಾಜವಂಶಸ್ಥ ಎಂದು ನಂಬಿಸಿ ಯುವತಿಯರಿಗೆ ವಂಚನೆ!

ಮನೆ ಅಡವಿಟ್ಟಅಶ್ವತ್ಥಮ್ಮ: ವಂಚಕರ ಮಾತು ನಂಬಿದ ಅಶ್ವತ್ಥಮ್ಮ ತನ್ನ ಮನೆಯನ್ನು ಅಡವಿಟ್ಟು ಒಂದು ವರ್ಷದ ಒಳಗಾಗಿ ಬಿಡಿಸಿಕೊಡುವುದಾಗಿ 10 ಲಕ್ಷ ರು. ಸಾಲ ಪಡೆದು ರಮೇಶ್‌ ಕುಮಾರ್‌ಗೆ ನೀಡಿದ್ದಾಳೆ. ಅಲ್ಲದೇ ಅಶ್ವತ್ಥಮ್ಮ ಮಗ ದರ್ಶನ್‌ಗೆ ಕೆಎಸ್‌ಅರ್‌ಟಿಸಿಯಲ್ಲಿ ಕೆಲಸ ಕೊಡುವುದಾಗಿ ನಂಬಿಸಿ 5 ಲಕ್ಷ ರು, ಪಡೆದು ವಂಚಿಸಿದ್ದಾರೆ.

ಯಾರ್ಯಾರಿಗೆ ವಂಚನೆ?

ಅಶ್ವತ್ಥಮ್ಮ ಸ್ನೇಹಿತೆ ರತ್ನಮ್ಮ ಸಹ ಹೆಚ್ಚಿನ ಬಡ್ಡಿ ಹಣಕ್ಕೆ ಆಸೆಗೆ ತನ್ನ ಮನೆಯನ್ನು ಅಡವಿರಿಸಿ 10 ಲಕ್ಷ ರು. ಸಾಲ ಪಡೆದು ಕೊಟ್ಟಿದ್ದಾರೆ. ಶಾರದಾ ಎಂಬುವರಿಗೂ ಹೆಚ್ಚಿನ ಬಡ್ಡಿ ಹಣದ ಆಸೆ ತೋರಿಸಿ ಭುವನೇಶ್ವರಿ ಪೈನಾನ್ಸ್ ಬಳಿ 12,50,000 ರು, ಚೀಟಿ ಅಶ್ವತ್ಥಮ್ಮ ಮುಖಾಂತರ ಹಾಕಿಸಿ ಚೀಟಿ ಕೂಗಿ ಹಣ ಪಡೆದು ವಾಪಸ್‌ ಕೊಟ್ಟಿಲ್ಲ. ರಾಧ ಎಂಬುವರು ಮನೆ ಮಾರಿ ಕೊಟ್ಟಿದ್ದ 5 ಲಕ್ಷ ರು.ಗಳನ್ನೂ ಕಂಡೆಕ್ಟರ್‌ ರಮೇಶ್‌ ಕುಮಾರ್‌ ಹಾಗೂ ಆತನ ಸಹೋದರ ಶ್ರೀನಿವಾಸ್‌ ಗುಳುಂ ಮಾಡಿದ್ದಾರೆ.